ನೀರು ಹಾಯಿಸದೆ ಒಣಗುತ್ತಿರುವ ಕಾಸರಗೋಡು ಸರ್ಕಲ್ ಹುಲ್ಲು ಹಾಸು

7:45 AM, Friday, January 22nd, 2016
Share
1 Star2 Stars3 Stars4 Stars5 Stars
(4 rating, 5 votes)
Loading...
crop

ಕಾಸರಗೋಡು: ಯೋಜನೆಯನ್ನು ತರಾತುರಿಯಲ್ಲಿ ಸಾಕಾರಗೊಳಿಸುವ ಸಂದಭದಲ್ಲಿ ಅದರ ಮುಂದಿನ ನಿರ್ವಹಣೆಯ ಬಗ್ಗೆ ಆಲೋಚಿಸುವುದಿಲ್ಲ. ಸರಕಾರದ ಬಹುತೇಕ ಯೋಜನೆಗಳು ಹೀಗೇ. ಯಾವುದೇ ಯೋಜನೆಗಳು ಉದ್ಘಾಟನೆಗೊಳ್ಳುತ್ತದೆ. ಆ ಬಳಿಕ ಅದರ ಪರಿಸ್ಥಿತಿ ಏನಾಯಿತು ? ಎಲ್ಲಿಗೆ ತಲುಪಿತು ? ಎಂಬ ಬಗ್ಗೆ ವೀಕ್ಷಿಸುವುದೇ ಇಲ್ಲ. ಕಚೇರಿ ಕಟ್ಟಡವಾಗಲೀ, ಪಾರ್ಕ್ ಆಗಲೀ…ಏನೇ ಆದರು ಆ ಬಳಿಕ ಅತ್ತ ಕಣ್ಣು ಹಾಯಿಸಿಯೂ ನೋಡುವುದಿಲ್ಲ. ಇಂತಹ ವಿಪರ್ಯಾಸಕ್ಕೆ ಹಲವು ಉದಾಹರಣೆಗಳು ಲಭಿಸುತ್ತದೆ. ಅವುಗಳಲ್ಲೊಂದು ಈ ಸರ್ಕಲ್.

ನಗರಸಭೆಯ ಪ್ರದೇಶವನ್ನು ಸುಂದರಗೊಳಿಸುವ ಅಂಗವಾಗಿ ಕಾಸರಗೋಡು ನಗರಸಭೆ ಹಲವು ಯೋಜನೆಗಳನ್ನು ಕೈಗೊಂಡಿದೆ. ಅವುಗಳಲ್ಲಿ ಮುಖ್ಯವಾದುದು ಪಾರ್ಕ್‌ಗಳ ನವೀಕರಣ, ಸರ್ಕಲ್ ನವೀಕರಣ, ಬಸ್ ನಿಲ್ದಾಣ ನವೀಕರಣ ಹೀಗೆ ಹಲವು ಯೋಜನೆಗಳು ನಗರಸಭೆಯ ಯೋಜನೆಗಳಾಗಿವೆ. ಈ ಯೋಜನೆಗಳ ಪೈಕಿ ನಗರದ ಮುಖ್ಯ ರಸ್ತೆಯಲ್ಲಿ ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡು ನವೀಕರಿಸಿದ ಸರ್ಕಲ್ ಕೂಡಾ ಒಂದು. ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಈ ಚಿತ್ರದಲ್ಲಿ ಕಾಣುವ ಸರ್ಕಲ್‌ನಲ್ಲಿ ಬೆಳೆದ ಹುಲ್ಲು ಹಾಸು ಒಣಗುತ್ತಿದೆ. ಹುಲ್ಲಿನ ಹಾಸು ಸದಾ ಹಸಿರಾಗಿರುವಂತೆ ಕಾಪಾಡಿಕೊಳ್ಳಲು ದಿನಾ ನೀರು ಹಾಯಿಸಬೇಕು. ದಿನಾ ಸಾಧ್ಯವಾಗದಿದ್ದರೆ ಎರಡು ದಿನಗಳಿಗೊಮ್ಮೆಯಾದರೂ ನೀರು ಹಾಯಿಸಬೇಕು. ಆದರೆ ಇಲ್ಲಿ ಈ ವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿಲ್ಲ. ಬಂದಿದ್ದರೆ ಹುಲ್ಲು ಹಾಸು ಒಣಗುತ್ತಿರಲಿಲ್ಲ. ಹುಲ್ಲು ಹಾಸು ಸದಾ ಹಸಿರಾಗಿರುವಂತೆ ನೀರು ಹಾಯಿಸಲು ನೀರಿನ ವ್ಯವಸ್ಥೆಯೂ ಇದೆ. ಆದರೆ ಇದನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬುದಕ್ಕೆ ಇಲ್ಲಿ ಒಣಗುತ್ತಿರುವ ಹುಲ್ಲು ಹಾಸು ಸ್ಪಷ್ಟ ಉದಾಹರಣೆಯಾಗಿದೆ.

