ಕಡಬ : ತಾಲೂಕು ಕೇಂದ್ರವಾಗಿ ರೂಪಗೊಂಡ ಬಳಿಕ ಕಡಬ ತಾಲೂಕಿನಲ್ಲಿ ನ್ಯಾಯಾಲಯ ಪ್ರಾರಂಭಿಸಬೇಕು ಎನ್ನುವ ಈ ಭಾಗದ ಬಹು ದಿನಗಳ ಬೇಡಿಕೆ ಈಡೇರುತ್ತಿದ್ದು ಜೂನ್ ೨ ನೇ ಮಂಗಳವಾರ ಕಡಬ ಗಣೇಶ್ ಬಿಲ್ಡಿಂಗ್ನಲ್ಲಿ ಎಂಬ ಖಾಸಗಿಯವರ ಕಟ್ಟಡದಲ್ಲಿ ಬಾಡಿಗೆ ನೆಲೆಯಲ್ಲಿ ನ್ಯಾಯಾಲಯ ಪ್ರಾರಂಭವಾಗಲಿದೆ.
ಶನಿವಾರ ಕಡಬಕ್ಕೆ ಆಗಮಿಸಿದ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಗಣೇಶ್ ಬಿಲ್ಡಿಂಗ್ ಎರಡನೇ ಮಹಡಿಯಲ್ಲಿ ನ್ಯಾಯಾಲಯ ಪ್ರಾರಂಭಿಸಲು ನಡೆಸಿರುವ ಸಿದ್ದತೆಗಳನ್ನು ಪರಿಶೀಲಿಸಿ ಪತ್ರಕರ್ತರೊಂದಿಗೆ ಮಾತನಾಡಿ ನ್ಯಾಯಾಲಯ ಪ್ರಾರಂಭಿಸುವ ಬಗ್ಗೆ ಮಾಹಿತಿ ನೀಡಿದರು. ಜೂನ್ 2 ರಂದು ಬಾಡಿಗೆ ಕಟ್ಟಡದಲ್ಲಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ, ನ್ಯಾಯಾಲಯ ಪ್ರಾರಂಭಿಸಲು ಬೇಕಾದ ಸಿದ್ದಗಳು ಕೊನೆಯ ಹಂತದಲ್ಲಿದೆ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಸರಿಪಡಿಸಿಕೊಂಡು ನ್ಯಾಯಲಯವನ್ನು ಅಧಿಕೃತವಾಗಿ ಪ್ರಾರಂಭಿಸಲಾಗುತ್ತದೆ. ಬಳಿಕ ವಾರದಲ್ಲಿ ಎರಡು ದಿನ ಅಂದ್ರೆ ಮಂಗಳವಾರ ಹಾಗೂ ಶುಕ್ರವಾರ ಇಲ್ಲಿ ಕಲಾಪ ನಡೆಯಲಿದೆ. ನ್ಯಾಯಾಲಯಕ್ಕೆ ಸ್ವಂತ ಕಟಟ್ಡ ನಿರ್ಮಾಣ ಮಾಡುವ ದೃಷ್ಠಿಯಿಂದ ಕಡಬ ತಾಲೂಕು ಕಚೇರಿಯ ಬಳಿ 3 ಎಕ್ರೆ ಜಾಗವನ್ನು ಮೀಸಲಿರಿಸಲಾಗಿದೆ. ನೂತನ ಕಟ್ಟಡ ನಿರ್ಮಾಣ ಆಗುವ ತನಕ ಬಾಡಿಗೆ ಕಟ್ಟದಲ್ಲೇ ಕಾರ್ಯಕಲಾಪ ನಡೆಯಲಿದೆ ಎಂದು ನ್ಯಾಯಾಧೀಶರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಡಬದ ನ್ಯಾಯವಾದಿಗಳಾದ ಲೋಕೇಶ್ ಎಂ.ಜೆ., ಶಿವಪ್ರಸಾದ್ ಪುತ್ತಿಲ, ಅಶ್ವಿತ್ ಕಂಡಿಗ, ಅವಿನಾಶ್ ಬೈತಡ್ಕ, ಕೃಷ್ಣಪ್ಪ ಗೌಡ ಕಕ್ವೆ, ಮನೋಹರ ಸಬಳೂರು, ಕೌಶಿಕ್ ಆಲಂಕಾರು, ಅರ್ಪಿತಾ ಪಿ., ಸುಮನಾ ಎಂ, ಕಟ್ಟಡ ಮಾಲೀಕ ಸುಂದರ ಗೌಡ ಮಂಡೆಕರ ಮತ್ತಿತರರು.
