ಪಿರಿಯಾಪಟ್ಟಣ : “ಕುಮಾರಸ್ವಾಮಿ, ಶೋಭಕ್ಕ, ಅಶೋಕ್ ಅವರೇ ನಿಮಗೆ ಬದ್ದತೆ ಇದ್ದರೆ ಕಾನೂನು ಚೌಕಟ್ಟಿನಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲು ಸಹಕಾರ ನೀಡಿ ಎಂದು ಒತ್ತಾಯಿಸುತ್ತಿದ್ದೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದರು.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ವಿವಿಧ ಇಲಾಖೆಗಳ 419.78 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ಮಾತನಾಡಿದರು.
“ವಿಪಕ್ಷಗಳದ್ದು ಬರೀ ಸುಳ್ಳು ಹೇಳುವುದು, ಟೀಕೆ ಮಾಡುವುದು, ತಪ್ಪು ದಾರಿಗೆ ಎಳೆಯುವುದು ಇದೇ ಕೆಲಸ ಮಾಡುತ್ತಿವೆ. ಬಿಜೆಪಿಯವರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿ ಅವರ ಆಡಳಿತದ ರಾಜ್ಯಗಳಲ್ಲಿ ನೀಡುತ್ತಿದ್ದಾರೆ. ಇಂತಹ ಹೊಸ ಬದಲಾವಣೆ ಸಾಧ್ಯವಾಗಿದ್ದು ಕರ್ನಾಟಕದ ಮಹಾಜನತೆಯಿಂದ” ಎಂದು ಹೇಳಿದರು.
“ಬಿಜೆಪಿಯವರು ನಮ್ಮ ಯೋಜನೆಗಳನ್ನು ನಕಲು ಮಾಡುತ್ತಿರಬಹುದು ಆದರೆ ಐದೂ ಗ್ಯಾರಂಟಿ ಯೋಜನೆಗಳನ್ನು ನೀಡಲು ಆಗದೆ ಎರಡು ಮೂರು ಯೋಜನೆಗಳನ್ನು ಮಾತ್ರ ನೀಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಂತಹ ಐದು ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಂತಹ ಯಾವುದಾದರೂ ಒಂದು ಕಾರ್ಯಕ್ರಮ ಕೊಟ್ಟಿದ್ದರಾ? ಎರಡು ಬಾರಿ ಅವಕಾಶ ಸಿಕ್ಕಿತ್ತು. ಒಂದಾದರೂ ಜನಪರ ಯೋಜನೆಗಳನ್ನು ನೀಡಲು ಸಾಧ್ಯವಾಯಿಯೇ? ಯಡಿಯೂರಪ್ಪ, ಬೊಮ್ಮಾಯಿ ಅವರಿಂದಲೂ ಸಾಧ್ಯವಾಗಲಿಲ್ಲ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು ಜನಪರ ಯೋಜನೆಗಳನ್ನು ನೀಡಲಿಲ್ಲ” ಎಂದರು.
“ಕಾವೇರಿ ಕಣಿವೆಯ ರೈತರ ಪರವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಅದೇ ರೀತಿ ಆಲಮಟ್ಟಿ ಎತ್ತರ ಹೆಚ್ಚಳದ ಸಂತ್ರಸ್ತ ರೈತರಿಗೆ 35 ಲಕ್ಷದವರೆಗೆ ಪರಿಹಾರ ನೀಡಲಾಗುತ್ತಿದೆ. ಆದರೆ ಈ ಯೋಜನೆಗೂ ಕೇಂದ್ರ ಒಪ್ಪಿಗೆ ನೀಡುತ್ತಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೂ 5,300 ಕೋಟಿ ಕೊಡುತ್ತೇವೆ ಅಂತ ಅದನ್ನೂ ನೀಡಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಬಿಜೆಪಿ ಸರ್ಕಾರಕ್ಕೆ ಆಗಿಲ್ಲ” ಎಂದರು.
