ಉಡುಪಿ ಕೊಲೆ ಆರೋಪಿ ಪ್ರವೀಣ್‌ ಚೌಗುಲೆ ಗೆ ಕಿಡ್ನಿ ಸ್ಟೋನ್‌, ವಿಚಾರಣೆ ಮಾ. 27ಕ್ಕೆ ಮುಂದೂಡಿದೆ.

2:32 PM, Thursday, March 14th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಉಡುಪಿ : ಉಡುಪಿ ನೇಜಾರಿನ ಕೊಲೆ ಆರೋಪಿ ಪ್ರವೀಣ್‌ ಚೌಗುಲೆ ಮಂಗಳವಾರ ನಡೆಯಬೇಕಿದ್ದ ಚಾರ್ಜ್‌ (ಆಪಾದನೆ ವಾಚಿಸುವ) ಪ್ರಕ್ರಿಯೆಯನ್ನು ಜಿಲ್ಲಾ ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯವು ಮಾ. 27ಕ್ಕೆ ಮುಂದೂಡಿದೆ.

ಮಾ. 7ರಂದು ನ್ಯಾಯಾಧೀಶ ದಿನೇಶ್‌ ಹೆಗ್ಡೆ, ಈ ಪ್ರಕರಣದಲ್ಲಿ ಆರೋಪಿ ವಿರುದ್ಧ ಆಪಾದನೆ ವಾಚಿಸಲು ಬೇಕಾದ ಸಾಕ್ಷ್ಯಾಧಾರಗಳಿವೆ ಎಂದು ತೀರ್ಮಾನಿಸಿ ಮಾ. 13ರಂದು ಚಾರ್ಜ್‌ ದಿನ ನಿಗದಿಪಡಿಸಿ ಆದೇಶ ನೀಡಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸುವಂತೆ ಮಲ್ಪೆ ಪೊಲೀಸರಿಗೆ ನಿರ್ದೇಶಿಸಿದ್ದರು. ಆದರೆ ಇನ್ನೊಂದೆಡೆ ಚೌಗುಲೆಯನ್ನು ಕಿಡ್ನಿ ಸ್ಟೋನ್‌ ಸಮಸ್ಯೆಗಾಗಿ ಕೋರ್ಟ್‌ ಆದೇಶದಂತೆ ಚಿಕಿತ್ಸೆ ನೀಡಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಅದರಂತೆ ಪೊಲೀಸರು ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಲು ಸಾಧ್ಯವಾಗದ ಬಗ್ಗೆ ದಾಖಲೆಗಳನ್ನು ಬುಧವಾರ ನ್ಯಾಯಾಲಯಕ್ಕೆ ಸಲ್ಲಿಸಿದರು.

ಈ ಹಿನ್ನೆಲೆಯಲ್ಲಿ ಚಾರ್ಜ್‌ ಪ್ರಕ್ರಿಯೆ ಮಾ. 27ಕ್ಕೆ ನಿಗದಿಪಡಿಸಿದ ನ್ಯಾಯಾಲಯವು ಆ ದಿನ ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸುವಂತೆ ಮಲ್ಪೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ಈ ಸಂದರ್ಭ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವ ಪ್ರಸಾದ್‌ ಆಳ್ವ ಹಾಜರಿದ್ದರು. ಆರೋಪಿ ಪ್ರವೀಣ್‌ ಚೌಗುಲೆ ಬುಧವಾರ 2ನೇ ಬಾರಿಗೆ ಜಾಮೀನು ಕೋರಿ ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಮಾ. 27ರಂದು ಇದಕ್ಕೆ ಆಕ್ಷೇಪಣೆ ಸಲ್ಲಿಸಲು ವಿಶೇಷ ಸರಕಾರಿ ಅಭಿಯೋಜಕರಿಗೆ ಅವಕಾಶ ಕಲ್ಪಿಸಿ ನ್ಯಾಯಾಲಯವು ಆದೇಶಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English