ಮಂಗಳೂರು : ಮೇ 5 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇದ್ದರೆ ಮಾತ್ರ ಮತದಾನ ಮಾಡಬಹುದು ಒಂದು ವೇಳೆ ಇಲ್ಲದಿದ್ದರೆ ಮತದಾನಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ದ.ಕ. ಜಿಲ್ಲಾಧಿಕಾರಿ ಹರ್ಷ ಗುಪ್ತಾ ತಿಳಿಸಿದ್ದಾರೆ. ಸೋಮವಾರ ಅವರು ತಮ್ಮ ಕಛೇರಿಯಿಂದಲೆ ವೈರ್ಲೆಸ್ ಮೂಲಕ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಲಿರುವ ದ.ಕ. ಜಿಲ್ಲೆಯ ವಿವಿಧ ತರಭೇತಿ ಕೇಂದ್ರಗಳ ಚುನಾವಣಾ ಸಿಬ್ಬಂದಿಗಳ ಸಂಪರ್ಕವನ್ನು ಏಕಕಾಲಕ್ಕೆ ಪಡೆದು ಮಾತನಾಡಿದರು.
ಮತದಾರರ ಪಟ್ಟಿಯಲ್ಲಿ ಹೆಸರಿದ್ದರೆ ಮಾತ್ರ ಮೇ 5ರಂದು ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಎಂದು ಹೇಳಿದ ಅವರು, ಮತದಾರರ ಪಟ್ಟಿಯಲ್ಲಿ ಹೆಸರಿದ್ದು, 23 ಗುರುತಿನ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಮತಗಟ್ಟೆ ಅಧಿಕಾರಿಗಳಿಗೆ ತೋರಿಸದಿದ್ದರೆ, ಅಂಥವರಿಗೂ ಮತದಾನಕ್ಕೆ ಅವಕಾಶ ನೀಡಬಾರದು ಎಂದು ಅವರು ಸೂಚಿಸಿದರು.
ಚುನಾವಣೆ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲ ಸಿಬ್ಬಂದಿಗಳು ನಿರ್ಭೀತಿ ಯಿಂದ ನ್ಯಾಯಯುತ, ನಿಷ್ಪಕ್ಷಪಾತ ಹಾಗೂ ಇತರರಿಗೆ ಮಾದರಿ ಯಾಗುವಂತೆ ತಮ್ಮ ಚುನಾವಣೆ ಕಾರ್ಯವನ್ನು ನಿರ್ವಹಿಸಬೇಕು ಎಂದರು. ಚುನಾವಣಾ ಕಾರ್ಯದಲ್ಲಿ ಯಾವುದೇ ಚುನಾವಣಾ ನೀತಿ ಉಲ್ಲಂಘನೆಯಂತಹ ಘಟನೆಗಲು ಕಂಡುಬಂದಲ್ಲಿ ಕೂಡಲೇ 1077 ಕ್ಕೆ ಫೋನ್ ಮೂಲಕ ತಿಳಿಸಲು ಸೂಚಿಸಿದರು. ಪೊಲೀಸ್, ಅರೆಸೇನಾ ಪಡೆ ಇನ್ನಿತರೆ ಸಿಬ್ಬಂದಿಯನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಿರುವ ಕಾರಣ ಕಾನೂನು ಸುವ್ಯವಸ್ಥೆ ಸಮಸ್ಯೆ ತಲೆದೋರುವುದಿಲ್ಲ ಎಂದು ಹೇಳಿದರು. ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English