ಮಸ್ಕತ್ : ಒಮಾನಿನ ರಾಜಧಾನಿಯಾದ ಮಸ್ಕತ್ ನಗರದ ಶ್ರೀ ಗಣೇಶ ಉತ್ಸವ ಸಮಿತಿಯು ಈ ವರ್ಷ 38 ನೇ ವರ್ಷದ ಶ್ರೀ ಗಣೇಶ ಚತುರ್ಥಿ ಹಬ್ಬಾಚರಣೆಯನ್ನು ಅದ್ದೂರಿಯಿಂದ ನಡೆಸಿಕೊಟ್ಟಿತು. ಇದು ಸಮಿತಿಯ ಸದಸ್ಯರಿಗೆ ಮಾತ್ರವಲ್ಲದೆ ಮಸ್ಕತ್ತಿನ ಆಸ್ತಿಕ ಬಾಂಧವರೆಲ್ಲರಿಗೂ ಒಂದು ಹೆಮ್ಮೆಯ ವಿಷಯವಾಗಿದೆ.
ಶ್ರೀ ಗಣೇಶ ಉತ್ಸವ ಸಮಿತಿಯು ಈ ಹಿಂದೆ ” ಮಸ್ಕತ್ ತುಳುಕೂಟ” ಎಂಬ ಹೆಸರಿನಲ್ಲಿ ಪ್ರಸಿದ್ಧವಾಗಿತ್ತು. ಶ್ರೀ ಗಣೇಶ ಉತ್ಸವ ಸಮಿತಿಯು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸದಿದ್ದರೂ – ತನ್ನ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಪರಂಪರೆಯನ್ನು ಮುಂದುವರಿಸುತ್ತಲೇ ಬಂದಿದೆ
ಸಮಿತಿಯ ನಿರ್ಧಾರದಂತೆ ಹಾಗೂ ಶ್ರೀ ಗಣೇಶನ ಅನುಗ್ರಹದಿಂದ ಈ ವರ್ಷದ ಕಾರ್ಯಕ್ರಮ ದಿನಾಂಕ 31 ಆಗಸ್ಟ್ , ಸೆಪ್ಟೆಂಬರ್ 1 ಹಾಗೂ 2 ನೇ ದಿನಗಳಂದು ಮಸ್ಕತ್ತಿನ ಶಿವ ದೇವಾಲಯದ ಪ್ರಾಂಗಣದಲ್ಲಿ ಸುಸೂತ್ರವಾಗಿ ನೆರವೇರಿತು.
ಭಾರತದಿಂದ ತಾಜಾ ಹೂವಿನ ವ್ಯವಸ್ಥೆಯನ್ನು ಸಮಿತಿಯ ಸದಸ್ಯರಾದ ಶ್ರೀ ಶಶಿಧರ್ ಶೆಟ್ಟಿ ಮಲ್ಲಾರ್ ಅವರ ಸಹಕಾರದೊಂದಿಗೆ ಮಾಡಲಾಯಿತು. ಅದಲ್ಲದೆ ತಮಗೆ ವಹಿಸಿ ಕೊಡಲಾದ ಕರ್ತವ್ಯಗಳನ್ನು ಸಮಿತಿಯ ಎಲ್ಲಾ ಸದಸ್ಯರು ಅಚ್ಚುಕಟ್ಟಾಗಿ ನೆರವೇರಿಸಿದ್ದರು. ಸದಸ್ಯರು