ಪಿರಿಯಾಪಟ್ಟಣ ಅಭಿವೃದ್ಧಿಗೆ ಸರ್ಕಾರ ಬದ್ಧ
“ಒಕ್ಕಲಿಗರ ಸಂಘದ ಸಹಯೋಗದೊಂದಿಗೆ ಕುವೆಂಪು ಭವನವನ್ನು ನಿರ್ಮಿಸಲಾಗುತ್ತಿದೆ. ಇದು ವೆಂಕಟೇಶ್ ಅವರ ಬಹಳ ದಿನಗಳ ಕನಸಾಗಿತ್ತು. ಜನನ ಉಚಿತ ಮರಣ ಖಚಿತ. ಇದರ ನಡುವೆ ನಾವು ಏನನ್ನು ಕೊಟ್ಟು ಹೋಗುತ್ತೇವೆ ಎಂಬುದು ಮುಖ್ಯವಾಗುತ್ತದೆ. ಅದಕ್ಕೆ ಸಚಿವರಾದ ವೆಂಕಟೇಶ್ ಅವರು ಎರಡು ಕೋಟಿ ಮೌಲ್ಯದ ಭೂಮಿಯನ್ನು ಖರೀದಿ ಮಾಡಿ ಜನರ ಕಲ್ಯಾಣಕ್ಕೆ ಬಳಸಿಕೊಳ್ಳಿ ಎಂದು ತಿಳಿಸಿದ್ದಾರೆ. ಕುವೆಂಪು ಭವನ ನಿರ್ಮಾಣಕ್ಕೆ 1 ಕೋಟಿ ರೂ. ನೆರವು ನೀಡಲಾಗುವುದು. ಪಿರಿಯಾಪಟ್ಟಣ ಅಭಿವೃದ್ಧಿಗೆ ಸರ್ಕಾರ ಬದ್ಧ” ಎಂದರು.
“ಪಿರಿಯಾಪಟ್ಟಣ ಅಭಿವೃದ್ಧಿ, ಸಚಿವರಾದ ವೆಂಕಟೇಶ್ ಅವರ ಕನಸಿನ ಕೂಸು. ಕಳೆದ 40 ವರ್ಷದಿಂದ ವೆಂಕಟೇಶ್ ಅವರನ್ನು ಪಿರಿಯಾಪಟ್ಟಣದ ಜನತೆ ಸಾಕಿದ್ದಾರೆ. ಎರಡು ಬಾರಿ ಸಚಿವನನ್ನಾಗಿ ಮಾಡಿದ್ದಾರೆ. ಈ ಕ್ಷೇತ್ರದ ಜನರ ಋಣ ತೀರಿಸಬೇಕು ಎಂದು ಹತ್ತಾರು ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡುತ್ತಿದ್ದಾರೆ” ಎಂದರು.
“ರಾಜ್ಯದ ಗ್ರಾಮ ದೇವತೆ ಚಾಮುಂಡೇಶ್ವರಿ, ಪಿರಿಯಾಪಟ್ಟಣದ ಗ್ರಾಮ ದೇವತೆ ಮಸಣಿಕಮ್ಮ. ಯಾವುದೇ ಊರಿಗೆ ಹೋದರು ಗ್ರಾಮ ದೇವತೆ ಇದ್ದೇ ಇರುತ್ತಾಳೆ. ಈ ನೂತನ ದೇವಾಲಯ ವೆಂಕಟೇಶ್ ಅವರ ಕನಸು. ಚುನಾವಣೆಗೆ ಮೊದಲು ಹಾಗೂ ನಂತರ ನೀಡಿದ ಮಾತುಗಳನ್ನು ಉಳಿಸಿಕೊಂಡಿದ್ದಾರೆ. ತಾಲ್ಲೂಕಿನ ಅಭಿವೃದ್ಧಿ, ರೈತರ ಶ್ರೇಯಕ್ಕೆ ಹೊಸ ಮುನ್ನುಡಿ ಬರೆದಿದ್ದಾರೆ. ಮುಖ್ಯಮಂತ್ರಿಯಾದಿಯಾಗಿ ಸಂಪುಟದ ಸಹೋದ್ಯೋಗಿಗಳು ವೆಂಕಟೇಶ್ ಅವರ ಜೊತೆ ಹಾಗೂ ಪಿರಿಯಾಪಟ್ಟಣದ ಅಭಿವೃದ್ಧಿಗೆ ಜೊತೆಯಾಗಿ ನಿಲ್ಲುತ್ತೇವೆ ಎನ್ನುವ ಸಂದೇಶ ನೀಡಲು ಬಂದಿದ್ದೇವೆ. ಪಿರಿಯಾಪಟ್ಟಣ ಅಭಿವೃದ್ಧಿಗೆ ಸರ್ಕಾರ ಬದ್ಧ” ಎಂದು ಹೇಳಿದರು.
