ಸ್ಫೋಟಕ ಮಾಹಿತಿ: ಪ್ರಣಯ್ ಹತ್ಯೆಗೆ 4 ಬಾರಿ ಸಂಚು ರೂಪಿಸಲಾಗಿತ್ತು..!

5:08 PM, Wednesday, September 19th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

pranayತೆಲಂಗಾಣ: ತೆಲಂಗಾಣದ ಮಿರ್ಯಾಲಗುಡದಲ್ಲಿ ಗರ್ಭಿಣಿ ಪತ್ನಿ ಅಮೃತಾಳ ಎದುರಲ್ಲೇ ನಡೆದ ಪ್ರಣಯ್ ಎಂಬ ಯುವಕನ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ದಿನೇ ದಿನೇ ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿವೆ. ಅಮೃತಾ ಮತ್ತು ಪ್ರಣಯ್ ರ ಅಂತರ್ಜಾತೀಯ ವಿವಾಹಕ್ಕೆ ವಿರುದ್ಧವಾಗಿ ನಡೆದಿರುವ ಭೀಕರ ಹತ್ಯೆ ಇಡೀ ರಾಜ್ಯವನ್ನೇ ನಡುಗಿಸಿದೆ. ಇಡೀ ತೆಲಂಗಾಣ ರಾಜ್ಯದಾದ್ಯಂತ ಪ್ರತಿಭಟನೆ ಮುಗಿಲು ಮುಟ್ಟುತ್ತಿದ್ದಂತೆ,ಪ್ರಕರಣಕ್ಕೆ ಭಾಗಿಯಾಗಿರುವ ಪ್ರಮುಖ ಆರೋಪಿ ಪ್ರಣಯ್ ಅವರ ಮಾವ(ಪತ್ನಿಯ ತಂದೆ) ಮಾರುತಿ ರಾವ್ ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದ ಪೊಲೀಸರಿಗೆ ಪ್ರಣಯ್ ಹತ್ಯೆಗೆ ಸಂಬಂಧಿಸಿದ ಸ್ಫೋಟಕ ಮಾಹಿತಿಗಳು ಲಭ್ಯವಾಗಿದ್ದು, ಪ್ರಣಯ್ ಹತ್ಯೆಗೆ ಸೆಪ್ಟೆಂಬರ್ 14 ಕ್ಕೂ ಮುಂಚೆಯೇ 4 ಬಾರಿ ಸಂಚು ರೂಪಿಸಲಾಗಿತ್ತು. ಆದರೆ ಆ ಎಲ್ಲಾ ಪ್ರಯತ್ನಗಳೂ ವಿಫಲವಾಗಿದ್ದವು ಎಂಬ ಮಾಹಿತಿಯನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ.

pranay-2ಇಷ್ಟು ಸಾಲದು ಎಂಬಂತೆ ಅಮೃತಾಳ ಅಪ್ಪ ಮಾರುತಿ ರಾವ್ ನಡೆದುಕೊಂಡಿರುವ ರೀತಿ ನಿಜಕ್ಕೂ ಅಚ್ಚರಿ ಮೂಡಿಸುವಂತಿದೆ. ಜುಲೈನಲ್ಲೇ ರೂಪುಗೊಂಡಿತ್ತು ಸಂಚು! ಮನಸಾರೆ ಪ್ರೀತಿಸುತ್ತಿದ್ದ ಹಿಂದು ವೈಶ್ಯ ಸಮುದಾಯಕ್ಕೆ ಸೇರಿದ 21 ವರ್ಷ ವಯಸ್ಸಿನ ಅಮೃತಾ ಮತ್ತು ಪರಿಶಿಷ್ಟ ಜಾತಿಗೆ ಸೇರಿದ 24 ವರ್ಷ ವಯಸ್ಸಿನ ಪ್ರಣಯ್ ಇಬ್ಬರೂ ಇದೇ ವರ್ಷದ ಜನವರಿ ತಿಂಗಳಿನಲ್ಲಿ ಮದುವೆಯಾಗಿದ್ದರು.

ಅಮೃತಾ ಅವರ ಕುಟುಂಬ ಈ ಮದುವೆಯನ್ನು ಒಪ್ಪದಿದ್ದರೂ, ಪ್ರಣಯ್ ಕುಟುಂಬ ಅವರನ್ನು ಒಪ್ಪಿಕೊಂಡಿತ್ತು. ಆದರೆ ಜುಲೈ ತಿಂಗಳಿನಲ್ಲಿ ಅಮೃತಾ ಗರ್ಭಿಣಿ ಎಂಬುದು ತಿಳಿಯುತ್ತಿದ್ದಂತೆಯೇ ಅಮೃತಾ ಅವರ ತಾಯಿ ಮತ್ತೆ ಮಗಳೊಂದಿಗೆ ಮಾತನಾಡುವುದಕ್ಕೆ ಶುರು ಮಾಡಿದ್ದರು. ಅಮೃತಾ ತಾಯಿ, ತಾವು ಮಗಳೊಂದಿಗೆ ಮಾತನಾಡುತ್ತಿದ್ದುದನ್ನೆಲ್ಲ ಪತಿ ಮಾರುತಿ ರಾವ್ ಬಳಿ ಹೇಳುತ್ತಿದ್ದರು.

