ನಿಗದಿತ ವೇಳೆಯಲ್ಲಿ ನ್ಯಾಯಬೆಲೆ ಅಂಗಡಿಗಳು ತೆರೆದಿರಬೇಕು: ಜಿಲ್ಲಾಧಿಕಾರಿ ಸೂಚನೆ

10:02 PM, Wednesday, December 15th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ಮಂಗಳೂರು : ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 8ರಿಂದ 12ಗಂಟೆಯವರೆಗೆ, ಸಂಜೆ 4ರಿಂದ 8 ಗಂಟೆಯವರೆಗೆ ತೆರೆದಿರಬೇಕು. ಅಂಗಡಿಗಳಲ್ಲಿರುವ ಪದಾರ್ಥಗಳು ಮತ್ತು ಬೆಲೆ ಬಗ್ಗೆ ಸವಿವರ ಬೋರ್ಡ್ ಹಾಕಿರಬೇಕು; ತೂಕದಲ್ಲಿ ವ್ಯತ್ಯಾಸವಿದೆ ಎಂಬ ಆರೋಪಗಳು ಬರಬಾರದು ಎಂದು ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ಅವರು ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಮನ್ವಯ ಸಮಿತಿ ಪ್ರಗತಿ ಪರಿಶೀಲನೆ ಸಭೆಯನ್ನು ದ್ದೇಶಿಸಿ ಮಾತನಾಡುತ್ತಿದ್ದರು. ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಸಾರ್ವಜನಿಕರಿಂದ ಯಾವುದೇ ದೂರುಗಳು ಬರಬಾರದು ಎಂದು ಹೇಳಿದ ಅವರು, ಎರಡು ತಿಂಗಳಿಗೊಮ್ಮೆ ನಡೆಯುವ ನ್ಯಾಯಬೆಲೆ ಜಾಗೃತಿ ಸಮಿತಿಯ ವರದಿಯನ್ನು ಸಲ್ಲಿಸಲು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದರು. ಪಡಿತರ ವ್ಯವಸ್ಥೆಯನ್ನು ಸುವ್ಯವಸ್ಥಿತವಾಗಿರಿಸಲು ಹೆಚ್ಚಿನ ಜಾಗೂರಕತೆ ವಹಿಸಬೇಕೆಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಕಾರ್ಖಾನೆ ಮತ್ತು ಬಾಯ್ಲರುಗಳ ಹಿರಿಯ ಸಹಾಯಕ ನಿರ್ದೇಶಕರು ಮಾತನಾಡಿ, ಗೇರುಬೀಜ ಸಂಸ್ಕರಣಾ ಘಟಕಗಳಿಗೆ ಸಂಬಂಧಿತ ಇಲಾಖೆಗಳು ಸಹಾಯಧನ ನೀಡುವಾಗ ಬಾಯ್ಲರ್ ಗಳು ಉತ್ತಮ ಗುಣಮಟ್ಟದ್ದ (ಸ್ಟ್ಯಾಂಡರ್ಡ್) ನ್ನೇ ಖರೀದಿಸಬೇಕೆಂಬ ಷರತ್ತು ವಿಧಿಸಬೇಕು. ಇಲ್ಲದಿದ್ದರೆ ಅವಘಡ ಗಳು ಸಂಭವಿಸಿದರೆ ಹೆಚ್ಚಿನ ಅನಾಹುತ ಸಂಭವಿಸಬಹುದೆಂಬುದನ್ನು ಸಭೆಯ ಗಮನಕ್ಕೆ ತಂದರು.
ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ಕಾರ್ಮಿಕ ಇಲಾಖೆಯವರು ಸ್ಥಳ ಸಂದರ್ಶನದ ವೇಳೆ ಅಕ್ರಮಗಳು ಪತ್ತೆಯಾದರೆ ತಮ್ಮ ಇಲಾಖೆ ವ್ಯಾಪ್ತಿಗೆ ಸಂಬಂಧಿಸಿದಲ್ಲ ಎಂದು ನಿರ್ಲಕ್ಷ್ಯ ವಹಿಸದೆ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕೆಂದು ಸಭೆಗೆ ಸೂಚಿಸಿದರು. ಅಕ್ರಮ ಗಣಿಗಾರಿಕೆ, ಜೀತ, ಬಾಲ ಕಾರ್ಮಿಕ ಆಚರಣೆಗಳು ಪತ್ತೆಯಾದರೆ ತಕ್ಷಣವೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕೆಂದರು.
