ಚೈತ್ರಾ ಹೆಬ್ಬಾರ್ ಕತಾರ್ ದೇಶಕ್ಕೆ, ಆರೋಪಿ ಶಾರೂಖ್ ಪೊಲೀಸ್ ವಶಕ್ಕೆ

10:02 PM, Saturday, March 2nd, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ನಾಪತ್ತೆಯಾಗಿದ್ದ ಪಿಎಚ್​ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ಕತಾರ್ ನಾಪತ್ತೆ ಪ್ರಕರಣ ಸಂಬಂಧ ಪುತ್ತೂರಿನ ಶಾರೂಖ್​ನನ್ನು ಉಳ್ಳಾಲ ಪೊಲೀಸರು ಹಿಮಾಚಲ ಪ್ರದೇಶದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಇದ್ದ ಪ್ರೀತಿ ವಿಚಾರ ತಿಳಿದುಬಂದಿದೆ.

ಆರೋಪಿಯನ್ನು ವಿಚಾರಣೆ ಮಾಡಿದಾಗ, ಚೈತ್ರಾ ಹೆಬ್ಬಾರ್ ಕತಾರ್ ದೇಶಕ್ಕೆ ತೆರಳಿರುವುದು ತಿಳಿದುಬಂದಿದೆ. ಕತಾರ್ ದೇಶದಿಂದ ಉಳ್ಳಾಲ ಪೊಲೀಸರಿಗೆ ಇಮೇಲ್ ಮೂಲಕ ಸಂದೇಶ ರವಾನಿಸಿದ ಚೈತ್ರಾ, ನನಗೆ ಪ್ರೀತಿಸುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದ್ದಾಳೆ.

ವಿಸಿಟಿಂಗ್ ವೀಸಾದ ಮೂಲಕ ಚೈತ್ರಾ ಹೆಬ್ಬಾರ್ ಕತಾರ್ ದೇಶಕ್ಕೆ ತೆರಳಿರುವ ಮಾಹಿತಿ ತಿಳಿದುಬಂದಿದೆ. ಅಲ್ಲದೆ, ಕತಾರ್​ನಿಂದಲೇ ಉಳ್ಳಾಲ ಪೊಲೀಸರಿಗೆ ಇಮೇಲ್ ಸಂದೇಶ ರವಾನಿಸಿದ ಚೈತ್ರಾ, ನಾನು ಪ್ರಬುದ್ದಳಾಗಿದ್ದೇನೆ, ನನಗೆ ಪ್ರೀತಿಸೋ ಹಕ್ಕಿಲ್ಕವೇ ಎಂದು ಪ್ರಶ್ನಿಸಿದ್ದಾಳೆ. ಅಲ್ಲದೆ, ‘ನನ್ನ ಇಚ್ಛೆಯಂತೆ ನಾನು ಬಂದಿದ್ದೇನೆ, ನನಗೆ ಬದುಕೋ ಹಕ್ಕಿಲ್ಲವೇ?’ ಎಂದು ಪ್ರಶ್ನಿಸಿದ್ದಾಳೆ.

ಪುತ್ತೂರಿನ ಶಾರೂಖ್​ನನ್ನು ಹಿಮಾಚಲ ಪ್ರದೇಶದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಚೈತ್ರಾ ಜೊತೆ ಪ್ರೇಮ ಇರುವುದಾಗಿ ಆತ ಬಾಯಿಬಿಟ್ಟಿದ್ದಾನೆ. 2017ರಿಂದಲೇ ಶಾರೂಖ್ ಜೊತೆ ಚೈತ್ರಾಗೆ ನಂಟು ಇತ್ತು ಎನ್ನಲಾಗಿದೆ.

ಬೆಂಗಳೂರಿನಿಂದ ಗೋವಾ-ಮುಂಬೈ ಮಾರ್ಗವಾಗಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದ ಚೈತ್ರಾ, ಅಲ್ಲಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಕತಾರ್​ ದೇಶಕ್ಕೆ ಪ್ರಯಾಣ ಮಾಡಿದ್ದಾಳೆ. ಆ ದೇಶಕ್ಕೆ ಹೋಗಲು ಶಾರೂಖ್ ಎಲ್ಲಾ ವ್ಯವಸ್ಥೆ ಮಾಡಿದ್ದನು ಎಂದು ತಿಳಿದುಬಂದಿದೆ. ಈ ಹಿಂದೆ ಕತಾರ್​ನಲ್ಲೇ ಕೆಲಸ ಮಾಡಿಕೊಂಡಿದ್ದ ಶಾರೂಖ್, ಪ್ರಕರಣವೊಂದರಲ್ಲಿ ಜೈಲು ಸೇರಿ ಬಿಡುಗಡೆಯಾಗಿ ಪುತ್ತೂರಿಗೆ ವಾಪಸ್ ಆಗಿದ್ದನು.

