ಶಬರಿಮಲೆ ಕ್ಷೇತ್ರದ ಪರಂಪರೆಯ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿ ಮಂಗಳೂರಿನಲ್ಲಿ ಪ್ರತಿಭಟನೆ

12:42 PM, Tuesday, October 23rd, 2018
Share
1 Star2 Stars3 Stars4 Stars5 Stars
(No Ratings Yet)
Loading...

HJS1ಮಂಗಳೂರು: ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶದ ವಿಷಯದಲ್ಲಿ ಕೇರಳ ಸರ್ಕಾರವು ಕೂಡಲೇ ಸುಗ್ರಿವಾಜ್ಞೆ ಹೊರಡಿಸಿ ಶಬರಿಮಲೆ ಕ್ಷೇತ್ರದ ಪರಂಪರೆಯ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿ, ಅಯ್ಯಪ್ಪ ಭಕ್ತರ ಸಮೂಹ ಹಾಗೂ ಸಮಸ್ತ ಹಿಂದೂ ಸಂಘಟನೆಗಳ ವತಿಯಿಂದ ಸೋಮವಾರ ಮಂಗಳೂರು ಜಿಲ್ಲಾಧಿಕಾರಿ ಕಛೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನ ಸಭೆಯನ್ನುದ್ದೇಶಿಸಿ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕರಾದ ಚಂದ್ರ ಮೊಗೇರ ಅವರು, ಕೊಟ್ಯಾಂತರ ಹಿಂದೂಗಳ ಶ್ರದ್ಧಾಕೇಂದ್ರವಾದ ಶಬರಿಮಲೆಯ ಪರಂಪರೆಗೆ ಸರ್ವೋಚ್ಚ ನ್ಯಾಯಾಲಯದ ಮಹಿಳೆಯರ ಪ್ರವೇಶದ ತೀರ್ಪಿನಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟುಗಿದೆ. ಧಾರ್ಮಿಕ ವಿಷಯಗಳ ತೀರ್ಪು ನೀಡುವಾಗ ಶಬರಿಮಲೆ ದೇವಸ್ಥಾನದ ತಂತ್ರಿಗಳ, ರಾಜಮನೆತನ ಮತ್ತು ಹಿಂದೂ ಧರ್ಮಚಾರ್ಯರ ಅಬಿಪ್ರಾಯ ಪಡೆಯದಿರುವುದು ದುರದೃಷ್ಟಕರವಾಗಿದೆ. ಇಂದು ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಪರಂಪರೆಯನ್ನು ಭಗ್ನ ಮಾಡುವ ಷಡ್ಯಂತ್ರ್ಯವು ನಡೆಯುತ್ತಿದೆ. ಕೆಲವು ನಾಸ್ತಿಕರ ಸ್ವಾರ್ಥಕ್ಕೆ ಲಕ್ಷಾಂತರ ಮಹಿಳೆಯ ಧಾರ್ಮಿಕ ಶ್ರದ್ಧೆಯನ್ನು ಬಲಿಪಶು ಮಾಡುವುದು ಎಷ್ಟು ಸರಿ?. ಕೇರಳದ ಸಾಮ್ಯವಾದಿ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ನಿರ್ಣಯವನ್ನು ಆತುರದಿಂದ ಪಾಲಿಸಲು 500 ಮಹಿಳಾ ಪೋಲಿಸರನ್ನು ಶಬರಿಮಲೆಯಲ್ಲಿ ನೇಮಕ ಮಾಡಿರುವುದು ಖಂಡನೀಯವಾಗಿದೆ. ಕೇರಳ ಸರ್ಕಾರ ಜಲ್ಲಿಕಟ್ಟು ವಿಷಯದಲ್ಲಿ ಸುಗ್ರಿವಾಜ್ಞೆ ಹೊರಡಿಸಿದಂತೆ ಶಬರಿಮಲೆ ದೇವಸ್ಥಾನದ ಪರಂಪರೆಯನ್ನು ಕಾಪಾಡಲು, ಮೊದಲಿನಂತೆ ಯಥಾವತ್ತಾಗಿ ನಡೆಸಿಕೊಂಡು ಬರಲು ಕೂಡಲೇ ಸುಗ್ರಿವಾಜ್ಞೆಯನ್ನು ಹೊರಡಿಸಬೇಕು. ಇಲ್ಲವಾದರೇ ತೀವ್ರ ವಿರೋಧವನ್ನು ಎದುರಿಸಬೇಕಾದೀತು ಎಂದು ಹೇಳಿದರು.

