ಮಂಗಳೂರು ಮಹಾನಗರ ಪಾಲಿಕೆ ಸಾಮಾನ್ಯ ಸಭೆ – ಮಂಗಳೂರು ಒನ್‌ ತನಿಖೆಗೆ ಸದನ ಸಮಿತಿ

3:02 PM, Tuesday, September 30th, 2014
Share
1 Star2 Stars3 Stars4 Stars5 Stars
(4 rating, 3 votes)
Loading...

mcc1-k

ಮಂಗಳೂರು: ಮಂಗಳೂರು ಒನ್‌ ಸೇವಾ ಕೇಂದ್ರಗಳು ಜನರಿಂದ ಸಂಗ್ರಹಿಸಿದ ಆಸ್ತಿ ತೆರಿಗೆಯನ್ನು ಕ್ಲಪ್ತ ಸಮಯದಲ್ಲಿ ಪಾಲಿಕೆಯ ಖಾತೆಗೆ ಪಾವತಿಸುತ್ತಿಲ್ಲ. ಪಾಲಿಕೆಗೆ ಸಂದಾಯ­ವಾದ ಮೊತ್ತ ಹಾಗೂ ಸೇವಾ ಕೇಂದ್ರಗಳು ಸಂಗ್ರಹಿಸಿರುವ ಮೊತ್ತದಲ್ಲಿ ₨ 2.5 ಕೋಟಿ­ಯಷ್ಟು ವ್ಯತ್ಯಯ ಕಂಡುಬಂದಿದೆ’ ಎಂದು  ಪಾಲಿಕೆ ಸದಸ್ಯ ವಿಜಯ ಕುಮಾರ್‌ ಶೆಟ್ಟಿ ಆರೋಪಿಸಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಮೇಯರ್‌ ಮಹಾಬಲ ಮಾರ್ಲ ಅವರು, ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲು ಸದನ ಸಮಿತಿಯನ್ನು ನೇಮಿಸಿದರು. ಪಾಲಿಕೆ ಸಭಾಂಗಣದಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ವಿಜಯ ಕುಮಾರ್‌ ಶೆಟ್ಟಿ, ‘ನಗರದ ನಾಲ್ಕು ಸೇವಾ ಕೇಂದ್ರಗಳು 2010ರ ಜೂ 25ರಿಂದ 2014ರ ಸೆ. 25ರವರೆಗೆ  ₨ 112.99 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿವೆ. ಆದರೆ, ಪಾಲಿಕೆಗೆ ಪಾವತಿಸಿರುವುದು ₨ 109.20 ಮಾತ್ರ. ಇಷ್ಟೊಂದು ಪ್ರಮಾಣದ ಹಣವನ್ನು ಆ ಸಂಸ್ಥೆ ಬಾಕಿ ಉಳಿಸಿಕೊಂಡಿ­ದ್ದಾದರೂ ಏಕೆ? ಈ ವಿಚಾರ ಪಾಲಿಕೆ ಅಧಿಕಾರಿ­ಗಳ ಗಮನಕ್ಕೆ ಬಂದಿಲ್ಲ ಏಕೆ?’ ಎಂದು ಪ್ರಶ್ನಿಸಿದರು.

‘ನಗರದ ವ್ಯಾಪ್ತಿಯಲ್ಲಿ 1996ರ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಭಾರಿ ಗಾತ್ರದ ಜಾಹೀರಾತು ಫಲಕಗಳನ್ನು (ಹೋರ್ಡಿಂಗ್‌) ಅಳವಡಿಸುವುದಕ್ಕೆ ಪರವಾನಗಿ ನೀಡುತ್ತಿಲ್ಲ. ಆದರೂ ಅಕ್ರಮವಾಗಿ ಹೋರ್ಡಿಂಗ್‌ ಅಳವ­ಡಿಸ­ಲಾಗುತ್ತಿದೆ’ ಎಂದು  ಆರೋಪಿಸಿದರು.

ಮಂಗಳೂರು ಒನ್‌ನಿಂದ ಪಾಲಿಕೆಗೆ ಬಾಕಿ ಆಗಿರುವ ಮೊತ್ತ ಹಾಗೂ ಅಕ್ರಮ ಹೋರ್ಡಿಂಗ್‌ಗಳಿಂದ ಆಗಿರಬಹುದಾದ ನಷ್ಟದ ಬಗ್ಗೆ ತನಿಖೆ ನಡೆಸಲು ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಿಸಿದ ಮೇಯರ್‌,  10 ದಿನಗಳ ಒಳಗೆ ವರದಿ ನೀಡುವಂತೆ ಸೂಚಿಸಿದರು.

ಆಡಳಿತ ಪಕ್ಷದ ಎ.ಸಿ.ವಿನಯರಾಜ್‌, ದೀಪಕ್‌, ನವೀನ್‌  ಡಿಸೋಜ, ಬಿಜೆಪಿಯ ವಿಜಯ ಕುಮಾರ್‌ ಶೆಟ್ಟಿ ಹಾಗೂ ರಾಜೇಶ್‌ ಸಮಿತಿಯಲ್ಲಿದ್ದಾರೆ.‘ಮಂಗಳೂರು ದರ್ಶನ’ ಸಂಪುಟ ರಚನೆಗೆ ₨ 25 ಲಕ್ಷ ಬಿಡುಗಡೆಗೆ, ನಗರದ ಹಂಪನಕಟ್ಟೆ, ಪಿವಿಎಸ್‌, ಅಂಬೇಡ್ಕರ್‌ (ಜ್ಯೋತಿ) ವೃತ್ತ ಹಾಗೂ ಇತರ 13 ವೃತ್ತಗಳ ಅಭಿವೃದ್ಧಿಗೆ ಮಂಜೂರಾತಿ ನೀಡಲಾಯಿತು. ಉಪ ಮೇಯರ್ ಕವಿತಾ, ಪಾಲಿಕೆ ಪ್ರಭಾರ ಆಯುಕ್ತ ಗೋಕುಲ್‌ದಾಸ್ ನಾಯಕ್‌ ಮತ್ತಿತರರು ಉಪಸ್ಥಿತರಿದ್ದರು.

MCC-K

mcc2-k

mcc3-k

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English