ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಪರಿಸರದ ಹೆಸರಾಂತ ಚಲನಚಿತ್ರ ಕಲಾವಿದ, ಸಂಗೀತ ಸಂಯೋಜಕ ಹಾಗೂ ಸೃಜನಶೀಲ ಕಲಾಕಾರರಾದ ಸ್ವಾತಿ ಸತೀಶ್ (49) ಅವರು ಶನಿವಾರ ಆತ್ಮಹತ್ಯೆಗೆ ಶರಣಾಗುವ ಮೂಲಕ ಇಹಲೋಕ ತ್ಯಜಿಸಿದ್ದಾರೆ. ಕಳೆದ ಮೂರೂವರೆ ದಶಕಗಳಿಂದ ಕಲಾಕ್ಷೇತ್ರದಲ್ಲಿ ಅತ್ಯಂತ ಸಕ್ರಿಯವಾಗಿದ್ದ ಇವರು, ಮುಡಿಪುವಿನ ಮಿತ್ತಬಾರೆ ಬಳಿ ವೈಯಕ್ತಿಕ ಕಾರಣಗಳಿಂದ ಮನನೊಂದು ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ. ಶನಿವಾರ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಮುಡಿಪು ಪೇಟೆಯಲ್ಲಿ ಕಾಣಿಸಿಕೊಂಡಿದ್ದ ಅವರು, ಆ ನಂತರ ಈ ತೀವ್ರ ನಿರ್ಧಾರ ಕೈಗೊಂಡಿರುವುದು ಸ್ಥಳೀಯರಲ್ಲಿ ಅತೀವ ಆಘಾತವನ್ನುಂಟು ಮಾಡಿದೆ. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಸತೀಶ್ ಅವರು ಮುಡಿಪುವಿನಲ್ಲಿ ‘ಸ್ವಾತಿ ಆರ್ಟ್ಸ್’ ಎಂಬ ಸಂಸ್ಥೆಯ ಮೂಲಕ ಕಲಾ ಸೇವೆಯನ್ನು ಆರಂಭಿಸಿ, ಯಾವುದೇ ಔಪಚಾರಿಕ ತರಬೇತಿಯಿಲ್ಲದಿದ್ದರೂ ಸ್ವಪ್ರಯತ್ನದಿಂದ ಚಿತ್ರಕಲೆ ಮತ್ತು ಸಂಗೀತದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದರು. ನುರಿತ ಕೀಬೋರ್ಡ್ ವಾದಕರಾಗಿದ್ದ ಇವರು ಸಾವಿರಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಗೀತ ನೀಡಿದ್ದಲ್ಲದೆ, ಅನೇಕ ಯುವ ಪ್ರತಿಭೆಗಳಿಗೆ ಸಂಗೀತ ತರಬೇತಿಯನ್ನು ನೀಡುತ್ತಿದ್ದರು. ಕೇವಲ ಸಂಗೀತಕ್ಕೆ ಸೀಮಿತವಾಗದ ಇವರು, ವೇದಿಕೆಯ ಹಿನ್ನೆಲೆ ವಿನ್ಯಾಸ (ಬ್ಯಾಕ್ಡ್ರಾಪ್), ಮೇಕಪ್ ಕಲೆ, ಸಿಮೆಂಟ್ ಶಿಲ್ಪಕಲೆ ಹಾಗೂ ಕರಕುಶಲ ಕಲೆಗಳಲ್ಲಿ ಅಪಾರ ಪರಿಣತಿಯನ್ನು ಹೊಂದಿದ್ದರು. ಅವರ ಕೈಚಳಕದಲ್ಲಿ ಮೂಡಿಬಂದ ಬ್ಯಾನರ್ ವಿನ್ಯಾಸಗಳು ಕರಾವಳಿಯಾದ್ಯಂತ ಜನಮನ್ನಣೆ ಗಳಿಸಿದ್ದವು.
ಕಲಾಕ್ಷೇತ್ರದ ಮೇಲೆ ಅವರಿಗಿದ್ದ ಅಪಾರ ಪ್ರೀತಿ ಮತ್ತು ಅವರು ಬೆಳೆಸಿದ ಶಿಷ್ಯ ಬಳಗ ಇಂದು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಸ್ವಯಂ ಶಿಕ್ಷಿತ ಕಲಾವಿದನಾಗಿ ಅವರು ಕಂಡುಕೊಂಡ ದಾರಿ ನೂರಾರು ಜನರಿಗೆ ಸ್ಫೂರ್ತಿಯಾಗಿತ್ತು. ಇಂತಹ ಪ್ರತಿಭಾವಂತ ಕಲಾವಿದ ಸಾಂಸಾರಿಕ ಅಥವಾ ವೈಯಕ್ತಿಕ ಕಾರಣಗಳ ಒತ್ತಡಕ್ಕೆ ಮಣಿದು ಬದುಕನ್ನು ಅಂತ್ಯಗೊಳಿಸಿರುವುದು ಕಲಾ ಅಭಿಮಾನಿಗಳಿಗೆ ಭರಿಸಲಾಗದ ನಷ್ಟವಾಗಿದೆ. ಅವರ ನಿಧನಕ್ಕೆ ಚಿತ್ರಕಲೆ ಮತ್ತು ಸಂಗೀತ ಕ್ಷೇತ್ರದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸದ್ಯ ಮುಡಿಪು ಪರಿಸರದಲ್ಲಿ ಕಲಾ ಚೇತನವೊಂದರ ಅಸ್ತಮಯದ ಶೋಕ ಮಡುಗಟ್ಟಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