ದಶಕಗಳ ಕನಸು ಈಡೇರಿಕೆ:
ತಾಲೂಕು ಕೇಂದ್ರವಾದ ಕಡಬದಲ್ಲಿ ನ್ಯಾಯಾಲಯವನ್ನು ಪ್ರಾರಂಭಿಸಬೇಕೆಂಬ ಸ್ಥಳೀಯರ ಹಾಗೂ ನ್ಯಾಯವಾದಿಗಳ ಐದು ವರ್ಷಗಳ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ನ್ಯಾಯಾಲಯದ ಕಾರ್ಯಕಲಾಪಗಳಿಗಾಗಿ ದೂರದ ಪುತ್ತೂರು ಹಾಗೂ ಸುಳ್ಯಕ್ಕೆ ಅಲೆಯುವುದನ್ನು ತಪ್ಪಿಸುವ ದೃಷ್ಟಿಯಿಂದ ಕಡಬ ತಾಲೂಕು ಕೇಂದ್ರದಲ್ಲಿಯೇ ನ್ಯಾಯಾಲಯ ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಇತ್ತು. ಕಳೆದ ಎರಡು ವರ್ಷಗಳಿಂದ ಈ ಕುರಿತಾದ ಪ್ರಕ್ರಿಯೆಗಳು ನಡೆಯುತ್ತಿದ್ದು, ಈಗ ಅದಕ್ಕೆ ಅಂತಿಮ ರೂಪ ದೊರೆತಿದೆ.
ಕಡಬದ ಮಿನಿ ವಿಧಾನ ಸೌಧದ ಬಳಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕಾಗಿ ೩ ಎಕರೆ ಜಾಗವನ್ನು ಗುರುತಿಸಲಾಗಿದೆಯಾದರೂ, ಕಟ್ಟಡ ನಿರ್ಮಾಣ ಕಾರ್ಯ ವಿಳಂಬವಾಗುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಬಾಡಿಗೆ ಕಟ್ಟಡದಲ್ಲಿ ನ್ಯಾಯಾಲಯವನ್ನು ಆರಂಭಿಸಲಾಗುತ್ತಿದೆ.
ಈಗ ಬಾಡಿಗೆ ಕಟ್ಟಡದಲ್ಲಿ ಮೂಲ ಸೌಕರ್ಯಗಳ ನವೀಕರಣ ಕಾರ್ಯ ಮುಗಿದಿದೆ. ಹೈಕೋರ್ಟ್ನಿಂದ ಸಿಗಬೆಕಾದ ಅನುಮತಿ ಕೂಡಾ ಸಿಕ್ಕಿದೆ. ಇನ್ನು ಕಡಬ ತಾಲೂಕಿನ ವ್ಯಾಪ್ತಿಗೆ ಸಂಬಂಧಿಸಿದ ನ್ಯಾಯಾಲಯದ ಕಲಾಪಗಳನ್ನು ಕಡಬದಲ್ಲಿಯೇ ನಡೆಸಲಾಗುತ್ತಿದೆ. ಪ್ರಸ್ತುತ ಪುತ್ತೂರು ನ್ಯಾಯಾಲಯದಲ್ಲಿರುವ ಕಡಬ ತಾಲೂಕು ವ್ಯಾಪ್ತಿಯ ಪ್ರಕರಣಗಳ ಕಡತಗಳನ್ನು ಈಗಾಗಲೇ ಪುತ್ತೂರು ತಾಲೂಕಿನಿಂದ ಬೇರ್ಪಡಿಸಿ ಪ್ರತ್ಯೇಕಿಸಲಾಗಿದೆ ಎಂದು ತಿಳಿದು ಬಂದಿದೆ. ಹೈಕೋರ್ಟ್ ಸೂಚನೆಯಂತೆ ನವೀಕರಣ ಕಾರ್ಯ ಮುಗಿಸಲಾಗಿದ್ದು, ಕಟ್ಟಡ ಮಾಲೀಕರು ಹಾಗೂ ಜಿಲ್ಲಾಸತ್ರ ನ್ಯಾಯಾಧೀಶರ ಮಧ್ಯೆ ಒಪ್ಪಂದ ಪ್ರಕ್ರಿಯೆ ಎಲ್ಲವೂ ಮುಗಿದಿದೆ. ನ್ಯಾಯಾಲಯ ಪ್ರಾರಂಭವಾಗುವುದರಿಂದ ಕಡಬ ತಾಲೂಕಿನ ಸಾರ್ವಜನಿಕರಿಗೆ ಮತ್ತು ನ್ಯಾಯವಾದಿಗಳಿಗೆ ಬಹಳಷ್ಟು ಸಮಯ ಹಾಗೂ ಹಣದ ಉಳಿತಾಯವಾಗಲಿದ್ದು, ಸ್ಥಳೀಯವಾಗಿ ಶೀಘ್ರ ನ್ಯಾಯದಾನ ದೊರೆಯಲು ಸಹಕಾರಿಯಾಗಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಮುಂಬರುವ ಕಾರ್ಯಕ್ರಮ, ಸುದ್ದಿಗಳು