pranayಆದರೆ ಮಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದ ಮಾರುತಿ ರಾವ್ ರಲ್ಲಿ ಅಮೃತಾ ತಾಯಿಗೆ ಶುದ್ಧ ಕಾಳಜಿ ಕಾಣುತ್ತಿತ್ತೇ ಹೊರತು, ಕೊಲೆಗಾರನೊಬ್ಬ ರೂಪುಗೊಳ್ಳುತ್ತಿದ್ದಾನೆ ಎಂಬ ಸಣ್ಣ ಅನುಮಾನವೂ ಬಂದಿರಲಿಲ್ಲ! ಪ್ರಣಯ್ ಹತ್ಯೆಗೆ ಜುಲೈ ತಿಂಗಳಿನಲ್ಲೇ ಸಂಚು ರೂಪಿಸಿ, ಬಿಹಾರದಿಂದ ಸುಪಾರಿ ಕಿಲ್ಲರ್ ಗಳನ್ನೂ ಕರೆಸಿಕೊಂಡಿದ್ದ ಮಾರುತಿ ರಾವ್!  ಆಗಸ್ಟ್ 14 ರಂದು ಸಿದ್ಧವಾಗಿತ್ತು ಮೃತ್ಯುಕೂಪ ಆಗಸ್ಟ್ 14 ರಂದು ಅಮೃತಾ ಬ್ಯೂಟಿ ಪಾರ್ಲರ್ ಗೆಂದು ಬಂದಿದ್ದ ಸಮಯದಲ್ಲಿ ಪ್ರಣಯ್ ಸಹ ಆಕೆಯೊಂದಿಗಿದ್ದರು. ಈ ಸಮಯದಲ್ಲೇ ಪ್ರಣಯ್ ನನ್ನು ಕೊಲ್ಲಲು ಕೊಲೆಗಾರರು ಪಾರ್ಲರ್ ಬಳಿ ಬಂದಿದ್ದರು.

ಆದರೆ ಅಂದು ಅದೃಷ್ಟ ಪ್ರಣಯ್ ಪಾಲಿಗಿತ್ತು. ಅಮೃತಾ ಪಾರ್ಲರ್ ಒಳಗೆ ಹೋಗಿದ್ದ ಸಂದರ್ಭದಲ್ಲಿ ಪ್ರಣಯ್ ಗೆ ಪರಿಚಿತರೊಬ್ಬರು ಸಿಕ್ಕರು. ಅವರೊಂದಿಗೆ ಮಾತನಾಡುತ್ತನಿಂತರು. ಕೊಲೆಗಾರರಿಗೆ ಈ ಸಂದರ್ಭದಲ್ಲಿ ಪ್ರಣಯ್ ಯಾರು ಎಂಬ ಗೊಂದಲ ಕಾಡಿತ್ತು. ಆದ್ದರಿಂದ ಯೋಚನೆಯನ್ನು ಮುಂದೂಡಿ ಕಾಲ್ಕಿತ್ತಿದ್ದರು. ‘ಪ್ರಣಯ್ ನನಗೆ ನೀಡಿದ ಅತ್ಯಮೂಲ್ಯ ಉಡುಗೊರೆ ನನ್ನ ಗರ್ಭದಲ್ಲಿದೆ’ ಆರತಕ್ಷತೆಯ ದಿನ ಪ್ರಣಯ್ ಅವರ ಕುಟುಂಬಸ್ಥರು ಈ ಜೋಡಿಯನ್ನು ಒಪ್ಪಿಕೊಂಡ ನಂತರ ಆಗಸ್ಟ್ 17 ರಂದು ಕುಟುಂಬಸ್ಥರು, ಸ್ನೇಹಿತರನ್ನೆಲ್ಲ ಕರೆದು ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಸಲಾಗಿತ್ತು. ಈ ಸಂದರ್ಭದಲ್ಲೇ ಪ್ರಣಯ್ ನನ್ನು ಕೊಲ್ಲಲು ಮಾರುತಿ ರಾವ್ ಸಂಚು ರೂಪಿಸಿದ್ದರು. ಪುತ್ರಿ ಅಂತರ್ಜಾತೀಯ ವಿವಾಹವಾಗಿದ್ದಾಳೆ ಎಂಬುದು ಈ ಆರತಕ್ಷತೆಯ ಮೂಲಕ ಎಲ್ಲರಿಗೂ ತಿಳಿದಿದ್ದು, ಮಾರುತಿ ರಾವ್ ಘನತೆಗೆ ಕುಂದುಂಟುಮಾಡಿತ್ತು. ಆರತಕ್ಷತೆ ಸಮಯದಲ್ಲಿ ಅಂದರೆ ಆಗಸ್ಟ್ 16 ರಿಂದ 23ರವರೆಗೆ ಹೈದರಾಬಾದಿಗೆ ತೆರಳಿದ್ದ ಮಾರುತಿ ರಾವ್ ರಿಸೆಪ್ಷನ್ ಸ್ಥಳದಿಂದ ದೂರವೇ ಇದ್ದರೂ ಅಲ್ಲಿಂದಲೇ ಕೊಲೆಗೆ ಸಂಚು ಹೆಣೆದಿದ್ದರು! ಆದರೆ ಅದೂ ವಿಫಲವಾಗಿತ್ತು.