HJS2ಪ್ರತಿಭಟನೆಯಲ್ಲಿ ಕೊಲ್ಯ ಶ್ರೀ ಮೂಕಾಂಬಿಕಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಧುಸೂದನ್ ಅಯ್ಯರ್, ಇವರು ಮಾತನಾಡುತ್ತಾ, ಕೇರಳದಲ್ಲಿ ಬಹುತೇಕ ಕಮ್ಯುನಿಸ್ಟ್ ಆಡಳಿತವಿದ್ದರೂ, ಹಿಂದೂಗಳು ಒಟ್ಟಾಗಿ ತಮ್ಮ ಭಾವನೆಯನ್ನು ವ್ಯಕ್ತ ಪಡಿಸುವ ಸಲುವಾಗಿ ಹಾಗೂ ಶಬರಿಮಲೆಯನ್ನು ರಕ್ಷಿಸುವ ಸಲುವಾಗಿ ಪ್ರತಿಯೊಂದು ಮನೆಯಿಂದ ಸ್ತ್ರೀಯರು ಕೇರಳದಲ್ಲಿ ನಡೆದ ಈ ಆಂದೋಲನದಲ್ಲಿ ಭಾಗವಹಿಸಿ ತಮ್ಮ ಧರ್ಮಕರ್ತವ್ಯವನ್ನು ನಿಭಾಯಿಸಿದ್ದಾರೆಎಂದರು.

ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಗುರುಸ್ವಾಮಿಗಳಾದ ವಿಶ್ವನಾಥ ಇವರು ಮಾತನಾಡಿ, “ಕೇರಳ ಸರಕಾರವು ಹಿಂದೂಗಳ ಭಾವನೆಗೆ ಸ್ಪಂದಿಸದೆ ಇತರ ಪಂಥೀಯರಾದ ಕ್ರೈಸ್ತ, ಮುಸಲ್ಮಾನ ಹಾಗೂ ನಕ್ಸಲ್ ಮೂಲದ ಸ್ತ್ರೀಯರಿಗೆ ಶಬರಿಮಲೆ ದೇವಸ್ಥಾನದ ಪ್ರವೇಶ ಮಾಡಲು ಸಹಾಯ ಮಾಡಿದೆ. ಇದು ಅಕ್ಷಮ್ಯ ಅಪರಾಧವಾಗಿದೆ.” ಎಂದರು.

‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಮೈಸೂರಿನ ಅಬಿದ್ ಪಾಶಾ ಮತ್ತು ಅವನ ಗುಂಪು ಆರ್‌ಎಸ್‌ಎಸ್ ಮತ್ತು ಭಾಜಪದ ೮ ಹಿಂದುತ್ವನಿಷ್ಠ ಕಾರ್ಯಕರ್ತರನ್ನು ಹತ್ಯೆ ಮಾಡಿರುವುದಾಗಿ ವಿಚಾರಣೆಯ ಸಮಯದಲ್ಲಿ ತಿಳಿದುಬಂದಿದೆ. ಆದರೂ ಕರ್ನಾಟಕದ ಇಂದಿನ ಕಾಂಗ್ರೆಸ್- ಜನತಾದಳ(ಜಾತ್ಯಾತೀತ) ಸಂಯುಕ್ತ ಸರಕಾರವು ಈ ಆರೋಪಿಗಳಿಗೆ ಸಹಾಯ ಮಾಡುತ್ತಿದೆ. ಹಿಂದೂಗಳ ಮೇಲೆ ತಕ್ಷಣವೇ ‘ಕೋಕಾ’ನುಸಾರ ಕ್ರಮ ಕೈಕೊಳ್ಳ್ಳುವ ಸರಕಾರವು ಈ ಗುಂಪಿನ ಮೇಲೆ ಇದುವರೆಗೂ ‘ಕೋಕಾ’ (ಕರ್ನಾಟಕ ಗುಂಪು ಅಪರಾಧ ನಿಯಂತ್ರಣ ಕಾನೂನು) ಜಾರಿಗೊಳಿಸಿಲ್ಲ. ಈ ಗುಂಪು ನಡೆಸುವ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಈ ದೇಶದ್ರೋಹಿ ಸಂಘಟನೆಯನ್ನು ಶೀಘ್ರವಾಗಿ ನಿಷೇಧಿಸಬೇಕೆಂದು ಆಗ್ರಹಿಸುತದೆ.

