ಮಂಗಳೂರು : ಕುಂಬಳೆಯ ಪ್ರಸಿದ್ಧ ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಶನಿವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ‘ಬೆಡಿ ಮಹೋತ್ಸವ’ (ಸಿಡಿಮದ್ದು ಪ್ರದರ್ಶನ) ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಸಾರ್ವಜನಿಕರ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಕುಂಬಳೆ ಪೊಲೀಸರು ಬೆಡಿ ಉತ್ಸವ ಸಮಿತಿಯ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಮಿತಿಯ ಅಧ್ಯಕ್ಷರಾದ ಸದಾನಂದ ಕಾಮತ್ ಕೆ., ಸದಸ್ಯರುಗಳಾದ ಲಕ್ಷ್ಮಣ ಪ್ರಭು ಕುಂಬ್ಳೆ, ಸುಧಾಕರ ಕಾಮತ್ ಮತ್ತು ದಯಾರಾಜ್ ಎಂಬವರನ್ನು ಈ ಪ್ರಕರಣದಲ್ಲಿ ಹೆಸರಿಸಲಾಗಿದೆ. ಅಲ್ಲದೆ, ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸದೆ ಸಿಡಿಮದ್ದು ಮಾರಾಟ ಮಾಡಿದ ಆರೋಪದ ಮೇಲೆ ಕಾಸರಗೋಡಿನ ಕೂಡ್ಲು ನಿವಾಸಿ ನಸೀಮ ಉದಾಸೀನಮ ಎಂಬವರ ವಿರುದ್ಧವೂ ಕೇಸು ದಾಖಲಿಸಲಾಗಿದೆ.
ಕುಂಬಳೆ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಇರುವ ಬೆಡಿಕಟ್ಟೆ ಸಮೀಪ ಈ ಪ್ರದರ್ಶನ ನಡೆದಿತ್ತು. ಸಾವಿರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದ ಸಂದರ್ಭದಲ್ಲಿ, ಯಾವುದೇ ಸುರಕ್ಷತಾ ಮಾನದಂಡಗಳನ್ನು ಅನುಸರಿಸದೆ ಅಪಾಯಕಾರಿ ರೀತಿಯಲ್ಲಿ ಸಿಡಿಮದ್ದು ಸಿಡಿಸಲಾಗಿದೆ ಎಂದು ಪೊಲೀಸರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಸಾರ್ವಜನಿಕರ ಜೀವಕ್ಕೆ ಸಂಚಕಾರ ತರುವಂತೆ ಅಜಾಗರೂಕತೆ ಪ್ರದರ್ಶಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