ಗುಣಮಟ್ಟದ ರಸ್ತೆ ನಿರ್ಮಾಣ
“ಕಳೆದ ವರ್ಷ ನಾನು ಹಾಗೂ ಮುಖ್ಯಮಂತ್ರಿಯವರು ಪಿರಿಯಾಪಟ್ಟಣದ ರೈತರ ಉದ್ಧಾರಕ್ಕಾಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದೆವು. ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಈ ಹಿಂದಿನ ಬಾರಿ ಈ ಇಲಾಖೆ ಜವಾಬ್ದಾರಿ ಹೊತ್ತಿದ್ದ ಮಹಾದೇವಪ್ಪ ಅವರ ಕಾಲದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಭರದಿಂದ ಕೆಲಸಗಳು ನಡೆದವು ಈಗಲೂ ನಡೆಯುತ್ತಿವೆ. ರಸ್ತೆಗಳ ಅಭಿವೃದ್ಧಿಗೆ ಸತೀಶ್ ಅವರು ಒತ್ತು ನೀಡಿದ್ದಾರೆ. ಇಡೀ ರಾಜ್ಯದಲ್ಲಿಯೇ ಗುಣಮಟ್ಟದ ರಸ್ತೆಗಳನ್ನು ನಾವು ನಿರ್ಮಿಸುತ್ತಿದ್ದೇವೆ. ಪ್ರತಿಯೊಂದು ಹಂತದಲ್ಲೂ ಅತ್ಯುತ್ತಮ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ನಡೆಸಿಕೊಂಡು ಬರುತ್ತಿದೆ” ಎಂದು ಹೇಳಿದರು.
“ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ಹಿಂದೆ ನಾನು ಸೋಲಾರ್ ಪಂಪ್ ಸೆಟ್ ನೀಡುವ ಯೋಜನೆ ರೂಪಿಸಿದ್ದೆ. ಈ ಮೂಲಕ ಹಗಲು ಹೊತ್ತಿನಲ್ಲಿಯೇ ರೈತರಿಗೆ ವಿದ್ಯುತ್ ನೀಡಲು ಸಾಧ್ಯ. ಇದನ್ನು ಗಮನಿಸಿದ ಕೇಂದ್ರ ಸರ್ಕಾರ ನಮಗೆ ಪ್ರಶಸ್ತಿ ನೀಡಿತ್ತು. ಅದೇ ಮಾದರಿಯಲ್ಲಿ ತಾಲ್ಲೂಕಿನ ಮೂರು ಕಡೆ ಸೋಲಾರು ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ. ಕ್ರಮವಾಗಿ 41 ಮೆಘಾ ವ್ಯಾಟ್, ಇನ್ನೊಂದು ಕಡೆ 22 ಮೆ.ವ್ಯಾ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಒಟ್ಟು 63. ಮೆ.ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ” ಎಂದರು.
“ಗ್ಯಾರಂಟಿ ಯೋಜನೆಗಳನ್ನು ನೀಡಲು ಸಾಧ್ಯವೇ ಎಂದು ವಿಪಕ್ಷಗಳು ಟೀಕೆ ಮಾಡುತ್ತಿದ್ದವು. ನಾವು ಯಶಸ್ವಿಯಾಗಿದ್ದೇವೆ. ನಮ್ಮ ಮಾದರಿಯಲ್ಲಿಯೇ 2 ಸಾವಿರ ರೂಪಾಯಿ ನೀಡುತ್ತೇವೆ ಎಂದು ಭರವಸೆ ನೀಡಿದ್ದೇವೆ. ನಾನೇ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಬಂದೆ” ಎಂದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ರಾಜ್ಯ ಸುದ್ದಿಗಳು, ರಾಜಕೀಯ, ಸುದ್ದಿಗಳು