ಕೆಲವು ದಿನಗಳ ಹಿಂದೆ ಕಿಡಿಗೇಡಿಗಳು ಈ ಸರ್ಕಲ್‌ಗೆ ವಾಹನವೊಂದನ್ನು ಢಿಕ್ಕಿ ಹೊಡೆಸಿ ಪರಾರಿಯಾಗಿದ್ದರು. ಈ ಕಾರಣದಿಂದ ಸರ್ಕಲ್ ಹಾನಿಗೀಡಾಗಿತ್ತು. ಸರ್ಕಲ್‌ಗೆ ಢಿಕ್ಕಿ ಹೊಡೆದು ಪರಾರಿಯಾದ ವಾಹನ ಈ ವರೆಗೂ ಸಿಕ್ಕಿಲ್ಲ. ಈ ಬಗ್ಗೆ ಪೊಲೀಸರೂ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಕಾಸರಗೋಡನ ನಗರದಲ್ಲಿ ಕಿಡಿಗೇಡಿಗಳಿಗೆ ಕಡಿಮೆಯಿಲ್ಲ. ಅಂಗಡಿಗೆ ಕಲ್ಲು ತೂರುವುದು, ಆರಾಧನಾಲಯಗಳಿಗೆ, ಶಾಲೆಗಳಿಗೆ ಕಲ್ಲು ತೂರುವುದು ಇಲ್ಲಿ ಸಾಮಾನ್ಯವಾಗಿದೆ. ಈಗ ಅಲಂಕೃತಗೊಂಡಿರುವ ಹೊಸ ಬಸ್ ನಿಲ್ದಾಣ ಸಮೀಪದ ಸರ್ಕಲ್‌ಗೆ ವಾಹನ ಢಿಕ್ಕಿ ಹೊಡೆಸಿ ಹಾನಿಗೊಳಿಸುವ ಪ್ರಕ್ರಿಯೆಗೂ ಕಿಡಿಗೇಡಿಗಳು ಮುಂದಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ, ಎಂ.ಜಿ.ರಸ್ತೆ ಸಂಗಮಿಸುವ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ನಗರದ ಸೌಂದರ್ಯವನ್ನು ಹೆಚ್ಚಿಸುವ ಸರ್ಕಲ್ ತನ್ನದೇ ಆದ ಮೇರು ಪಡೆದಿದೆ. ಈ ಸರ್ಕಲ್ ನಗರಕ್ಕೆ ಸೌಂದರ್ಯವನ್ನು ನೀಡುತ್ತಿದೆ. ಈ ಸೌಂದರ್ಯವನ್ನು ಕಾಪಿಡಲು ಹುಲ್ಲು ಹಾಸಿಗೂ ಸ್ವಲ್ಪ ಗಮನ ಹರಿಸುವುದು ಅನಿವಾರ್ಯ ಎಂಬುದರಲ್ಲಿ ಎರಡು ಮಾತಿಲ್ಲ.

ಇದೀಗ ಕಾಸರಗೋಡು ನಗರದ ಹೊಸ ಬಸ್ ನಿಲ್ದಾಣಕ್ಕೆ ಸುಣ್ಣ ಬಣ್ಣ ಬಳಿದು ರಂಗೇರಿದರೂ ನವೀಕರಣಕ್ಕೆ ಜನರು ಸ್ಪಂದಿಸುವುದಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ, ಸುಣ್ಣ ಬಣ್ಣ ಬಳಿದ ಕಂಬಗಳಿಗೆ ವೀಳ್ಯದ ಎಲೆ ತಿಂದು ಅಲ್ಲಲ್ಲಿ ಉಗುಳಿದ ಅಥವಾ ಬಸ್ ನಿಲ್ದಾಣದ ಕಂಬಗಳಿಗೆ ಕೈಯನ್ನು ಒರಸಿ ಅಂದಗೆಡಿಸಿದ್ದಾರೆ. ಈ ಬಗ್ಗೆ ನಗರಸ‘ಗೆ ಏನು ಮಾಡುವ ಹಾಗಿಲ್ಲ. ಈ ಬಗ್ಗೆ ಇಂತಹ ಮನೋಧರ್ಮದ ವ್ಯಕ್ತಿಗಳೇ ಅಂದಗೆಡಿಸಬಾರದು ಎಂಬುದನ್ನು ಅರ್ಥೈಸಿಕೊಂಡು ನಗರಸಭೆಯ ಕಾರ್ಯಗಳಿಗೆ ಸಹಕರಿಸುವುದೂ ಅಗತ್ಯವಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English