ಮತ್ತು ಸ್ವಯಂಸೇವಕರೆಲ್ಲರೂ ಹಿಂದಿನ ರಾತ್ರಿಯೇ ಒಟ್ಟು ಸೇರಿ ಪೂಜಾ ಸ್ಥಳವನ್ನು ತಾಜಾ ಹೂವುಗಳಿಂದ ಸುಂದರವಾಗಿ ಅಲಂಕರಿಸಿದ್ದು , ಸಂಪೂರ್ಣ ಪ್ರಾಂಗಣ ಹೂವುಗಳ ಸುವಾಸನೆಯಿಂದ ಕೂಡಿತ್ತು
ಶ್ರೀ ಗಣೇಶನ ಶ್ರೀಮೂರ್ತಿಯ ಪ್ರತಿಷ್ಠಾಪನೆಯೊಂದಿಗೆ ಆರಂಭವಾದ ಮೂರು ದಿನಗಳ ಕಾರ್ಯಕ್ರಮ ಸಕಲ ವೈದಿಕ ವಿಧಿ ವಿಧಾನಗಳನ್ನೊಳಗೊಂಡು ಸಂಪೂರ್ಣವಾಗಿ ಭಕ್ತಿ ಪುರಸ್ಸರ ವಾತಾವರಣದೊಂದಿಗೆ ಪ್ರಾರಂಭವಾಯಿತು. ವೇದ ಮೂರ್ತಿ ಶ್ರೀ ಶಂಕರ ನಾರಾಯಣ ಅಡಿಗರ ನೇತೃತ್ವದಲ್ಲಿ ಗಣಹೋಮ ಹಾಗೂ ಇತರೆ ಪೂಜಾ ಕಾರ್ಯಕ್ರಮಗಳು ಮಾತ್ರವಲ್ಲದೆ, ೧೦೮ ತೆಂಗಿನಕಾಯಿ ಸಮರ್ಪಣೆ, ಲಡ್ಡು ಸೇವೆ ಮುಂತಾದ ಸೇವಾ ಕಾರ್ಯಕ್ರಮಗಳನ್ನು ಕೂಡಾ ಸಮಿತಿಯ ಹಾಗೂ ಸೇವಾರ್ಥಿಗಳ ಪರವಾಗಿ ವಿದ್ಯುಕ್ತವಾಗಿ ನಡೆಸಲಾಯಿತು . ಶ್ರೀ ಗುರುರಾಜ್ ಪೆಜತ್ತಾಯ ರು ಪೂಜಾ ಕಾರ್ಯಗಳಲ್ಲಿ ಶ್ರೀ ಅಡಿಗರಿಗೆ ಉತ್ತಮ ಸಹಾಯ ಸಹಕಾರ ನೀಡಿದರು.
ಶ್ರೀ ವೈದ್ಯನಾಥನ್ ಶಿಷ್ಯರಿಂದ ವೇದ ಪಠಣ , ಓಂ ಶ್ರೀ ಗಣೇಶ ಮಂಡಳಿ ತಂಡದವರಿಂದ ಗಣೇಶ ಸಹಸ್ರನಾಮ ಪಠಣ, ಸುಶ್ರಾವ್ಯ ಭಜನೆ ,ಶ್ರೀ ಗಣೇಶ ಪಂಚರತ್ನ ಗಾಯನ, ಮುಂತಾದವುಗಳಲ್ಲೂ ಸದಸ್ಯರು ಹಾಗೂ ಅವರ ಕುಟುಂಬ ವರ್ಗದವರು, ಅನೇಕ ಭಜನಾ ಮಂಡಳಿಗಳು, ನೃತ್ಯ ಸಂಯೋಜಕರು ಭಾಗವಹಿಸಿ ಶ್ರೀ ಗಣೇಶನ ಕೃಪೆಗೆ ಪಾತ್ರರಾದರು.
