ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ

6:20 PM, Monday, May 13th, 2013
Share
1 Star2 Stars3 Stars4 Stars5 Stars
(No Ratings Yet)
Loading...

Siddaramaiahಬೆಂಗಳೂರು : ಅಕ್ಷಯ ತೃತೀಯ ಮತ್ತು ಬಸವ ಜಯಂತಿಯ ವಿಶೇಷ ದಿನವಾದ ಸೋಮವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ   ಕರ್ನಾಟಕ ರಾಜ್ಯದ 28 ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನವರು ಅಧಿಕಾರ ಸ್ವೀಕರಿಸಿದರು.

ಸಹಸ್ರಾರು ಅಭಿಮಾನಿಗಳಿಂದ ಕಿಕ್ಕಿರಿದು ತುಂಬಿದ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯಪಾಲ ಹಂಸರಾಜ ಭಾರದ್ವಾಜ್‌ ರವರು ಸಿದ್ದರಾಮಯ್ಯನವರಿಗೆ ಪ್ರತಿಜ್ಗ್ನಾ ವಿಧಿ ಬೋಧಿಸಿದರು. ಭಯ, ಪಕ್ಷಪಾತ, ಯಾವುದೇ ದ್ವೇಷವಿಲ್ಲದೆ, ರಾಜ್ಯದ ಜನರಿಗೆ ಸಂವಿಧಾನಬದ್ದವಾಗಿ ಹಾಗು ಕಾನೂನಿಗೆ ಅನುಸಾರವಾಗಿ ಆಡಳಿತ ನೀಡುತ್ತೇನೆ ಎಂದು ಸತ್ಯದ ಹೆಸರಿನಲ್ಲಿ ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸಿದರು.

ಸಮಾರಂಭಕ್ಕೆ ಆಗಮಿಸುವ ಮುನ್ನ ಬೆಳಗ್ಗೆ ಸಿದ್ಧರಾಮಯ್ಯ ಅವರು ಚಾಲುಕ್ಯ ವೃತ್ಯದಲ್ಲಿರುವ ಬಸವೇಶ್ವರರ ವಿಗ್ರಹಕ್ಕೆ ಬಳಿಕ ಅಂಬೇಡ್ಕರ್‌, ನೆಹರೂ, ಸುಭಾಷ್‌ಚಂದ್ರ ಬೋಸ್‌ ಅವರ ಫೋಟೋಗಳಿಗೆ ಮಾಲಾರ್ಪಣೆ ಮಾಡಿದರು.

ಮಹಾರಾಷ್ಟ್ರದ ಮುಖ್ಯಮಂತ್ರಿ ಪೃಥ್ವೀರಾಜ್‌ ಚವಾಣ್‌,  ಹೈಕಮಾಂಡ್‌ನ‌ ನಾಯಕ ರಾದ ಲೂಸಿನೋ ಫೆಲೆರೋ ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್‌ ಫೆರ್ನಾಂಡಿಸ್‌, ರಾಜ್ಯ ಉಸ್ತುವಾರಿ ಮಧುಸೂದನ ಮಿರ್ಸಿ, ಹನುಮಂತ ರಾವ್‌, ಶಾಂತಾರಾಮ್‌ ಹಾಗೂ ಬಿ.ಕೆ. ಹರಿಪ್ರಸಾದ್‌, ಕೇಂದ್ರದ ಸಚಿವರಾದ ಮಲ್ಲಿಕಾರ್ಜುನ ಖರ್ಗೆ, ರೆಹಮಾನ್‌ ಖಾನ್‌, ಕೆ.ಎಚ್‌.  ಮುನಿಯಪ್ಪ, ವೀರಪ್ಪ ಮೊಲಿ ಮಾತ್ರವಲ್ಲದೆ, ರಾಜ್ಯದ ಎಲ್ಲ ಶಾಸಕರು ಹಾಗೂ ವಿಪಕ್ಷಗಳ ನಾಯಕರು, ಹಿರಿಯ ಮುಖಂಡರು ಉಪಸ್ಥಿತರಿದ್ದರು. ಅಲ್ಲದೆ ಬಿಎಸ್ ಆರ್ ಕಾಂಗ್ರೆಸ್ ನ ಶ್ರಿರಾಮುಲು, ಸಾಹಿತಿಗಳಾದ ಗಿರೀಶ್ ಕಾರ್ನಾಡ್, ಚಂಪಾ, ನಾಗತಿಹಳ್ಳಿ ಚಂದ್ರಶೇಖರ್ ಮೊದಲಾದವರು ಸಿದ್ದರಾಮಯ್ಯನವರಿಗೆ ಶುಭಾಶಯ ಕೋರಿದರು.

ಮೆಟ್ರೋ ಕಾಮಗಾರಿಯಿಂದಾಗಿ ಇದೇ ಮೊದಲ ಬಾರಿಗೆ ವಿಧಾನಸೌಧದ ಮೆಟ್ಟಿಲ ಮೇಲೆ ನಡೆಯಬೇಕಾಗಿದ್ದ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಕಂಠೀರವ ಕ್ರೀಡಾಂಗಣದಲ್ಲಿ ನಡೆಸಲಾಯಿತು. ಸಭಾಂಗಣದಲ್ಲಿ ಹಾಕಿದ್ದ 30 ಸಾವಿರ ಕುರ್ಚಿಗಳು ತುಂಬಿ ಹೊರಭಾಗದಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಕಂಠೀರವ ಕ್ರೀಡಾಂಗಣದ ಸುತ್ತಮುತ್ತ ಸಂಚಾರವನ್ನು ನಿಷೇಧಿಸಲಾಗಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English