ರಾಜ್ಯ ಮತ್ತು ಜಿಲ್ಲಾ ಹೆದ್ದಾರಿ ಗುಂಡಿ ಮುಚ್ಚಲು ಒಂದು ಕಿ.ಮೀ.ಗೆ 25-30 ಸಾವಿರ ರೂಪಾಯಿ ಬಿಡುಗಡೆ: ಹೆಚ್.ಡಿ.ರೇವಣ್ಣ

6:25 PM, Thursday, June 21st, 2018
Share
1 Star2 Stars3 Stars4 Stars5 Stars
(No Ratings Yet)
Loading...

H-D-Revannaಬೆಂಗಳೂರು: ರಾಜ್ಯ ಮತ್ತು ಜಿಲ್ಲಾ ಹೆದ್ದಾರಿ ಗುಂಡಿ ಮುಚ್ಚಲು ಒಂದು ಕಿ.ಮೀ.ಗೆ 25-30 ಸಾವಿರ ರೂಪಾಯಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸದ್ಯ ಜಲ್ಲಿ ಹಾಕಿ ಮುಚ್ಚಲಾಗುವುದು. ಮಳೆಗಾಲ ಬಳಿಕ ಅದಕ್ಕೆ ಟಾರ್ ಹಾಕಲಾಗುವುದು. ಈ ನಿಟ್ಟಿನಿಲ್ಲಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.

ರಸ್ತೆ ಗುಂಡಿಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಪ್ರದಾನ ಕಾರ್ಯದರ್ಶಿ, ಚೀಫ್ ಇಂಜಿನಿಯರ್‌ಗಳ ಜೊತೆ ಸಭೆ ಮಾಡಿದ್ದೇನೆ. ಹುಬ್ಬಳ್ಳಿ, ಗದಗ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಮಂಗಳೂರು, ಉಡುಪಿ ಜಿಲ್ಲೆಗಳ ಪ್ರವಾಸ ಮಾಡಿದ್ದೇನೆ. ಎಲ್ಲಾ ಕಡೆ ಒಳ್ಳೆಯ ಮಳೆ ಆಗುತ್ತಿದೆ. ಎಲ್ಲಾ ಕಡೆ ರಸ್ತೆ ಗುಂಡಿ ಮುಚ್ಚುವುದಕ್ಕೆ ಅನುದಾನ ನೀಡಿದ್ದೇವೆ. ಸೇತುವೆಗಳ ಮರು ನಿರ್ಮಾಣಕ್ಕೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಹಣ ಎಷ್ಟೇ ಖರ್ಚಾದರೂ ಸರಿಯೇ ರಸ್ತೆ ದುರಸ್ತಿ ಮಾಡುವಂತೆ ಸೂಚಿಸಲಾಗಿದೆ. ಮಳೆಯಿಂದ ಸಂಪೂರ್ಣ ಹಾಳಾಗಿರುವ ಮಡಿಕೇರಿ-ತಲಚೇರಿ ರಸ್ತೆಯನ್ನು ಎರಡು ದಿನಗಳಲ್ಲಿ ದುರಸ್ತಿ ಮಾಡಿ ಸಂಚಾರ ಯೋಗ್ಯವನ್ನಾಗಿ ಮಾಡುವಂತೆ ಆದೇಶಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮಡಿಕೇರಿಯಿಂದ ಕೇರಳ ಹೋಗುವ ತಲಚೇರಿ ರಸ್ತೆ ಸಂಪೂರ್ಣ ಹಾಳಾಗಿದ್ದು, ಅದನ್ನು ಕೂಡಲೇ ಸರಿಪಡಿಸುವಂತೆ ತಿಳಿಸಿದ್ದೇನೆ. ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿಗಳಿಗೆ ಹಣ ಬಿಡುಗಡೆಯಾಗಿದೆ. ಮಳೆಗಾಲ ಮುಗಿದ ಮೇಲೆ ಟಾರ್ ಹಾಕಲು ಸೂಚನೆ ನೀಡಲಾಗಿದೆ. ಪೆಟ್ರೋಲಿಂಗ್ ಜೀಪ್‌ಗಳನ್ನ ಕಾಯ್ದಿರಿಸಲಾಗುತ್ತೆ. ಹೆಚ್ಚು ನೀರು ಹರಿಯೋ ರಸ್ತೆಗಳಲ್ಲಿ ಪೆಟ್ರೋಲಿಂಗ್ ಜೀಪ್ ತಪಾಸಣೆ ಮಾಡಲಾಗಿದೆ. ಮಡಿಕೇರಿಯಿಂದ ಕೇರಳಕ್ಕೆ ಹೋಗೋ ರಸ್ತೆ ಕೊಚ್ಚಿ ಹೋಗಿದ್ದು, ಅದನ್ನು ಸರಿಪಡಿಸಲೂ ಸೂಚಿಸಿದ್ದೇನೆ. ಕೇರಳ ಸಿಎಂಗೂ ಈ ಬಗ್ಗೆ ಪತ್ರ ಬರೆಯುತ್ತೇನೆ ಎಂದು ಲೋಕೋಪಯೋಗಿ ಸಚಿವ ರೇವಣ್ಣ ತಿಳಿಸಿದ್ದಾರೆ.

ಚಾರ್ಮಾಡಿ, ಶಿರಾಡಿ ಘಾಟ್ ಮತ್ತು ಸಂಪಾಜೆ, ಬಿಸ್ಲೆ ಫಾಲ್ಸ್ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಾಗಿವೆ. ಇದಕ್ಕೆ ಶಾಶ್ವತ ಪರಿಹಾರ ಹುಡುಕಬೇಕಾಗಿದೆ. ಉತ್ತರಖಾಂಡ್ ರಾಜ್ಯದ ರೀತಿಯಲ್ಲಿ ಸುರಂಗ ಮಾರ್ಗ ರಸ್ತೆ ನಿರ್ಮಿಸಲು ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿ ವರದಿ ತರಿಸಲಾಗುವುದು ಎಂದು ವಿವರಿಸಿದರು.

ಸಾಲ ಮನ್ನಾಗೆ ನಮ್ಮ ಬದ್ಧತೆ ಇದೆ. ಕೇಂದ್ರ ಸರ್ಕಾರ ಅನುದಾನ ನೀಡುತ್ತೊ ಇಲ್ಲವೋ ಗೊತ್ತಿಲ್ಲ. ರೈತರ ಸಾಲ ಮನ್ನಾ ಮಾಡುವುದು ನಮ್ಮ ಧರ್ಮ ಎಂದು ಇದೇ ವೇಳೆ ಹೆಚ್.ಡಿ.ರೇವಣ್ಣ ಸ್ಪಷ್ಟಪಡಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English