ಮಂಗಳೂರು : ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ನೆಪದಲ್ಲಿ ಮುಲ್ಕಿಯ ಐತಿಹಾಸಿಕ ಬಪ್ಪನಾಡು ದೇವಸ್ಥಾನದ ಮುಂಭಾಗದಲ್ಲಿದ್ದ ಬ್ಯಾಂಕಿಂಗ್ ದೈತ್ಯ, ಸಮಾಜ ನಿರ್ಮಾತೃ ಮುಲ್ಕಿ ಸುಂದರರಾಮ್ ಶೆಟ್ಟಿ ಅವರ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ತೆರವುಗೊಳಿಸಿರುವುದನ್ನು ಮುಲ್ಕಿ ಸುಂದರರಾಮ್ ಶೆಟ್ಟಿ ಅಭಿಮಾನಿ ಬಳಗ ತೀವ್ರವಾಗಿ ಖಂಡಿಸಿದೆ. ಅವರ ಸ್ಮರಣೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಸರ್ಕಾರ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಳಗ ಒತ್ತಾಯಿಸಿದೆ.
ಶನಿವಾರ ಮಂಗಳೂರಿನ ಪತ್ರಿಕಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಅಭಿಮಾನಿ ಬಳಗದ ಪರವಾಗಿ ಮಾತನಾಡಿದ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ಅವರು, ಹೆದ್ದಾರಿ ಪ್ರಾಧಿಕಾರದ ಈ ನಡೆ ಅತ್ಯಂತ ಖೇದಕರ ಎಂದಿದ್ದಾರೆ. ಸಮಾಧಿಯನ್ನು ಕೆಡವುವ ಮುನ್ನ ಸುಂದರರಾಮ್ ಶೆಟ್ಟಿ ಅವರ ಕುಟುಂಬಸ್ಥರನ್ನಾಗಲಿ, ಸ್ಥಳೀಯರನ್ನಾಗಲಿ ಅಥವಾ ಅವರ ಅಸಂಖ್ಯಾತ ಅಭಿಮಾನಿಗಳನ್ನಾಗಲಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಕರಾವಳಿಯ ಸಾವಿರಾರು ಜನರಿಗೆ ಬ್ಯಾಂಕಿಂಗ್ ವಲಯದಲ್ಲಿ ಉದ್ಯೋಗ ನೀಡಿ, ಶಿಕ್ಷಣ ಸಂಸ್ಥೆಗಳನ್ನು ಬೆಳೆಸಿ, ಬಡವರ ಬದುಕಿಗೆ ಬೆಳಕಾದ ಮಹಾನ್ ಚೇತನದ ಸ್ಮಾರಕವನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯವಾಗಿತ್ತು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಅಭಿಮಾನಿ ಬಳಗವು ಜಿಲ್ಲಾಡಳಿತದ ಮುಂದೆ ಪ್ರಮುಖ ಬೇಡಿಕೆಗಳನ್ನು ಇಟ್ಟಿದ್ದು, ಮುಲ್ಕಿ ಅಥವಾ ಬಪ್ಪನಾಡು ಆಸುಪಾಸಿನಲ್ಲಿ ಸರ್ಕಾರ ಕನಿಷ್ಠ ಒಂದು ಎಕರೆ ಭೂಮಿಯನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿದೆ. ಈ ಜಾಗದ ಒಂದು ಭಾಗದಲ್ಲಿ ಸುಂದರರಾಮ್ ಶೆಟ್ಟಿ ಅವರ ಸಮಾಧಿಯನ್ನು ಗೌರವಪೂರ್ವಕವಾಗಿ ಮರುಸ್ಥಾಪಿಸಬೇಕು ಹಾಗೂ ಉಳಿದ ಭಾಗದಲ್ಲಿ ಕರಾವಳಿಯ ಯುವಕರಿಗಾಗಿ ಬ್ಯಾಂಕಿಂಗ್, ಐಎಎಸ್, ಕೆಎಎಸ್, ಐಪಿಎಸ್ ಸೇರಿದಂತೆ ಉನ್ನತ ನ್ಯಾಯಾಂಗ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಸುಸಜ್ಜಿತ ಕೇಂದ್ರವನ್ನು ಆರಂಭಿಸಬೇಕು ಎಂದು ಒತ್ತಾಯಿಸಲಾಗಿದೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ಬೇಡಿಕೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ಪತ್ರಿಕಾಗೋಷ್ಠಿಯಲ್ಲಿ ಅಭಿಮಾನಿ ಬಳಗದ ಪ್ರಮುಖರಾದ ನವೀನ್ ರೈ, ಬಾಲಕೃಷ್ಣ ರೈ ಹಾಗೂ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









