ನಾನು ಎಷ್ಟೋ ನಟರೊಂದಿಗೆ ನಟಿಸಿದ್ದು, ಅವರೆಂದೂ ಈ ರೀತಿ ನಡೆದುಕೊಂಡಿಲ್ಲ: ಶ್ರುತಿ ಹರಿಹರನ್

11:46 AM, Monday, October 22nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

shruti-hariharanಬೆಂಗಳೂರು: ನಟಿಯರ ಮೇಲಿನ‌ ದೌರ್ಜನ್ಯಕ್ಕೆ ಚಿತ್ರರಂಗದ ಫೈರ್ ಶುರುವಾಗಿದೆ. ನಟ ಅರ್ಜುನ್‌ ಸರ್ಜಾ ವಿರುದ್ಧ ಮಿ-ಟೂ ಆರೋಪ ಹಿನ್ನೆಲೆ ಇಂದು ಬೆಂಗಳೂರಿನಲ್ಲಿ ನಟಿ ಶ್ರುತಿ ಹರಿಹರನ್ ಸುದ್ದಿಗೋಷ್ಟಿ ನಡೆಸಿದರು.

ಮಲ್ಲೇಶ್ವರಂನ ರೇಣುಕಾಂಬ ಥಿಯೇಟರ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಟಿ ಶೃತಿ ಹರಿಹರನ್, ನನಗೆ ಧೈರ್ಯ ನೀಡಿದ್ದು ಮಿ-ಟೂ ಅಭಿಯಾನ. ನಾನು ಎಷ್ಟೋ ನಟರೊಂದಿಗೆ ನಟಿಸಿದ್ದು, ಅವರೆಂದೂ ಈ ರೀತಿ ನಡೆದುಕೊಂಡಿಲ್ಲ. ಆದರೆ ಈ ನಟ(ಅರ್ಜುನ್ ಸರ್ಜಾ)ನೊಂದಿಗೆ ಆದ ಕೆಟ್ಟ ಅನುಭವವನ್ನು ಒಂದೂವರೆ ವರ್ಷದ ನಂತರ ಬಾಯಿ ಬಿಟ್ಟಿದ್ದೇನೆ. ಅರ್ಜುನ್ ಸರ್ಜಾ ಫ್ಯಾನ್ಸ್ ಅಸೋಸಿಯೇಶನ್ನಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ದಾಖಲೆಯೊಂದಿಗೆ ಕಾನೂನಿನ ಮೂಲಕ ಹೋರಾಟ ಮಾಡುತ್ತೇನೆ. ನನಗೆ ಯಾವುದೇ ಪಬ್ಲಿಸಿಟಿ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಅರ್ಜುನ್ ಸರ್ಜಾ ವಿರುದ್ಧ ಕಾನೂನು ಹೋರಾಟ ಮಾಡ್ತೀನಿ. ಸರ್ಜಾ ಫ್ಯಾಮಿಲಿ ಜೊತೆ ಮುಖಾಮುಖಿ ಚರ್ಚೆಗೆ ಸಿದ್ಧವಾಗಿದ್ದೇನೆ. ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದ್ದು, ಸಮಯ ಬಂದಾಗ ಆರೋಪವನ್ನು ಸಾಬೀತು ಮಾಡಲಾಗುತ್ತೆ ಅಂತ ತಿಳಿಸಿದರು.‌ ಅವರ ಉದ್ದೇಶ ಏನು ಅನ್ನೋದು ಓರ್ವ ಹೆಣ್ಣಾಗಿ ನನಗೆ ಗೊತ್ತು. ಬಹಳಷ್ಟು ಹೆಣ್ಣುಮಕ್ಕಳು ಇದೇ ರೀತಿ ನೋವು ಅನುಭವಿಸುತ್ತಿದ್ದಾರೆ. ಆದರೆ ಯಾರೂ ಹೇಳಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಶೃತಿ ಹೇಳಿದ್ರು.

