ದೇಶ ಪ್ರೇಮವುಳ್ಳ ಹಾಗೂ ನಿಸ್ವಾರ್ಥ ಮನೋಭಾವದ ವಕೀಲರು ಬೇಕು : ನಗರೇಶ್

8:06 PM, Sunday, August 24th, 2014
Share
1 Star2 Stars3 Stars4 Stars5 Stars
(5 rating, 4 votes)
Loading...
adhivakta

ಮಂಗಳೂರು: ಸಾಮಾಜಿಕ ಬದಲಾವಣೆಗೆ ಕಾನೂನು ಉತ್ತಮ ಸಾಧನವಾಗಿದೆ. ಜನಸಾಮಾನ್ಯರಿಗೂ ಕಾನೂನು ಸೇವೆ ಸುಲಭವಾಗಿ ಸಿಗಬೇಕು ಎನ್ನುವ ಉದ್ದೇಶದಿಂದ ಅಧಿವಕ್ತಾ ಪರಿಷತ್ ಸ್ಥಾಪನೆಯಾಗಿದೆ ಎಂದು ಸಾಲಿಸಿಟರ್ ಜನರಲ್ ಆಫ್ ಇಂಡಿಯಾದ ಸದಸ್ಯ, ಕೇರಳ ಬಾರ್ ಅಸೋಸಿಯೇಶನ್ ಸದಸ್ಯ ನಗರೇಶ್ ಹೇಳಿದರು.

ಅವರು ಭಾನುವಾರ ಎಸ್‌ಡಿಎಂ ಉದ್ಯಮಾಡಳಿತ ಕಾಲೇಜಿನ ಸಭಾಂಗಣದಲ್ಲಿ ಅಧಿವಕ್ತಾ ಪರಿಷತ್‌ನ ದ.ಕ.ಜಿಲ್ಲಾ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಜನ ಸಾಮಾನ್ಯರ ಸೇವೆ ಮಾಡುವ ರಾಜಕೀಯೇತರ ವಕೀಲರ ಸಂಘಟನೆಯೇ ಅಧಿವಕ್ತಾ ಪರಿಷತ್ ಆಗಿದೆ. ದೇಶದಲ್ಲಿ ಸಾವಿರಾರು ವಕೀಲರ ಸಂಘಟನೆಗಳಿದ್ದು, ಕೆಲವು ರಾಜಕೀಯ ಪಕ್ಷಗಳಿಗಾಗಿಯೇ ಕಾನೂನು ಸೇವೆ ಒದಗಿಸುತ್ತವೆ. ಈ ನಿಟ್ಟಿನಲ್ಲಿ ರಾಜಕೀಯೇತರ ಹಾಗೂ ನಿಸ್ವಾರ್ಥ ಸೇವಾ ಮನೋಭಾವ ಬೆಳೆಸಿಕೊಂಡಿರುವ ಸಂಸ್ಥೆ ಅಧಿವಕ್ತಾ ಪರಿಷತ್ ಎಂದ ಅವರು ಪರಿಷತ್‌ನ ಉದ್ದೇಶ ಈಡೇರಿಕೆಗೆ ದೇಶ ಪ್ರೇಮವುಳ್ಳ ಹಾಗೂ ನಿಸ್ವಾರ್ಥ ಮನೋಭಾವದ ವಕೀಲರು ಮುಂದೆ ಬರಬೇಕು ಎಂದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ದೇಶದ ಆಡಳಿತದಲ್ಲಿ ಹೆಚ್ಚಿನವರು ವಕೀಲರಿದ್ದಾರೆ. ಮಹಾತ್ಮಾಗಾಂಧೀಜಿ, ಮೋತಿ ಲಾಲ್ ನೆಹರೂ, ಅಂಬೇಡ್ಕರ್ ಅವರಂಥ ಹೆಚ್ಚಿನ ನಾಯಕರೆಲ್ಲ ಕಾನೂನು ಓದಿದ್ದಾರೆ. ಈ ಹಿಂದಿನ ಯುಪಿಎ-2 ಸರಕಾರದಲ್ಲಿ ಲೋಕಸಭೆಯಲ್ಲಿ 87 ಹಾಗೂ ರಾಜ್ಯ ಸಭೆಯಲ್ಲಿ 84 ಸಂಸದರು ವಕೀಲರೇ ಆಗಿದ್ದರು. ಕರ್ನಾಟಕ ಸರಕಾರದಲ್ಲೂ ಕಾನೂನು ಓದಿದ ಶಾಸಕರ ಪ್ರಮಾಣ ಶೇ.15 ಕ್ಕೂ ಹೆಚ್ಚಿರಬಹುದು ಎಂದರು.

ಮಂಗಳೂರು ಬಾರ್ ಕೌನ್ಸಿಲ್ ಅಧ್ಯಕ್ಷ ಅಶೋಕ್ ಆರಿಗ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಬಾರ್ ಅಸೋಸಿಯೇಶನ್ ರಾಜ್ಯ ಉಪಾಧ್ಯಕ್ಷ ರವೀಂದ್ರನಾಥ ರೈ, ರಾಜ್ಯಾಧ್ಯಕ್ಷ ಎಲ್.ಎನ್.ಹೆಗಡೆ, ರಾಷ್ಟ್ರೀಯ ಕಾರ‍್ಯಕಾರಿಣಿ ಸದಸ್ಯ ಕೆ.ಶಂಭು ಶರ್ಮಾ ನೂತನ ಜಿಲ್ಲಾ ಘಟಕದ ಘೋಷಣೆ ಮಾಡಿದರು.

ಅಧಿವಕ್ತಾ ಪರಿಷತ್ ಜಿಲ್ಲಾಧ್ಯಕ್ಷ ರವೀಂದ್ರನಾಥ ಪಿ.ಎಸ್.ಸ್ವಾಗತಿಸಿದರು. ಮಯೂರ ಕೀರ್ತಿ ನಿರ್ವಹಿಸಿ, ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಶೆಟ್ಟಿ ವಂದಿಸಿದರು.

adhivakta

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English