ಆರೋಗ್ಯ ಇಲಾಖೆ, ಪರಿಸರ ಇಲಾಖೆ, ಲೋಕೋಪಯೋಗಿ ಇಲಾಖೆ, ತೋಟಗಾರಿಕೆ ಇಲಾಖೆಗಳಲ್ಲಿ ಸಮನ್ವಯದ ಕೊರತೆಯಿಂದ ಸಂಭವಿಸಿದ ಲೋಪಗಳನ್ನು ಸರಿಪಡಿಸಿಕೊಳ್ಳುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಹಲವು ಇಲಾಖೆಗಳಿಗೆ ಕಟ್ಟಡಕ್ಕೆ ಜಮೀನಿಲ್ಲ ಎಂಬ ಬೇಡಿಕೆಯು ಸಭೆಯಲ್ಲಿ ಮಂಡನೆಯಾಯಿತು. ಮೆಸ್ಕಾಂ ಮತ್ತು ಲೋಕೋಪಯೋಗಿ ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದ ವಿಳಂಬಿಸಬಹುದಾದ ಯೋಜನೆಗಳ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು. ಪ್ರವಾಸೋದ್ಯಮ ಇಲಾಖೆಯಿಂದ ಕೈಗೆತ್ತಿಕೊಂಡ ಕಾಮಗಾರಿ ವಿಳಂಬಕ್ಕೆ ಕಾರಣ ಹಾಗೂ ಪರ್ಯಾಯಗಳ ಬಗ್ಗೆ ಚರ್ಚಿಸಲಾಯಿತಲ್ಲದೆ, ಹೋಮ್ ಗಾರ್ಡ್ಸ್ ಸಿಬ್ಬಂದಿಗೆ ಐದಾರು ತಿಂಗಳಿಂದ ಸಂಬಳ ನೀಡದಿರುವ ಬಗ್ಗೆ ಹೋಮ್ ಗಾರ್ಡ್ಸ್ ಕಮಾಂಡೆಂಟ್ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ನಗರದಲ್ಲಿ ಘನತ್ಯಾಜ್ಯ ವಿಲೇವಾರಿಯ ಬಗ್ಗೆ ಕೈಗೊಂಡಿರುವ ಕ್ರಮಗಳ ಬಗ್ಗೆ, ಜಿಲ್ಲಾ ಆಸ್ಪತ್ರೆಗಳಲ್ಲಿ ತ್ಯಾಜ್ಯ ವಿಲೇವಾರಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ವಿಸ್ತೃತ ವರದಿ ಸಲ್ಲಿಸಿದರು. ಗಣಿ ಮತ್ತು ವಿಜ್ಞಾನ ಇಲಾಖೆಯವರು ಜಿಲ್ಲಾಧಿಕಾರಿ ಕ್ರಮಕೈಗೊಳ್ಳಲು ಕಾಯದೇ ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ತಕ್ಷಣವೇ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮೂಡಬಿದರೆ ಬೈಪಾಸ್ ರಸ್ತೆ ಕಾಮಗಾರಿ ಅಭಿವೃದ್ಧಿಯ ಬಗ್ಗೆ ತಕ್ಷಣವೇ ವರದಿ ಸಲ್ಲಿಸಲು ಸೂಚಿಸಿದರು. ಸಭೆಯಲ್ಲಿ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಸಭೆಗೆ ಹಾಜರಾಗದ ಇಲಾಖೆಯ ಅಭಿವೃದ್ಧಿಯಲ್ಲಿ ಕೊರತೆಯಾದರೆ ಅದಕ್ಕೇ ಆಯಾ ಇಲಾಖೆಗಳ ಅಧಿಕಾರಿಗಳೇ ಸಂಪೂರ್ಣ ಹೊಣೆ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ ಶರ್ಮ, ಡಿಸಿಪಿ ಶ್ರಿ ಮುತ್ತೂರಾಯ, ಸಿಇಒ ಶ್ರೀ ಪಿ.ಶಿವಶಂಕರ್ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English