ಚೋರರಿಬ್ಬರ ಬಂಧನ : ಐದು ಲಕ್ಷ ಮೌಲ್ಯದ ಸೊತ್ತುಗಳ ವಶ

3:15 PM, Wednesday, March 27th, 2013
Share
1 Star2 Stars3 Stars4 Stars5 Stars
(No Ratings Yet)
Loading...

Kadri policeಮಂಗಳೂರು : ಕದ್ರಿ ಕ್ರೈಂ ವಿಭಾಗದ ಪೊಲೀಸರು ಬಲ್ಮಠ ಬಳಿ ಮಂಗಳವಾರ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಚೋರರಿಬ್ಬರು ಬಂಧಿಸಲ್ಪಟ್ಟಿದ್ದು ಅವರಿಂದ ಐದು ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಬಂಧಿತರನ್ನು ಬಂದರು ನಿವಾಸಿ ಮುನೀರ್ ಅಹಮದ್ ಅಲಿಯಾಸ್ ಗೂಡ್ಸ್ ಮುನೀರ್ ಅಲಿಯಾಸ್ ಮುನ್ನ(57) ಹಾಗೂ ಮಂಜೇಶ್ವರ ಹೊಸಂಗಡಿ ನಿವಾಸಿ ಇಬ್ರಾಹಿಂ(67) ಎಂದು ಗುರುತಿಸಲಾಗಿದೆ.

ಕದ್ರಿ ಕ್ರೈಂ ವಿಭಾಗದ ಪೊಲೀಸರು ಬಲ್ಮಠ ಬಳಿ ಗಸ್ತು ತಿರುಗುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ಕಂಡುಬಂದ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಪರಿಶೀಲಿಸಿದ ವೇಳೆ ವಾಹನಕ್ಕೆ ದಾಖಲೆ ಪತ್ರ ಇಲ್ಲದಿರುವುದು ಕಂಡುಬಂದಿತು ಕೂಡಲೇ ಸವಾರರಿಬ್ಬರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ನಡೆಸಿದ ವೇಳೆ ಇವರಿಬ್ಬರು ಕುಖ್ಯಾತ ಕಳ್ಳರೆಂಬ ವಿಷಯ ಬೆಳಕಿಗೆ ಬಂದಿದೆ.

ಈ ಇಬ್ಬರೂ ಕೂಡ ಬಲ್ಮಠದ ಟ್ಯಾಲಿ ಕಂಪ್ಯೂಟರ್ಸ್, ಬಿಜೈ ಬಳಿಯ ಸ್ಮೈಲ್ ಡೆಂಟಲ್ ಕ್ಲಿನಿಕ್ ಹಾಗೂ ಪಿವಿಎಸ್ ಬಳಿಯ ಕಂಪ್ಯೂಟರ್ ಅಂಗಡಿಯೊಂದರಿಂದ ವಸ್ತುಗಳನ್ನು ಕಳವುಗೈದಿದ್ದು, ಇವರ ವಿರುದ್ಧ ಪಾಂಡೇಶ್ವರ, ಬರ್ಕೆ, ಉರ್ವ ಮೊದಲಾದ ಠಾಣೆಗಳಲ್ಲಿ  ಈ ಮೊದಲೇ ದೂರು ದಾಖಲಾಗಿದೆ.

ಆರೋಪಿಗಳಿಂದ ೭ ಲ್ಯಾಪ್ ಟಾಪ್, ೪ ಎಲ್ ಸಿಡಿ, ಟಿವಿ, ಸಿಪಿಯು, 3 ಮೊಬೈಲ್ ಫೋನ್ ಗಳು ಹಾಗೂ ಒಂದು ಸ್ಕೂಟರ್ ಸೇರಿದಂತೆ ಐದು ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English