ಮಂಗಳೂರು : ಕೋರ್ಸ್ ಮುಗಿದ ನಂತರವೂ ಯಾವುದೇ ರೀತಿಯ ಉದ್ಯೋಗವನ್ನು ಕೊಡದಿರುವ ಅಕಾಡೆಮಿ ಕ್ಯಾರಿಯರ್ ಗೈಡೆನ್ಸ್ ಇನ್ಕಾರ್ಪೋರೇಶನ್ ಸಂಸ್ಥೆಯು ಸಂತೋಷ್ ಕುಮಾರ್ ಎಂಬುವವರ ವಿರುಧ್ಢ ವಿದ್ಯಾರ್ಥಿಗಳು ಹಾಗೂ ಹೆತ್ತವರು ಸೇರಿ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.
ನಗರದ ಬಿಕರ್ನಕಟ್ಟೆ ಬಳಿ ಇರುವ ಈ ಸಂಸ್ಥೆಯ ಸಂತೋಷ್ ಕುಮಾರ್ ಸೈನ್ಯದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳಿಂದ ಹಣ ಪಡೆದುಕೊಂಡು ಹಲವು ರೀತಿಯ ತರಬೇತಿಗಳನ್ನು ನೀಡುತ್ತಿದ್ದು, ತರಬೇತಿಯ ನಂತರ ಉದ್ಯೋಗ ಒದಗಿಸಿಕೊಡುವ ಆಮಿಷವೊಡ್ಡಿ ವಿದ್ಯಾರ್ಥಿಗಳನ್ನು ಸಂಸ್ಥೆಗೆ ಸೇರಿಸಿಕೊಂಡಿದ್ದರು.
ಹಣ ನೀಡಿ ಎಂಟು ತಿಂಗಳು ಕಳೆದರೂ ಕೆಲಸವೂ ಇಲ್ಲ, ನೀಡಿರುವ ಹಣದ ಸುದ್ದಿಯೂ ಇಲ್ಲ, ಭಾರತೀಯ ಭೂಸೇನೆಯಲ್ಲಿ ಕ್ಲರ್ಕ್, ತಾಂತ್ರಿಕ ಹಾಗೂ ಇನ್ನಿತರ ವಿಭಾಗಗಳಲ್ಲಿ ಖಾಯಂ ಕೆಲಸ ಕೊಡಿಸುವುದಾಗಿ ನಂಬಿಸಿ 3೦,೦೦೦ದಿಂದ 1.2ಲಕ್ಷ ರೂ. ವರೆಗೆ ವಿದ್ಯಾರ್ಥಿಗಳಿಂದ ಹಣ ಪಡೆದುಕೊಂಡಿದ್ದರು.
ಸಕಲೇಶಪುರದ ಮನೋಜ್ ಪಿ.ಡಿ ಎಂಬವರಿಂದ ರೂ.3೦,೦೦೦ ಹಣ ಪಡೆಯಲಾಗಿತ್ತು. ಮಂಜುನಾಥ್ ಬಿ.ಸಿ ಎಂಬಾತನನ್ನು ರೂ.5೦,೦೦೦ ನೀಡಿ ತರಬೇತಿ ಸಂಸ್ಥೆಗೆ ಚೆನ್ನಯ್ಯ ಎಂಬವರು ಸೇರಿಸಿದ್ದರು, ಅವರಿಗೆ ಸಂಸ್ಥೆಯವರು ವಾಪಸ್ಸು ನೀಡಿರುವ ಚೆಕ್ ಕೂಡಾ ಬೌನ್ಸ್ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಂಗಳೂರು ಹಾಗೂ ಉಡುಪಿಯ ಹೊರಭಾಗದಿಂದಲೂ ಸಂಸ್ಥೆಗೆ ವಿದ್ಯಾರ್ಥಿಗಳು ದಾಖಲಾಗಿದ್ದು ಇವರಿಗೆ ವಸತಿ ವ್ಯವಸ್ಥೆಯನ್ನು ಸಂಸ್ಥೆಯು ಮಾಡಿತ್ತು. ಆದರೆ ಹಲವು ಮಂದಿ ವಿದ್ಯಾರ್ಥಿಗಳಿಗೆ ಕೋರ್ಸ್ ಮುಕ್ತಾಯಗೊಂಡ ನಂತರವೂ ಯಾವುದೇ ರೀತಿಯ ಉದ್ಯೋಗವನ್ನು ಸಂಸ್ಥೆಯು ಒದಗಿಸಿಕೊಟ್ಟಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಸ್ಥಳಕ್ಕೆ ಕದ್ರಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ರಾಘವ ಪಡೀಲ್ ಹಾಗೂ ಎಸ್.ಐ ಮದನ್ ಕುಮಾರ್ ನೇತೃತ್ವದ ಪೊಲೀಸ್ ತಂಡವು ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದರು ಮತ್ತು ಸಂಸ್ಥೆಯ ವಿರುದ್ದ ಪ್ರಕರಣ ದಾಖಲಿಸಿ ಸೂಕ್ತ ತನಿಖೆಯ ಭರವಸೆ ನೀಡಿದರು.
Click this button or press Ctrl+G to toggle between Kannada and English