ಅಲ್ಲದೆ, ಪಾಸ್​ಪೋರ್ಟ್​ನಲ್ಲಿ ಎಕ್ಸಿಟ್ ಇರುವ ಕಾರಣ ಶಾರೂಖ್​ಗೆ ಯುಎಇ ಪ್ರಯಾಣ ನಿರ್ಬಂಧ ಮಾಡಲಾಗಿದೆ. ಹೀಗಾಗಿ ವಿಸಿಟಿಂಗ್ ವೀಸಾ ಮೂಲಕ ಚೈತ್ರಾಳನ್ನ ಕಳುಹಿಸಿರುವ ಅನುಮಾನ ವ್ಯಕ್ತವಾಗಿದೆ. ಸದ್ಯ ಚೈತ್ರಾ ಕತಾರ್​ನ ಭಾರತೀಯ ರಾಯಭಾರಿ ಕಚೇರಿ ಮೂಲಕ ಇಮೇಲ್ ಸಂದೇಶ ರವಾನಿಸಿದ್ದು, ಮೂರು ತಿಂಗಳು ಕಳೆದು ಊರಿಗೆ ಬರೋದಾಗಿ ಹೇಳಿದ್ದಾಳೆ. ಹೀಗಾಗಿ ಶಾರೂಖ್​ನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ಇಬ್ಬರೂ ಪ್ರಬುದ್ದರಾಗಿರುವ ಕಾರಣ ಪೊಲೀಸರು ಅಸಹಾಯಕರಾಗಿದ್ದಾರೆ.

ಯುವತಿ ನಾಪತ್ತೆ ಪ್ರಕರಣ ಹಿಂದೆ ಲವ್ ಜಿಹಾದ್ ಹುನ್ನಾರ ಇದೆ ಎಂದು ಬಜರಂಗದಳ ಆರೋಪಿಸಿತ್ತು. ಚೈತ್ರಾ ಹೆಬ್ಬಾರ್ ನಾಪತ್ತೆ ಕೇಸನ್ನು ಸರ್ಕಾರ ಮತ್ತು ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಸುಸಂಸ್ಕೃತ ಮನೆಯ ಹುಡುಗಿಯನ್ನು ಬ್ಲ್ಯಾಕ್​​ಮೇಲ್ ಮಾಡಿ ಹಾಗೂ ವಂಚಿಸಿ ಅಪಹರಣ ಮಾಡಲಾಗಿದೆ ಎಂದು ಬಜರಂಗದಳ ಕರ್ನಾಟಕ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ ಆರೋಪಿಸಿದ್ದರು.

ಬಜರಂಗ ದಳದ ಎಚ್ಚರಿಕೆಯಿಂದ ಆತಂಕಗೊಂಡ ಚೈತ್ರಾ, ಶಾರೂಖ್​ಗೆ ರೂಮ್ ಕಡೆ ಬಾರದಂತೆ ತಿಳಿಸಿ ಫೆಬ್ರವರಿ 17 ರಂದು ನಾಪತ್ತೆಯಾಗಿದ್ದಳು. ಅಂದು ಬೆಳಗ್ಗೆ 9 ಗಂಟೆಗೆ ಸ್ಕೂಟಿಯಲ್ಲಿ ತೆರಳಿದ ಆಕೆ ವಾಪಸ್ ಪಿಜೆಗೆ ಬಂದಿರಲಿಲ್ಲ. ಪಂಪ್​ವೆಲ್ ಬಳಿ ಮೊಬೈಲ್ ಸ್ವಿಚ್​ ಆಫ್ ಆಗಿದ್ದು, ಸುರತ್ಕಲ್​ನಲ್ಲಿ ಎಟಿಎಂನಿಂದ ಹಣ ಡ್ರಾ ಮಾಡಿದ್ದಳು. ಇದರ ಬೆನ್ನಲ್ಲೇ ಆಕೆಯ ದೊಡ್ಡಪ್ಪ ಠಾಣೆಗೆ ದೂರು ನೀಡಿದ್ದರು. ತನಿಖೆ ವೇಳೆ ಚೈತ್ರಾಳ ಸ್ಕೂಟಿ ಸುರತ್ಕಲ್ ಬಳಿ ಪತ್ತೆಯಾಗಿತ್ತು.