ಸೆಪ್ಟೆಂಬರ್ ಮೊದಲ ವಾರ ಸೆಪ್ಟೆಂಬರ್ ಮೊದಲನೇ ವಾರ ಸಹ ಮತ್ತೆ ಸಂಚು ರೂಪಿಸಿದ್ದ ಮಾರುತಿ ರಾವ್ ಈ ಬಾರಿ ಕೊಂಚ ಬೇರೆ ರೀತಿಯ ಟ್ರಿಕ್ ಉಪಯೋಗಿಸಿದ್ದರು. ಅಮೃತಾ ಅವರನ್ನು ಮೊದಲು ಅಪಹರಿಸಿ, ನಂತರ ಪ್ರಣಯ್ ನನ್ನು ಕೊಲ್ಲುವುದು ಅವರ ಯೋಚನೆಯಾಗಿತ್ತು. ಆದರೆ ಅದಕ್ಕಾಗಿ ನೇಮಿಸಿದ್ದ ಸುಪಾರಿ ಕಿಲ್ಲರ್ ಗಳು ಕುಡುಕರಾಗಿದ್ದರಿಂದ, ಅವರಿಗೆ ಸಿರಿಯಸ್ ನೆಸ್ ಇಲ್ಲ ಎಂದು ಅವರನ್ನು ವಾಪಸ್ ಕಳಿಸಿ, ಈ ಯೋಜನೆಯನ್ನು ಕೈಬಿಟ್ಟಿದ್ದರು. ತೆಲಂಗಾಣದ ಬರ್ಬರ ಹತ್ಯೆ, ಮೊದಲೇ ಎಚ್ಚರಿಕೆ ನೀಡಿದ್ದ ಪೊಲೀಸರು! 5 ನೇ ಸಂಚು ಪ್ರಣಯ್ ನನ್ನು ಉಳಿಸಲಿಲ್ಲ! ಇದುವರೆಗೂ ಪ್ರಣಯ್ ಆಯುಷ್ಯವನ್ನು ಅದ್ಹೇಗೋ ಕಾದಿದ್ದ ಶಕ್ತಿ ಐದನೇ ಸಂಚಿನ ಹೊತ್ತಿಗೆ ಆತನನ್ನು ಕಾಯಲಿಲ್ಲ! ಸೆಪ್ಟೆಂಬರ್ 13 ರಂದು ಅಮ್ಮನಿಗೆ ಫೋನ್ ಮಾಡಿದ್ದ ಅಮೃತಾ ಸೆ. 14 ರಂದು ಮಿರ್ಯಾಲಗುಡದ ಜ್ಯೋತಿ ಆಸ್ಪತ್ರೆಗೆ ಚೆಕಪ್ ಗೆಂದು ಹೋಗುವವುದಾಗಿ ಹೇಳಿದ್ದರು.

ಸಮಯವನ್ನೂ ತಿಳಿಸಿದ್ದರು. ಸಹಜವಾಗಿಯೇ ಈ ಎಲ್ಲವನ್ನೂ ಪತಿ ಮಾರುತಿ ರಾವ್ ಗೆ ಅಮೃತಾ ತಾಯಿ ತಿಳಿಸಿದ್ದರು. ಗಣೇಶನ ಹಬ್ಬದ ದಿನ, ದೇವರಿಗೆ ಕೈಮುಗಿದು ನಾಟಕೀಯತೆ ಮೆರೆಯುತ್ತಿದ್ದ ಮಾರುತಿ ರಾವ್ ನಲ್ಲಿದ್ದ ಕೊಲೆಗಾರ ಅಂದು ಜಾಗೃತನಾದ. ಸುಪಾರಿ ಕಿಲ್ಲರ್ ಗಳಿಗೆಲ್ಲ ಸಂದೇಶ ಹೋಯ್ತು. ಸಂಚು ರೂಪುಗೊಂಡಿತ್ತು. ಗರ್ಭಿಣಿ ಪತ್ನಿಯನ್ನು ಜತನದಿಂದ ಆಸ್ಪತ್ರೆಗೆ ಕರೆತಂದಿದ್ದ ಪ್ರೀತಿಯ ಪತಿ ಕಣ್ಮುಂದೆಯೇ ಹೆಣವಾಗಿ ಮಲಗಿದ್ದ! ತಂದೆಯ ಜಾತಿ ವ್ಯಾಮೋಹಕ್ಕೆ, ಕ್ರೌರ್ಯಕ್ಕೆ ಮುಗ್ಧ ಮಗಳ ಬದುಕು ನುಚ್ಚು ನೂರಾಗಿತ್ತು!

pranay-2

pranay-3

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English