ಮಸ್ಕತ್ತಿನ ಓಂ ಶ್ರೀ ಗಣೇಶ ವೃಂದ, ಚಿನ್ಮಯ ಬಾಲ ವಿಹಾರ, ಇಸ್ಕಾನ್ ತಂಡ,ಮಾತಾ ಅಮೃತಾನಂದಮಯಿ ಭಜನಾ ಮಂಡಳಿ, ಡಿವೈನ್ ಸ್ಪಾರ್ಕ್ ತಂಡ, ಮುಕ್ತ ಕಲಾಲ್ ಹಾಗೂ ತಂಡ, ಶ್ರೀಮತಿ ಸ್ವರ್ಣಲತಾ ಹೆಬ್ಬಾರ್, ಶ್ರೀಮತಿ ಐಶ್ವರ್ಯ ಹರಿ, ಟವೆಲ್ ಭಜನಾ ತಂಡ, ಆರ್ಟ್ ಆಫ್ ಲಿವಿಂಗ್ ತಂಡ, ಮಸ್ಕತ್ ಜಿ ಎಸ್ ಬಿ ಭಜನಾ ತಂಡ, ಶ್ರೀ ಸತ್ಯ ಸಾಯಿ ಭಕ್ತರ ತಂಡ, ಕುಮಾರಿ ಶ್ರೇಯಾ ಹಾಗೂ ತಂಡ, ಶ್ರೀಮತಿ ನಳಿನಿ ಕಣ್ಣನ್ ಶಿಷ್ಯರು, ಭಕ್ತಿ ಲಹರಿ ಮಕ್ಕಳ ತಂಡ, ಶ್ರೀ ಕಾಂತಿ ಭಾಯಿ ಚಾವಡಾ , ಶ್ರೀಮತಿ ಜಯಶ್ರೀ ಹಾಗೂ ಶಿಷ್ಯರು, ಕೇರಳ ಜಿ ಎಸ್ ಬಿ ತಂಡ ಮುಂತಾದ ಭಕ್ತವೃಂದಗಳು ಮೂರೂ ದಿನಗಳ ಭಜನಾ ಕಾರ್ಯಕ್ರಮಗಲ್ಲಿ ಸಕ್ರಿಯವಾಗಿ ಭಾಗವಹಿಸಿದವು. ಅದಲ್ಲದೆ ಶ್ರೀಮತಿ ಪ್ರಮೀಳಾ ರಮೇಶ್ ಹಾಗೂ ಶ್ರೀಮತಿ ತೀರ್ಥ ಕಟೀಲ್ ಇವರುಗಳು ಶ್ರೀ ಮೂರ್ತಿಯ ಸನ್ನಿಧಾನದಲ್ಲಿ ನೃತ್ಯ ಪ್ರದರ್ಶನ ಮಾಡಿ ಕೃತಾರ್ಥರಾದರು. ಶ್ರೀಮತಿ ಧನ್ಯಾ ರತೀಶ್ ಇವರು ತಮ್ಮ ಶಿಷ್ಯರಿಂದೊಡಗೂಡಿ ವೀಣೆಯ ವೃಂದ ವಾದನ ನೆರವೇರಿಸಿದ್ದು ಒಂದು ವಿಶೇಷವಾಗಿತ್ತು.
ಮೂರೂ ದಿನಗಳು ನಡೆದ ಈ ಎಲ್ಲಾ ಕಾರ್ಯಕ್ರಮಗಳು ಆಸ್ತಿಕರಿಗೆ ಸಂಗೀತ – ನೃತ್ಯದ ರಸದೌತಣವನ್ನಲ್ಲದೆ, ಅದ್ಭುತ ಭಕ್ತಿಭಾವದ ವಾತಾವರಣವನ್ನೇ ನಿರ್ಮಿಸಿದ್ದವು.
ಎಲ್ಲಾ ಮೂರೂ ದಿನಗಳಂದು ಮಧ್ಯಾಹ್ನದ ಮಹಾ ಮಂಗಳಾರತಿ ಹಾಗೂ ರಾತ್ರಿಯ ಮಹಾ ಮಂಗಳಾರತಿ, ರಂಗಪೂಜೆ ನಡೆಯಿತು. ಮೂರನೇ ದಿನ ಮಹಾ ಮಂಗಳಾರತಿ, ಪುಷ್ಪಾರ್ಚನೆಗಳ ನಂತರ ಶ್ರೀ ಗಣೇಶನ ಶ್ರೀಮೂರ್ತಿಯ ವಿದ್ಯುಕ್ತ ವಿಸರ್ಜನೆ ಕಾರ್ಯಕ್ರಮ ನಡೆಯಿತು.
ಪ್ರತಿ ದಿನವೂ ಮಧ್ಯಾಹ್ನ ಹಾಗೂ ರಾತ್ರಿ – ಈ ಎರಡೂ ಹೊತ್ತಿನ ಹಬ್ಬದ ಭೋಜನ ವ್ಯವಸ್ಥೆಯನ್ನೂ ಕೂಡಾ ಮಾಡಲಾಗಿತ್ತು.