ಪುತ್ತೂರು ಮೂಲದ ಶಾರೂಖ್ ಡ್ರಗ್ ಪೆಡ್ಲರ್ ಆಗಿದ್ದು, ಈತನೊಂದಿಗೆ ಚೈತ್ರಾ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿದೆ. ಅನೇಕ ಬಾರಿ ಶಾರೂಕ್ ಪಿಜಿ ಬಳು ಬರುತ್ತಿದ್ದ ಮಾಹಿತಿ ಲಭ್ಯವಾಗಿದೆ. ಕತಾರ್​ನಲ್ಲಿ ಉದ್ಯೋಗದಲ್ಲಿದ್ದ ಈತ ಪ್ರಕರಣವೊಂದರಲ್ಲಿ ಜೈಲು ಪಾಲಾಗಿ ಪುತ್ತೂರಿಗೆ ವಾಪಸ್ ಆಗಿದ್ದನು. ಹಲವು ಸಮಯದಿಂದ ಪುತ್ತೂರಿನಲ್ಲೇ ಇದ್ದ ಶಾರೂಕ್, ಮಂಗಳೂರಿನಲ್ಲಿ ಡ್ರಗ್ ಪೆಡ್ಲರ್ ಆಗಿದ್ದ ಎನ್ನಲಾಗಿದೆ.

ಹುಡುಗರು ರಾತ್ರಿ ಹೊತ್ತು ಪಿಜಿ ಬಳಿ‌ ಬರುತ್ತಿರುವ ಬಗ್ಗೆ 10 ದಿನದ ಹಿಂದೆ ಸ್ಥಳಯರಿಂದ ಮಾಹಿತಿ ಬಂದಿತ್ತು. ಚೈತ್ರಾ ಹೆಬ್ಬಾರ್ ಪ್ರತಿಷ್ಟಿತ ಕುಟುಂಬಕ್ಕೆ ಸೇರಿದವಳು. ಈಕೆಗೆ ಶಾರೂಕ್ ಎಂಬ ಯುವಕನ ಜೊತೆ ನಿಕಟ ಸಂಪರ್ಕ ಇತ್ತು. ಶಾರೂಕ್ ಗಾಂಜಾ ಡ್ರಗ್ ಮಾಫಿಯಾದಲ್ಲಿ ಸಿಕ್ಕಿ ಹಾಕಿಕೊಂಡವ. ಡ್ರಗ್ಸ್​‌ನ ಆಸೆ ಆಮೀಷ ತೋರಿಸಿ ಬ್ರೈನ್ ವಾಶ್ ಮಾಡಿದ್ದಾನೆ. ಇದು ಲವ್ ಜಿಹಾದ್ ದೊಡ್ಡ ಷಡ್ಯಂತ್ರ ಇದೆ ಎಂದು ಬಜರಂಗದಳ ಉಳ್ಳಾಲ ನಗರ ಪ್ರಖಂಡ ಸಂಚಾಲಕ ಅರ್ಜುನ್ ಮಾಡೂರ್ ಹೇಳಿದ್ದರು.

ಶಾರೂಕ್ ತಡರಾತ್ರಿ ಈ ಪಿಜಿಗೆ ಬರುತ್ತಿದ್ದ. ಪಿಜಿಯಲ್ಲಿ ಪಾರ್ಟಿ ಮಾಡುತ್ತಿದ್ದ ಬಗ್ಗೆ ಸ್ಥಳೀಯರು ಹೇಳುತ್ತಿದ್ದರು. ಡ್ರಗ್ಸ್ ಮಾಫಿಯಾ ವಿದ್ಯಾರ್ಥಿಗಳನ್ನು‌ ಟಾರ್ಗೆಟ್ ಮಾಡುತ್ತಿದ್ದ. ಕಳೆದ ಐದು ತಿಂಗಳ ಅಂತರದಲ್ಲಿ ಚೈತ್ರಾ ಹೆಬ್ಬಾರ್ ವರ್ತನೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ಆಗಿತ್ತು ಎಂದು ಪಿಜಿಯಲ್ಲಿದ್ದ ಇತರೆ ವಿದ್ಯಾರ್ಥಿನಿಯರು ಹೇಳಿದ್ದಾಗಿ ತಿಳಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English