ಮಂಗಳೂರು: ಎತ್ತಿನಹೊಳೆ ಯೋಜನೆಯನ್ನು ದ.ಕ ಜಿಲ್ಲೆಯ ಜನತೆ ತೀವ್ರವಾಗಿ ವಿರೋದಿಸುತ್ತಿದ್ದರೂ ರಾಜ್ಯ ಸರಕಾರ ಕಡೆಗಣಿಸಿದುದ್ದರಿಂದ ಅ.15 ರಂದು ಮಂಗಳೂರಿನ ಪಂಪ್ ವೆಲ್ ನಲ್ಲಿ ರಸ್ತೆ ತಡೆ ಮತ್ತು ಜೈಲ್ ಭರೋ ನಡೆಸಲಾಗುವುದು ಎಂದು ನೇತ್ರಾವತಿ ನದಿ ಸಂರಕ್ಷಣಾ ಒಕ್ಕೂಟದ ಅಧ್ಯಕ್ಷ ಡಾ.ನಿರಂಜನ್ ರೈ ತಿಳಿಸಿದ್ದಾರೆ.
ಅವರು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಆ ದಿನ ಬೆಳಿಗ್ಗೆ 10.30ಕ್ಕೆ ಪಂಪ್ ವೆಲ್ ನಲ್ಲಿ ರಸ್ತೆ ತಡೆ ಹಮ್ಮಿಕೊಳ್ಳಲಾಗಿದೆ. ಈ ಹೋರಾಟದಲ್ಲಿ ಪಕ್ಷ ಬೇದ ಮರೆತು ಎಲ್ಲರೂ ಒಟ್ಟಾಗ ಬೇಕೆಂದು ಅವರು ವಿನಂತಿಸಿದರು .
ಸಂಸದ ನಳಿನ್ ಕುಮಾರ್ ಕಟೀಲ್, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕ ವಸಂತ ಬಂಗೇರ, ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಸಹಿತ ಇನ್ನೂ ಅನೇಕರು ವಿರೋಧಿಸುತ್ತಿದ್ದು ಇದು ಉತ್ತಮ ಬೆಳವಣಿಗೆಯಾಗಿದ್ದು ಹಲವಾರು ಸಂಘಟನೆಗಳು ಕೂಡಾ ಈ ಯೋಜನೆ ವಿರುದ್ಧ ಸೆಟೆದು ನಿಲ್ಲುತ್ತವೆ ಎಂದರು.
ಕೋಲಾರದ ಜನತೆಗೆ ನೀರು ಒದಗಿಸಲು ನಮ್ಮ ವಿರೋಧವಿಲ್ಲ. ಪಶ್ಚಿಮ ಘಟ್ಟವನ್ನು ಹಾಳುಗೆಡವಿ ನೀರನ್ನು ಪಂಪ್ ಮಾಡಿ ಸಾಗಿಸುವುದಕ್ಕೆ ವಿರೋಧ ಎಂದು ನುಡಿದ ಡಾ. ನಿರಂಜನ್ ನಮ್ಮ ಹಕ್ಕೊತ್ತಾಯ ಈ ಯೋಜನೆಯನ್ನು ಕೈಬಿಡಬೇಕೆನ್ನುವುದಾಗಿದೆ ಎಂದರು.
ದಿನೇಶ್ ಹೊಳ್ಳ ಹಾಗೂ ಎಂ.ಜಿ. ಹೆಗ್ಡೆ ಮಾತನಾಡಿ ಸುಮಾರು ಎರಡು ಗಂಟೆಗಳ ಕಾಲ ಹೆದ್ದಾರಿಯನ್ನು ತಡೆಯುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸರ್ವ ಕಾಲೇಜ್ ವಿದ್ಯಾರ್ಥಿ ನಾಯಕ ದಿನಕರ್ ಶೆಟ್ಟಿ, ಶಶಿಧರ್ ಶೆಟ್ಟಿ, ರಹೀಮ್ ಉಚ್ಚಿಲ್, ಕಟೀಲ್ ದಿನೇಶ್ ಪೈ, ಆನಂದ ಅಡ್ಯಾರ್, ಶಶಿರಾಜ್ ಶೆಟ್ಟಿ ಮುಂತಾದವರಿದ್ದರು.
Click this button or press Ctrl+G to toggle between Kannada and English