ಕಳೆದ ಕೆಲವು ದಿನಗಳಿಂದ ವಿವಿಧ ಚರ್ಚಗಳು ಮತ್ತು ಮಿಶನರಿ ಸಂಸ್ಥೆಗಳಲ್ಲಿ ಲೈಂಗಿಕ ಶೋಷಣೆ, ಬಲಾತ್ಕಾರ, ಶಿಶು ಮಾರಾಟ ಇತ್ಯಾದಿ ಅವ್ಯವಹಾರಗಳು ಸತತವಾಗಿ ನಡೆಯುತ್ತಿವೆ. ಕೇರಳದ ಚರ್ಚಿನಲ್ಲಿ ಒಬ್ಬ ನನ್ ಮೇಲೆ ಬಿಶಪ್ ಫ್ರಂಕೋ ಮುಲಕ್ಕಲ ಇವರು ೧೩ ಬಾರಿ ಬಲಾತ್ಕಾರ ಮಾಡಿರುವುದು ಬಹಿರಂಗವಾಗಿದೆ, ಇದು ಬಹಿರಂಗಗೊಂಡಿರುವ ಕೇವಲ ಒಂದು ಪ್ರಕರಣವಾಗಿದ್ದು ದೇಶಾದ್ಯಂತ ಇಂತಹ ಅನೇಕ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲ ಚರ್ಚಗಳು ಮತ್ತು ಮಿಶನರಿ ಸಂಸ್ಥೆಗಳ ತಪಾಸಣೆಯನ್ನು ನಡೆಸಲು ಒಂದು ವಿಶೇಷ ಆಯೋಗವನ್ನು ರಚಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹಿಸುತ್ತದೆ.

ರೇಲ್ವೆ ಇಲಾಖೆಯು ಪ್ರಯಾಗ ಕುಂಭಮೇಳದಲ್ಲಿ ಭಾಗವಹಿಸುವ ಭಾವಿಕರ ಮೇಲೆ, ರೇಲ್ವೆ ಟಿಕೇಟ ದರವನ್ನು ಹೆಚ್ಚಿಸಲು ನಿರ್ಣಯಿಸಿದೆ. ಈ ನಿರ್ಣಯದಿಂದ ಹಿಂದೂಗಳ ಮೇಲೆ ಅನ್ಯಾಯವಾಗುತ್ತಿದ್ದು, ಇದನ್ನು ತಕ್ಷಣವೇ ರದ್ದುಗೊಳಿಸಬೇಕು. ಅನೈತಿಕ ಮತ್ತು ಅವ್ಯವಹಾರಗಳಾದ ಇಸ್ಪೀಟು, ಅಮಲು ಪದಾರ್ಥಗಳು, ಮಾನವ ಕಳ್ಳ ಸಾಗಾಣಿಕೆ ಇತ್ಯಾದಿ ಅನೇಕ ವಿಷಯಗಳನ್ನು ನಿರ್ಬಂಧಿಸಲು ‘ಆನ್ ಲೈನ್’ ವೇಶ್ಯೆಯರ ವ್ಯವಹಾರವನ್ನು ನಡೆಸುವ ವೆಬ್ ಸೈಟ್ ಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಲಾಯಿತು

ಶಂಖನಾದದೊಂದಿಗೆ ಪ್ರತಿಭಟನೆ ಆರಂಭಿಸಲಾಯಿತು. ಬಳಿಕ ಪ್ರತಿಭಟನೆ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದ.ಕ. ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿ ನೀಡಲಾಯಿತು.

ಪ್ರತಿಭಟನೆಯ ನಿರೂಪಣೆಯನ್ನು ಲೀಲಾವತಿ ನಾಯಕ್ ಇವರು ಮಾಡಿದರು.ಆಂದೋಲನದಲ್ಲಿ ಧರ್ಮಪ್ರೇಮಿಗಳಾದ ಸತೀಶ್ ಉರ್ವ, ಲೋಕೇಶ್ ಕುತ್ತಾರು, ಶಶಿಧರ್ ಬಾಳಿಗಾ, ಬಿ. ವಿ. ಜಯರಾಮ, ವಸಂತ ಶೆಟ್ಟಿ ದೇರಳಕಟ್ಟೆ, ರಮೇಶ್ ಶರವು, ಆನಂದ ಶೆಟ್ಟಿ, ವೀರಪ್ಪ ಹಿಂದೂ ಯುವ ಸೇನೆ ಮಂಗಳೂರು, ನಿತ್ಯಾನಂದ, ಗೀತಾ ಶೆಟ್ಟಿ, ಅಡ್ಯಾರು ಮೊದಲಾದವರು ಭಾಗವಹಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English