ಸಶಕ್ತ ಕಾರ್ಯನಿರ್ವಹಣೆಗೆ ಸಂಪನ್ಮೂಲ ಕ್ರೋಢೀಕರಣ ಅಗತ್ಯ: ಎ ಜೆ ಕೂಡ್ಗಿ

9:49 PM, Friday, December 3rd, 2010
Share
1 Star2 Stars3 Stars4 Stars5 Stars
(No Ratings Yet)
Loading...

ಎ ಜೆ ಕೂಡ್ಗಿಮಂಗಳೂರು  : ಅಧಿಕಾರ ವಿಕೇಂದ್ರೀಕರಣ ಪರಿಣಾಮಕಾರಿ ಅನುಷ್ಠಾನಕ್ಕೆ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಗಳು ಸ್ವತಂತ್ರವಾಗಿ ಸಂಪನ್ಮೂಲ ಕ್ರೋಢೀಕರಿಸಲು ಅವಕಾಶ ಕಲ್ಪಿಸಬೇಕೆಂದು 3ನೇ ರಾಜ್ಯ ಹಣಕಾಸು ಆಯೋಗ ಶಿಫಾರಸ್ಸುಗಳ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷರಾದ ಶ್ರೀ ಎ.ಜೆ. ಕೂಡ್ಗಿ ಅವರು ತಿಳಿಸಿದ್ದಾರೆ.
ಅವರಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಾ, 3ನೇ ಹಣಕಾಸು ಆಯೋಗ ಸ್ಥಳೀಯ ಸಂಸ್ಥೆಗಳ ಸಬಲೀಕರಣಕ್ಕೆ ಶಿಫಾರಸ್ಸು ಮಾಡಿರುವುದಾಗಿ ಹೇಳಿದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯಥೇಚ್ಛವಾಗಿ ಹಣದ ನೆರವು ನೀಡುತ್ತಿದ್ದರೂ ಅದರ ಸದ್ಬಳಕೆ ಆಗುತ್ತಿಲ್ಲ. ಗ್ರಾಮ ಪಂಚಾಯಿತಿಗಳಿಗೆ, ತಾಲೂಕು ಪಂಚಾಯಿತಿಗಳಿಗೆ ಹಾಗೂ ಜಿಲ್ಲಾ ಮಟ್ಟದ ಕಾಮಗಾರಿಗಳನ್ನು ವಿಭಾಗಿಸಿ ಆಯಾ ಪಂಚಾಯಿತಿಗಳಿಗೆ ಅನುಷ್ಠಾನದ ಹೊಣೆ ನೀಡಬೇಕೆಂದರು.

ಎ ಜೆ ಕೂಡ್ಗಿಗ್ರಾಮಪಂಚಾಯಿತಿಗಳು ತಮ್ಮ ಆರ್ಥಿಕ ಸಂಪನ್ಮೂಲ ವೃದ್ಧಿಗೆ ಕಟ್ಟಡಗಳ ನಿರ್ಮಾಣಕ್ಕೆ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕೆಂದರು. ದಕ್ಷಿಣ ಕನ್ನಡ ಜಿಲ್ಲೆಯ 125 ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 86 ಸಾವಿರ ಕುಡಿಯುವ ನೀರು ಸಂಪರ್ಕಗಳನ್ನು ಕಲ್ಪಿಸಿದ್ದು, ಇದರಲ್ಲಿ ಶೇ.60ರಷ್ಟು ಸಂಪರ್ಕಗಳಿಗೆ ಮೀಟರ್ ಅಳವಡಿಸಲಾಗಿದ್ದು, ಎಲ್ಲ ನೀರು ಸಂಪರ್ಕಗಳಿಗೆ ಕಡ್ಡಾಯವಾಗಿ ನೀರಿನ ತೆರಿಗೆ ಸಂಗ್ರಹಕ್ಕೆ ಕ್ರಮವಹಿಸಬೇಕೆಂದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ಗ್ರಾಮಪಂಚಾಯಿತಿಗಳಿಂದ ವಿದ್ಯುತ್ ದೀಪ ಹಾಗೂ ಕುಡಿಯುವ ನೀರು ಸರಬರಾಜಿಗೆ ಬಳಸಿದ ವಿದ್ಯುತ್ ಬಿಲ್ ಮೊತ್ತ 12 ಕೋಟಿ ರೂ. ಮೆಸ್ಕಾಂ ಗೆ ಬಾಕಿ ಇದೆ ಎಂದರು. ಒಟ್ಟು 248 ಪ್ರೌಢಶಾಲಾ ಕಟ್ಟಡಕ್ಕೆ ಆರ್ ಐ ಡಿಎಫ್ ಯೋಜನೆಯಡಿ 1134 ಲಕ್ಷ ಅಂದಾಜು ಸಲ್ಲಿಸಿದ್ದು 09-10ರಲ್ಲಿ 245 ಲಕ್ಷ ವೆಚ್ಚ ಮಾಡಲಾಗಿದೆ. 10-11ರಲ್ಲಿ 323 ಲಕ್ಷ ಬಿಡುಗಡೆಯಾಗಿದೆ. 460.65 ಲಕ್ಷ ರೂ. ಹಣದ ಅವಶ್ಯಕತೆ ಇದೆ ಎಂದು ಅಧ್ಯಕ್ಷರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀ ಚಾಮೇಗೌಡರು ತಿಳಿಸಿದರು.
ಜಿಲ್ಲೆಯಲ್ಲಿ ಅಕ್ಟೋಬರ್ 2010ರ ಅಂತ್ಯಕ್ಕೆ ರೂ. 9.14 ಕೋಟಿ ಗ್ರಾಮಪಂಚಾಯಿತಿಗಳಿಗೆ ತೆರಿಗೆ ಬಾಕಿ ಇದೆ ಎಂದ ಸಿಇಒ ಅವರು, ನೀರಿನ ಶುಲ್ಕ ಬಾಕಿ 3.24 ಕೋಟಿ ಇದೆ ಎಂದರು. ಗ್ರಾಮಪಂಚಾಯಿತಿಗಳ ಆದಾಯದ ಶೇ.25ರ ಹಣದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಕಲ್ಯಾಣ ಕಾರ್ಯ ಕ್ರಮಗಳಿಗೆ ಅಕ್ಟೋಬರ್ 2010ರ ಅಂತ್ಯದವರೆಗೆ ರೂ. 17.99 ಲಕ್ಷ ವೆಚ್ಚ ಮಾಡಲಾಗಿದೆ ಎಂದರು. ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀ ಜಗನ್ನಾಥ್ ಸಾಲಿಯಾನ್ ಅವರು ಪಾಲ್ಗೊಂಡಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English