ಕುಂಬಳೆ : ಕಣಿಪುರ ಜಾತ್ರೆಯ ಇತಿಹಾಸ ಪ್ರಸಿದ್ಧ ಕುಂಬಳೆ ಬೆಡಿ ಮಹೋತ್ಸವವು ಸಹಾಸ್ರಾರು ಭಕ್ತ ಜನಸಾಗರದ ಮಧ್ಯೆ ಭಾನುವಾರ ರಾತ್ರಿ ನಡೆಯಿತು. ರಾತ್ರಿ ದೇವರ ಬಲಿ ವಾದ್ಯಘೋಷದ ಮೆರವಣಿಗೆಯಲ್ಲಿ ಬೆಡಿಕಟ್ಟೆಗೆ ತೆರಳಿ ದೇವರು ಬೆಡಿಕಟ್ಟೆಯಲ್ಲಿ ವಿರಾಜಮಾನವಾದ ಬಳಿಕ ಸಂಪ್ರದಾಯದಂತೆ ದೇವರ ದೀಪದಿಂದ ಹಣತೆಯಲ್ಲಿ ನೀಡಿದ ದೀಪದಲ್ಲಿ ಬೆಡಿಗೆ ಬೆಂಕಿ ಹಚ್ಚಲಾಯಿತು. ಬಳಿಕ ಸುಮಾರು ಒಂದು ಗಂಟೆಗಳ ಕಾಲ ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿದ ಬೆಡಿ ಪ್ರದರ್ಶನ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿತು.
ವಿವಿಧ ಕಲರ್ ಔಟ್ಗಳು, ಚೈನೀಸ್ ಔಟ್ಗಳು ಬಾನಲ್ಲಿ ಸ್ಪೋಟದೊಂದಿಗೆ ಮಿನುಗಿದ ಬಣ್ಣಬಣ್ಣದ ನಕ್ಷತ್ರಗಳನ್ನು ಕಣ್ಣಿಗೆ ಮುದ ನೀಡಿತು.ನೆಲದಿಂದ ಜಿಗಿದ ರಾಕೆಟ್ಗಳು ಆಕಾಶದೆತ್ತರಕ್ಕೆ ಜಿಗಿದು ಸಿಡಿದು ಕೌತುಕ ಸೃಷ್ಟಿಸಿತು. ಇದರಿಂದ ಸಿಡಿದ ಬಣ್ಣ ಬಣ್ಣದ ವರ್ಣಮಯ ನಕ್ಷತ್ರಗಳು,ಶೂನ್ಯದಲ್ಲಿ ಪ್ರತ್ಯಕ್ಷವಾದ ಬೆಂಕಿ ಕೊಡೆಗಳು, ಹಾರಗಳು ಮತ್ತು ಪ್ಯಾರಾ ಚೂಟ್ ಕೊಡೆಗಳು ಭಕ್ತರನ್ನು ಬೆರಗುಗೊಳಿಸಿತು. ಫಿನಿಶಿಂಗ್ ಪಾಯಿಂಟ್ ನ ಕೊನೆಗೆ ಏಕ ಕಾಲಕ್ಕೆ ಸಿಡಿದ ಕಿವಿಗಡ ಚಿಕ್ಕುವ ಭಯಾನಕ ಬೆಡಿಗಳು ಆರಂಭದಲ್ಲಿ ಕರ್ಣಾನಂದಗೊಳಿಸಿ ಕೊನೆಗೆ ಭಕ್ತರ ಕಿವಿ ಮುಚ್ಚಿಸಿತಲ್ಲದೆ ಇದರಿಂದ ಎದ್ದ ಬೆಂಕಿಯ ಜ್ವಾಲೆ ರಾತ್ರಿಯನ್ನು ಬೆಳಕಾಗಿಸಿ ಬೆರಗುಗೊಳಿಸಿತು.ಒಂದರ ಹಿಂದೆ ಒಂದರಂತೆ ಸಿಡಿದ ಬೆಡಿಗಳು ಆಕಾಶದಲ್ಲಿ ನಕ್ಷತ್ರದೊಂದಿಗೆ ಬೆಳಗಿ ಸಪ್ತ ವರ್ಣದ ಬೆಳಕು ಮೂಡಿಸಿದರೆ ಇದರ ಹೊಗೆ ಕಾರ್ಮೋಡ ಸೃಷ್ಟಿಸಿತು.ಬೆಡಿ ಕಟ್ಟೆ ,ಶಾಲಾ ಮೈದಾನ ಪೊಲೀಸ್ ಠಾಣೆ ಸುತ್ತ ಮುತ್ತ ನೆರೆದ ಸಹಸ್ರ ಭಕ್ತ ಜನಸಾಗರ ಕಣ್ತುಂಬ ಈ ದೃಶ್ಯವನ್ನು ವೀಕ್ಷಿಸಿ ಕೇಕೆಹಾಕಿ ಸವಿದರು.ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಮಹಿಳೆಯರು ಮಕ್ಕಳು ವಿಸ್ಮಯ ಲೋಕದಲ್ಲಿ ತಲ್ಲೀನರಾದರು.
