ಮಂಗಳೂರು : ಕ್ಷುಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟು ಘಟನೆ ವಿಕೋಪಕ್ಕೆ ತಿರುಗಿ, ಘಟನೆಯಿಂದ ಹಲವಾರು ಮಂದಿ ಗಾಯಗೊಂಡು, ಬಸ್ ಗಳಿಗೆ ಕಲ್ಲೆಸೆದು ಹಾನಿಗೊಳಿಸಿದ ಘಟನೆ ನಿನ್ನೆ ಉಳ್ಳಾಲ ಬಳಿಯ ಮೊಗವೀರಪಟ್ನದ ಬೀಚ್ ಬಳಿ ನಡೆದಿದೆ.
ರವಿವಾರ ಸಂಜೆ ಮೊಗವೀರಪಟ್ನ ಬೀಚ್ ಬಳಿ ಮಕ್ಕಳೊಂದಿಗೆ ಬೀಚ್ ವೀಕ್ಷಿಸಲು ಬಂದಿದ್ದ ಮದನಿ ನಗರ ನಿವಾಸಿ ಖತೀಜಮ್ಮ ಮೇಲೆ ಬೀಚ್ ಬಳಿ ಕಾರಿನಲ್ಲಿ ತಿರುಗಾಡುತ್ತಿದ್ದ ತಂಡವೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಗಾಯಗೊಂಡಿದ್ದು, ಇದನ್ನು ಪ್ರಶ್ನಿಸಿದ ಅಬೀಬ್ ಎಂಬುವವರ ಮೇಲೆ ಕಾರಿನಲಿದ್ದ ತಂಡ ಹಲ್ಲೆ ನಡೆಸಿ ಪರಾರಿಯಾಗಿದೆ. ಇದರಿಂದ ಉದ್ರಿಕ್ತರಾದ ತಂಡವೊಂದು ಉಳ್ಳಾಲ ಠಾಣೆಯೆದುರು ಗುಂಪು ಸೇರಿ ಹಲ್ಲೆ ನಡೆಸಿದವರನ್ನು ಕೂಡಲೆ ಬಂಧಿಸುವಂತೆ ಆಗ್ರಹಿಸಿದೆ. ಈ ವೇಳೆ ಪೊಲೀಸರು ಗುಂಪು ಸೇರಿದವರ ಛಾಯಾಚಿತ್ರ ತೆಗೆಯುತ್ತಿದ್ದು ಇದನ್ನು ಪ್ರತಿಭಟನಾಕಾರರು ವಿರೋಧಿಸಿದಾಗ ಪ್ರತಿಭಟನಾಕಾರರು ಹಾಗು ಪೊಲೀಸರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದೆ.
ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಪೊಲೀಸರು ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು. ಇದರಿಂದ ಆಕ್ರೋಶಿತ ತಂಡವೊಂದು ಒಂಬತ್ತುಕೆರೆ ಮತ್ತು ಮಾಸ್ತಿಕಟ್ಟೆ ಬಳಿ ಎರಡು ಬಸ್ಗಳಿಗೆ ಕಲ್ಲು ತೂರಾಟ ನಡೆಸಿದೆ. ಇದರಿಂದ ಬಸ್ಸಿನಲ್ಲಿದ್ದ ಇಬ್ಬರು ಮಹಿಳಾ ಪ್ರಯಾಣಿಕರು ಮತ್ತು ಇಬ್ಬರು ಚಾಲಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಕರಾವಳಿಗೆ ಆಗಮಿಸಿರುವ ಸಿಆರ್ಪಿಎಫ್ನ ತುಕಡಿಯನ್ನು ಘಟನಾ ಸ್ಥಳದಲ್ಲಿ ನೇಮಿಸಲಾಗಿದೆ. ಉಳ್ಳಾಲದ ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗು ಭದ್ರತೆ ಏರ್ಪಡಿಸಲಾಗಿದೆ.
Click this button or press Ctrl+G to toggle between Kannada and English