ಮಂಗಳೂರು: ಮಂಗಳೂರು ಮತ್ತು ಭುವನೇಶ್ವರ ಪೊಲೀಸರು ಜಂಟಿಯಾಗಿ ಮೂಡಬಿದಿರೆ ಬಸದಿಯಲ್ಲಿ ನಡೆದ ವಿಗ್ರಹ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಸ್ಸಾದ ಭುವನೇಶ್ವರದಲ್ಲಿ ಬಂಧಿಸಲ್ಪಟ್ಟಿದ್ದ ಇಬ್ಬರನ್ನು ಬುಧವಾರ ನಗರಕ್ಕೆ ಕರೆತಂದಿದ್ದು, ಆರೋಪಿಗಳನ್ನು ನ್ಯಾಯಾದೀಶರ ಮುಂದೆ ಹಾಜರು ಪಡಿಸಿದ್ದು ಅವರಿಗೆ ಜುಲೈ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ವಿಗ್ರಹ ಕಳವು ಮಾಡಿರುವ ಸಂತೋಷ್ ದಾಸ್ ನ ಪತ್ನಿ ದೀಪ್ತಿಮಯಿ ಮೋಹಂತಿ ಮತ್ತು ಆಕೆಯ ತಂದೆ ದಿಗಂಬರ್ ಮೋಹಂತಿಯನ್ನು ಭುವನೇಶ್ವರದಲ್ಲಿ ಬಂಧಿಸಿದ್ದರು. ಬಂಧಿತ ಆರೋಪಿಗಳು ಪ್ರಮುಖ ಆರೋಪಿಯ ಮಾಹಿತಿ ನೀಡಲು ನಿರಾಕರಿಸಿದ್ದುದರಿಂದ ಪೊಲೀಸರು ಅವರನ್ನು ಬಂಧಿಸಿದರು.
ದಿಗಂಬರ್ ಒಡಿಸ್ಸಾ ಸರ್ಕಾರದ ನಗರಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಭುವನೇಶ್ವರದಲ್ಲಿ ದಾಳಿ ಮಾಡಿದ ವೇಳೆ ಪೊಲೀಸರು ಒಂದು ಕೆ.ಜಿ. ಬಂಗಾರ ಮತ್ತು ಮೂಡಬಿದರೆ ಬಸದಿಯಿಂದ ಕಳವಾಗಿದ್ದ ವಿಗ್ರಹಗಳನ್ನು ವಶಪಡಿಸಿಕೊಂಡಿದ್ದರು.
ಜುಲೈ 5ರಂದು ಮೂಡಬಿದರೆ ಬಸದಿಯಲ್ಲಿ ಕಳ್ಳತನ ನಡೆದಿದ್ದು, ಸುಮಾರು 15 ವಿಗ್ರಹಗಳು ಕಳವಾಗಿದ್ದವು.
Click this button or press Ctrl+G to toggle between Kannada and English