ಒಮಾನಿನಲ್ಲಿ ಭಾರತದ ರಾಯಭಾರಿಯಾಗಿರುವ ಶ್ರೀ ಅಮಿತ್ ನಾರಂಗ್ ಅವರು ತಮ್ಮ ಧರ್ಮ ಪತ್ನಿಯೊಂದಿಗೆ ಈ ಕಾರ್ಯಕ್ರಮಕ್ಕೆ ಆಗಮಿಸಿ ಮಸ್ಕತ್ ಗಣೇಶೋತ್ಸವದ ಶೋಭೆಯನ್ನು ಮತ್ತಷ್ಟು ಹೆಚ್ಚಿಸಿದರು . ಅದಲ್ಲದೆ ಒಮಾನ್ ದೇಶದ ಅನೇಕ ಗಣ್ಯ ವ್ಯಕ್ತಿಗಳು ಈ ವರ್ಷದ ಕಾರ್ಯಕ್ರಮದಲ್ಲಿ ಭಕ್ತಿಯಿಂದ ಭಾಗವಹಿಸಿದರು
ಶ್ರೀ ಗಣೇಶ ಉತ್ಸವ ಸಮಿತಿಯು – ಶ್ರೀ ಎಸ್ . ಕೆ . ಪೂಜಾರಿ(ಅಧ್ಯಕ್ಷರು) ಇವರ ನೇತೃತ್ವದಲ್ಲಿ , ಸದಸ್ಯರಾದ ಶ್ರೀ ಶಶಿಧರ್ ಶೆಟ್ಟಿ ಮಲ್ಲಾರ್ , ಶ್ರೀ ಉಮೇಶ್ ಬಂಟ್ವಾಳ್, ಶ್ರೀ ಕರುಣಾಕರ್ ರಾವ್, ಶ್ರೀ ನಾಗೇಶ್ ಶೆಟ್ಟಿ, ಡಾಕ್ಟರ್ ಶ್ರೀ ಸೀ.ಕೆ. ಅಂಚನ್, ಶ್ರೀ ರವಿ ಕಾಂಚನ್ ,ಶ್ರೀ ಮಂಗಲ್ ದಾಸ್ ಕಾಮತ್ , ಶ್ರೀ ಗುರುದಾಸ್ ಪೆಜತ್ತಾಯ ಇವರೆಲ್ಲರ ಸಹಕಾರದೊಂದಿಗೆ ಈ ವರ್ಷದ ಗಣೇಶೋತ್ಸವನ್ನು ವಿಜೃಂಭಣೆಯಿಂದ ನೆರವೇರಿಸಿತು .ಅದಲ್ಲದೆ ಈ ವರ್ಷ ಶ್ರೀ ದೇವಾನಂದ್ ಕೆ ಅಮೀನ್ ಹಾಗೂ ಶ್ರೀ ಸುಕುಮಾರ್ ಅಂಚನ್ ಇವರುಗಳು ಹೊಸದಾಗಿ ಶ್ರೀ ಗಣೇಶ ಉತ್ಸವ ಸಮಿತಿಯ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ.
ಮಸ್ಕತ್ತಿನಲ್ಲಿ ಶ್ರೀ ಗಣೇಶ ಚತುರ್ಥಿಯ ಉತ್ಸವವನ್ನು ಎರಡು ವರ್ಷಗಳ ನಂತರ ಈ ಬಾರಿ ಸಾರ್ವಜನಿಕವಾಗಿ , ವಿಧಿ ವಿಧಾನಗಳೊಂದಿಗೆ, ವಿಜೃಂಭಣೆಯಿಂದ ನೆರವೇರಿಸಿ ಶ್ರೀ ಗಣೇಶೋತ್ಸವ ಸಮಿತಿಯ ಸದಸ್ಯರೆಲ್ಲರೂ ಧನ್ಯತಾ ಭಾವದಿಂದ ಬೀಗುವುದನ್ನು ಕಾಣಬಹುದಿತ್ತು.
ವರದಿ : ಕರುಣಾಕರ್ ರಾವ್.