ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ನೂತನ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಇಂದು ಬೆಳಿಗ್ಗೆ ಪಾಲಿಕೆಯ ಸಭಾಂಗಣದಲ್ಲಿ ನಡೆಯಿತು.
ಮಂಗಳೂರು ಮಹಾನಗರಪಾಲಿಕೆ 60 ಸದಸ್ಯರನ್ನು ಹೊಂದಿದೆ. ಅದರಲ್ಲಿ ಬಿಜೆಪಿ 35 ಸದಸ್ಯರನ್ನು, ಕಾಂಗ್ರೆಸ್ 21 ಸದಸ್ಯರನ್ನು ಹಾಗೂ 5ಸದಸ್ಯರು ಪಕ್ಷೇತರರು.
ಮೈಸೂರು ವಿಭಾಗದ ಪ್ರಾದೇಶಿಕ ಅಯುಕ್ತೆ ಶ್ರೀಮತಿ ಜಯಂತಿ ಹಾಗೂ ಮನಪಾ ಅಯುಕ್ತ ಡಾ| ಕೆ.ಎನ್. ವಿಜಯಪ್ರಕಾಶ್ ಅವರ ಸಮಕ್ಷಮದಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ನೂತನ ಮೇಯರ್ ಆಗಿ ಪ್ರವೀಣ್ ಹಾಗೂ ಉಪಮೇಯರ್ ಆಗಿ ಶ್ರೀಮತಿ ಎನ್. ಗೀತಾ. ಎನ್. ನಾಯಕ್ ಅವರು ಅಯ್ಕೆಯಾಗಿದ್ದಾರೆ.
ಸದಸ್ಯರು ಕೈ ಎತ್ತುವ ಮೂಲಕ ಮೇಯರ್ ಅಯ್ಕೆಯನ್ನು ನಡೆಸಲಾಯಿತು. ಪ್ರವೀಣ್ ಅವರು 34 ಮತಗಳನ್ನು ಪಡೆದರೆ ಕಾಂಗ್ರೆಸ್ನ ಅಪ್ಪಿ ಅವರಿಗೆ 22 ಮತಗಳು ದೊರೆತವು. ನಾಲ್ಕು ಮಂದಿ ಪಕ್ಷೇತರ ಸದಸ್ಯರು ತಟಸ್ಥರಾಗಿ ಉಳಿದರೆ, ಬಿಜೆಪಿಯ ಹರೀಶ್ ಮತ್ತು ಪಕ್ಷೇತರ ಜ್ಯೋತಿ ಜಯಪ್ರಕಾಶ್ ಗೈರು ಹಾಜರಾಗಿದ್ದರು.
ಪ್ರವೀಣ್ ನಗರದ 24ನೇ ದೇರೆಬೈಲ್ (ದಕ್ಷಿಣ) ವಾರ್ಡಿನ ಸದಸ್ಯರು. ಇದೇ ಪ್ರಥಮ ಬಾರಿಗೆ ಮನಪಾ ಸದಸ್ಯರಾಗಿ ಅಯ್ಕೆ ಹೊಂದಿದ ಇವರಿಗೆ ಈ ಬಾರಿಯ ಮೇಯರ್ ಪಟ್ಟ ಒಲಿದಿದೆ. ಶ್ರೀಮತಿ ಗೀತಾ.ಎನ್. ನಾಯಕ್ 28ನೇ ಮಣ್ಣಗುಡ್ಡೆ ವಾರ್ಡಿನ ಸದಸ್ಯೆಯಾಗಿದ್ದಾರೆ.
ಈ ಬಾರಿ ಮೇಯರ್ ಹುದ್ದೆ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಪರಿಶಿಷ್ಟ ಜಾತಿಯ ಇಬ್ಬರೇ ಸದಸ್ಯರನ್ನು ಹೊಂದಿದ್ದ ಬಿಜೆಪಿಯಲ್ಲಿ ಅಮಿತಕಲಾ ಹಾಗೂ ಪ್ರವೀಣ್ ಮೇಯರ್ ಹುದ್ದೆಗೆ ಪೈಪೋಟಿ ನಡೆಸಿದ್ದರು. ಆರಂಭಿಕ ಹಂತದಲ್ಲಿ ಅಮಿತಕಲಾ ಅವರು ಮೇಯರ್ ಎನ್ನುವ ಮಾತಿಗಳಿದ್ದರೂ, ಅನಂತರ ಪಕ್ಷದ ನಾಯಕರು ಪ್ರವೀಣ್ ಅವರನ್ನು ಆಯ್ಕೆ ಮಾಡಿದೆ.
ಉಪಮೇಯರ್ ಹುದ್ದೆ ಮಹಿಳೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಶ್ರೀಮತಿ ಗೀತಾ ಎನ್. ನಾಯಕ್ ಹಾಗೂ ಸುರೇಖ ಶ್ರೀನಿವಾಸ ಅವರ ಹೆಸರುಗಳು ಕೇಳಿಬಂದಿದ್ದವು. ಉಪಮೇಯರ್ ಹುದ್ದೆಯನ್ನು ಈ ಬಾರಿ ಗೌಡ ಸಾರಸ್ವತ ಸಮಾಜಕ್ಕೆ ನೀಡಬೇಕೆಂದು ತೀರ್ಮಾನಿಸಿದ ಹಿನ್ನಲೆಯಲ್ಲಿ ಗೀತಾ.ಎನ್. ನಾಯಕ್ ಅವರ ಆಯ್ಕೆ ನಡೆಯಿತು.
ಕಾಂಗ್ರೆಸ್ ಗೆಲ್ಲುವ ಅವಕಾಶವಿಲ್ಲದಿದ್ದರೂ, ಅಪ್ಪಿ ಅವರನ್ನು ಮೇಯರ್ ಸ್ಥಾನಕ್ಕೆ ಮತ್ತು ಉಪ ಮೇಯರ್ ಹುದ್ದೆಗೆ ಎಚ್. ಮಮತಾ ಶೆಣೈ ಅವರನ್ನು ಸ್ಫರ್ದೆಗೆ ಇಳಿಸಿತ್ತು.
Click this button or press Ctrl+G to toggle between Kannada and English