ಬೆಂಗಳೂರು: ಕರ್ನಾಟಕ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ನಾಯಕತ್ವ ಬದಲಾವಣೆಯ ಬೆಳವಣಿಗೆಗೆ ಕೊನೆಗೂ ಅಧಿಕೃತ ತೆರೆ ಬಿದ್ದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಯನ್ನು ತ್ಯಜಿಸಿದ್ದಾರೆ. ಹೈಕಮಾಂಡ್ ಹಾಗೂ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರ ಸಂದೇಶಕ್ಕೆ ಮನ್ನಣೆ ನೀಡಿರುವ ಅವರು, ಇಂದು ಮಧ್ಯಾಹ್ನ ಲೋಕಭವನಕ್ಕೆ ತೆರಳಿ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭು ಶಂಕರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ಇದರೊಂದಿಗೆ ಸಿದ್ದರಾಮಯ್ಯ ಅವರ ಎರಡನೇ ಅವಧಿಯ ಮೂರು ವರ್ಷಗಳ ಮುಖ್ಯಮಂತ್ರಿ ಆಡಳಿತಕ್ಕೆ ಮುಕ್ತಾಯ ಹಾಡಿದಂತಾಗಿದೆ.
ರಾಜ್ಯಪಾಲರು ಪ್ರಸ್ತುತ ಇಂದೋರ್ ಪ್ರವಾಸದಲ್ಲಿರುವ ಕಾರಣ ಅವರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಗಳು ಪತ್ರವನ್ನು ಸ್ವೀಕರಿಸಿದ್ದಾರೆ. ಸಾಂವಿಧಾನಿಕ ನಿಯಮಗಳ ಅನ್ವಯ ರಾಜ್ಯಪಾಲರು ಖುದ್ದಾಗಿ ಸಹಿ ಮಾಡಿದ ನಂತರವಷ್ಟೇ ಈ ರಾಜೀನಾಮೆ ಅಧಿಕೃತವಾಗಿ ಜಾರಿಗೆ ಬರಲಿದೆ. ಇಂದು ರಾತ್ರಿ 7:30ರ ಸುಮಾರಿಗೆ ರಾಜ್ಯಪಾಲರು ಬೆಂಗಳೂರಿಗೆ ವಾಪಸಾಗಲಿದ್ದು, ಆ ಬಳಿಕವಷ್ಟೇ ಈ ಪ್ರಕ್ರಿಯೆ ತಾಂತ್ರಿಕವಾಗಿ ಪೂರ್ಣಗೊಳ್ಳಲಿದೆ. ಈ ಮೂಲಕ ಐದು ದಶಕಗಳ ಸುದೀರ್ಘ ರಾಜಕೀಯ ಇತಿಹಾಸ ಹೊಂದಿರುವ ಹಿರಿಯ ಸಮಾಜವಾದಿ ನಾಯಕರೊಬ್ಬರ ಸಿಎಂ ಪಯಣ ಸದ್ಯಕ್ಕೆ ಮುಕ್ತಾಯಗೊಂಡಿದೆ.
ಇದಕ್ಕೂ ಮುನ್ನ ಬೆಳಗಿನ ಜಾವ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಭಾವನಾತ್ಮಕ ಸನ್ನಿವೇಶ ಸೃಷ್ಟಿಯಾಗಿತ್ತು. ಸಿದ್ದರಾಮಯ್ಯ ಅವರು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಏರ್ಪಡಿಸಿದ್ದ ವಿದಾಯದ ಉಪಹಾರ ಕೂಟದಲ್ಲಿ ಹಲವು ಮಂತ್ರಿಗಳು ಸುದೀರ್ಘ ರಾಜಕೀಯ ಹೋರಾಟದ ದಿನಗಳನ್ನು ನೆನೆದು ಕಣ್ಣೀರಿಟ್ಟರು. ಭಾವುಕರಾಗಿದ್ದ ಆಪ್ತ ನಾಯಕರಿಗೆ ಸ್ವತಃ ಸಿದ್ದರಾಮಯ್ಯ ಅವರೇ ಧೈರ್ಯ ತುಂಬಿ ಸಮಾಧಾನಪಡಿಸಿದರು. ಮಧ್ಯಾಹ್ನದ ಭೋಜನ ಮುಗಿಯುತ್ತಿದ್ದಂತೆ ನೇರವಾಗಿ ಲೋಕಭವನಕ್ಕೆ ಧಾವಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