ಇದಕ್ಕೂ ಮುನ್ನ ಮಾತಾನಾಡಿದ ನಟಿ ರೂಪ ಅಯ್ಯರ್, ಕೆಲವು ಹುಡುಗಿಯರು ಮಿ-ಟೂ ವನ್ನು ದುರ್ಬಳಕೆ ಮಾಡಿಕೊಂಡಿರಬಹುದು. ನಮಗೆ ಲೈಂಗಿಕ ಕಿರುಕುಳ ಆದ ಕೂಡಲೇ ಹೇಳಿಕೊಳ್ಳಲು ಆಗುವುದಿಲ್ಲ. ಎಲ್ಲದಕ್ಕೂ ಪ್ರೂಫ್ ಇರಲೇಬೇಕೆಂದೇನಿಲ್ಲ. ಯಾರೂ ಸಿಸಿ ಕ್ಯಾಮರಾ ಇಟ್ಟುಕೊಂಡು ದೌರ್ಜನ್ಯ ಮಾಡಲ್ಲವೆಂದು ಟಾಂಗ್ ಕೊಟ್ಟರು.

ಇನ್ನು ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಂತಹ ಮಹಿಳೆಯರಿಗೆ ಧೈರ್ಯ ತುಂಬು ಕೆಲಸ ಮಾಡುವುದು ಫೈರ್ ಸಂಸ್ಥೆಯ ಉದ್ದೇಶವಾಗಿದ್ದು, ಯಾವುದೇ ದೂರುಗಳು ಬಂದ್ರೂ ಮೂರು ತಿಂಗಳ ಒಳಗೆ ತನಿಖೆ ಮುಗಿಸಲಾಗುತ್ತದೆ ಎಂದು ಅದರ ಸದಸ್ಯರು ಹೇಳಿದರು.

ಫೈರ್ ಸಂಸ್ಥೆಯ ನಟ ಚೇತನ್ , ಕವಿತಾ ಲಂಕೇಶ್, ರೂಪಾ ಅಯ್ಯರ್ , ಪಂಚಮಿ, ಜಯಲಕ್ಷ್ಮಿ ಸೇರಿದಂತೆ ಹಲವರು ಶೃತಿ ಬೆಂಬಲಕ್ಕೆ ನಿಂತಿದ್ದರು. ಮಹಿಳೆಯರಿಗೆ ಆಗಿರೋ ಅನ್ಯಾಯದ ವಿರುದ್ಧ ಹೋರಾಟ ಮಾಡುವುದು ಫೈರ್ ಸಂಸ್ಥೆಯ ಉದ್ದೇಶವಾಗಿದೆ. ವಾಣಿಜ್ಯ ಮಂಡಳಿಗೆ ಬರುವ ದೂರುಗಳನ್ನು ಫಾರ್ವರ್ಡ್ ಮಾಡುವಂತೆ ಸಂಸ್ಥೆ ಮನವಿ ಮಾಡಿಕೊಂಡಿತ್ತು. ಇದೀಗ ಸಂಸ್ಥೆ ಶೃತಿಗೆ ಬೆಂಬಲ‌ ನೀಡೋ ಉದ್ದೇಶದಿಂದ ಸಂಸ್ಥೆ ವತಿಯಿಂದ ಸುದ್ದಿಗೋಷ್ಟಿ ಕರೆಯಲಾಗಿತ್ತು.

ಐಸಿಸಿ, ಅಂದರೆ ಇಂಟರ್ನಲ್ ಕಂಪ್ಲೇಂಟ್ ಕಮಿಟಿ ಫೈರ್ ಸಂಸ್ಥೆಯನ್ನು ಲೀಡ್ ಮಾಡಲಿದೆ. ಸಂಸ್ಥೆಯಲ್ಲಿ ಹನ್ನೊಂದು ಜನ ಸದಸ್ಯರಿದ್ದು, 9 ಮಹಿಳೆಯರಿದ್ದಾರೆ ಎಂದು ನಟ ಚೇತನ್ ತಿಳಿಸಿದರು. ಲಿಂಗ ಸಮಾನತೆಗಾಗಿ, ಸಮಾಜದಲ್ಲಿರುವ ಲೈಂಗಿಕ ಕಿರುಕುಳವನ್ನು ತೊಡೆದುಹಾಕಲು ಮಾರ್ಚ್ 2012 ರಂದು ಈ ಸಂಸ್ಥೆಯನ್ನು ಆರಂಭಿಸಲಾಗಿದೆ. ಈ ಫೈರ್ ಸಂಸ್ಥೆಯ ಅಧ್ಯಕ್ಷರಾಗಿ ಕವಿತಾ ಲಂಕೇಶ್ ಕೆಲಸ ಮಾಡುತ್ತಿದ್ದಾರೆ. ಖಜಾಂಚಿಯಾಗಿ ರೇಖಾರಾಣಿ ಇದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English