ಯಾವುದಾದರೂ ಅಹಿತಕರ ಘಟನೆ ನಡೆದಲ್ಲಿ ಸಚಿತ್ರ ದಾಖಲಾಗುವ ಆಧುನಿಕ ತಂತ್ರ ಜ್ಞಾನದ ಹೆಲಿಕಾಂ ಉಪಕರಣ ಆಕಾಶದಲ್ಲಿ ಸುತ್ತಾಡುತ್ತಿರುವುದು ವಿಶೇಷವಾಗಿತ್ತು.
ಬೆಡಿ ಸಿಡಿಯುವ ಮೈದಾನದ ಸುತ್ತ ಹತ್ತು ಕಡೆಗಳಲ್ಲಿ ಮತ್ತು ಕ್ಷೇತ್ರ ಪರಿಸರದಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಲಾಗಿತ್ತು.ಬೆಡಿ ವೀಕ್ಷಣಗೆ ದೂರದೂರಿನಿಂದಲೂ ವಿಶೇಷ ವಾಹನಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು.ಜಾತ್ರೆಯು ಜ.18ರಂದು ಸಂಪನ್ನಗೊಂಡಿತು.ಕುಂಬಳೆ: ಇತಿಹಾಸ ಪ್ರಸಿದ್ದ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದ ವಾರ್ಷಿಕ ಉತ್ಸವ ಭಾನುವಾರ ರಾತ್ರಿ ಆಗಸದಲ್ಲಿ ವರ್ಣ ವಿಸ್ಮಯಗಳ ದೃಶ್ಯಗಳ ಸೃಷ್ಟಿಯೊಂದಿಗೆ ಸಮಾರೋಪಗೊಂಡಿತು.
ಕಣಿಪುರ ಕ್ಷೇತ್ರದ ವಾರ್ಷಿಕ ಜಾತ್ರೆಯ ಅಂಗವಾಗಿ ಭಾನುವಾರ ರಾತ್ರಿ 10 ಗಂಟೆಗೆ ವಿಶೇಷ ಬೆಡಿ ಪ್ರದರ್ಶನ ನಡೆಯಿತು.ಮೂವತ್ತು ಸಾವಿರಕ್ಕಿಂತಲೂ ಅಧಿಕ ಮಂದಿ ಬೆಡಿ ವೀಕ್ಷಣೆಗೆ ವಿವಿಧೆಡೆಗಳಿಂದ ಆಗಮಿಸಿದ್ದರು.
ಬೆಡಿ ಮಹೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ಸಂಜೆಯಿಂದ ಸೋಮವಾರ ಮುಂಜಾನೆಯ ತನಕ ಕುಂಬಳೆ ಪೇಟೆ ಸಹಿತ ಒಂದು ಕಿಲೋಮೀಟರ್ ಸುತ್ತಳತೆಯಲ್ಲಿ ಪ್ರತಿಯೊಂದರ ಚಲನ ವಲನಗಳ ಸೂಕ್ಮ ಅವಲೋಕನಕ್ಕಾಗಿ ಪೋಲೀಸರು ವಿಶೇಷ ಕ್ಯಾಮರಾ ಮೂಲಕ ಚಿತ್ರೀಕರಿಸಿ ಗಮನಿಸುವ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಸ್ಥಳೀಯ ಸಂಘಸಂಸ್ಥೆಗಳ ಸಹಕಾರದೊಂದಿಗೆ ಜನಮೈತ್ರಿ ಪೋಲೀಸ್ ಕುಂಬಳೆ ಪೇಟೆಯಲ್ಲಿ ಕ್ಯಾಮರಾ ಸ್ಥಾಪಿಸಿದೆ.ಪೆಟೆಯಿಂದ ರೈಲ್ವೇ ನಿಲ್ದಾಣದ ವರೆಗೆ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬಳೆ ಸೇತುವೆಯ ವರೆಗೆ,ಬದಿಯಡ್ಕ ರಸ್ತೆ,ಹೈಸ್ಕೂಲ್ ಮೈದಾನ,ಕ್ಷೇತ್ರ ಪರಿಸರ,ಪೋಲೀಸ್ ಠಾಣಾ ರಸ್ತೆಗಲಲ್ಲಿ ಸಿಸಿ ಕ್ಯಾಮರಾ ವ್ಯವಸ್ಥೆಗೊಳಿಸಲಾಗಿತ್ತು.ಇವುಗಳ ನಿಯಂತ್ರಣ ಹಾಗೂ ಅವಲೋಕನ ಕುಂಬಳೆ ಪೋಲೀಸ್ ಠಾಣೆಯ ಪ್ರತ್ಯೇಕ ಕಂಟ್ರೋಲ್ ರೂಂ ನಲ್ಲಿ ನಡೆಯಿತು.
Click this button or press Ctrl+G to toggle between Kannada and English