ನಮೋ ಅಭಿವೃದ್ದಿ ಮಂತ್ರದೊಂದಿಗೆ ವಿಮೋಚನಾ ಯಾತ್ರೆಗೆ ಚಾಲನೆ

7:58 AM, Thursday, January 21st, 2016
Share
1 Star2 Stars3 Stars4 Stars5 Stars
(5 rating, 9 votes)
Loading...
Venkaiah Naidu Kasaragod

ಉಪ್ಪಳ: ಸರ್ವ ಧರ್ಮ ಸಹಿಷ್ಣುತೆಯ ಭಾರತ ಭುವಿಯನ್ನು ಸಮೃದ್ದವಾಗಿ ಬೆಳೆಸಿ ಭ್ರಷ್ಟಾಚಾರ ರಹಿತ,ಕೋಮುವಾದಗಳಿಲ್ಲದ ಶಾಂತ ಆಡಳಿತ ನೀಡಲು ಭಾರತೀಯ ಜನತಾ ಪಕ್ಷದಿಂದ ಮಾತ್ರ ಸಾಧ್ಯ.ಈ ಸತ್ಯವನ್ನು ಮರೆಮಾಚುವ ಯತ್ನಗಳು ಅವ್ಯಾಹತವಾಗಿ ನಡೆಯುತ್ತಿದ್ದರೂ,ಜನ ಸಾಮಾನ್ಯರಿಗೆ ಬಿಜೆಪಿಯ ಒಳನೋಟಗಳು ಅರ್ಥವಾಗುತ್ತಿದೆ.ಕಳೆದ5 ದಶಕಗಳಿಂದ ಕೇರಳವನ್ನು ಅಕ್ಷರಶಃ ದುರ್ಗಮ ಹಾದಿಗೊಯ್ದಿರುವ ಅಭಿವೃದ್ದಿಗೆ ಕಿಂಚಿತ್ ಬೆಲೆ ನೀಡದ ಎಡ-ಬಲ ರಂಗಗಳೆರಡೂ ಅಧಃ ಪತನದ ಹಾದಿ ತುಳಿಯುತ್ತಿದ್ದು,ಬದಲಾವಣೆಗೆ ಬಿಜೆಪಿಯನ್ನು ಬೆಂಬಲಿಸಿ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಕರೆ ನೀಡಿದರು.

ಎಲ್ಲರಿಗೂ ಅನ್ನ,ನೀರು,ಮಣ್ಣು,ಉದ್ಯೋಗ ಹಾಗೂ ಸಮಾನ ನ್ಯಾಯ ಎಂಬ ಘೋಷಣೆಯೊಂದಿಗೆ ಬಿಜೆಪಿ ಕೇರಳ ರಾಜ್ಯ ನೂತನ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ನೇತೃತ್ವದಲ್ಲಿ ಸಂಘಟಿಸಲಾದ ವಿಮೋಚನಾ ಯಾತ್ರೆಗೆ ಬುಧವಾರ ಉಪ್ಪಳದಲ್ಲಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಅತ್ಯುಕೃಷ್ಟ ಯುವ ಶಕ್ತಿಯ ಬೆಂಬಲದೊಂದಿಗೆ ದೇಶವನ್ನು ಒಗ್ಗೂಡಿಸುವ ಪ್ರಯತ್ನವನ್ನು ಮೋದಿ ಮಾಡುತ್ತಿದ್ದಾರೆ.ಯಾವುದೇ ಸ್ಕ್ಯಾಮ್‌ಗಳಿಗೆ, ಅಪವಾದಗಳಿಗೆ ಗುರಿಯಾಗದೆ ಶಾಂತಿ ಕೆಲಸವನ್ನು ನಿರಂತರ ಮುಂದುವರಿಸಲು ಟೀಂ ಇಂಡಿಯಾ ಕಲ್ಪನೆಯಲ್ಲಿ ಜನತೆಯನ್ನು ತಯಾರಿಸುತ್ತಿದ್ದಾರೆ. 50 ವರ್ಷಗಳ ಕಾಲ ರಾಷ್ಟ್ರದ ಬಾಹ್ಯಾಕಾಶ, ಭೂಮಿ,ಭೂಗರ್ಬವನ್ನೂ ಕೊಳ್ಳೆ ಹೊಡೆದ ಸರಕಾರ ತನ್ನ ಕಾಲದಲ್ಲಿ ದೇಶದ ಜನತೆಯ ಸೇವೆ ಮಾಡದೆ ಇಂದು ಮೋದಿ ಸರಕಾರ ಪ್ರತಿಯೊಂದು ಉತ್ತಮ ಕೆಲಸವನ್ನು ಹಂಗಿಸುತ್ತಿದೆ. ಬಡವರಿಗಾಗಿ ಘೋಷಣೆಗಳನ್ನು ಕೂಗುತ್ತಾ ಶ್ರೀಮಂತರ ಪೋಷಣೆಯನ್ನು ಮಾಡಿದ ಕಾಂಗ್ರೆಸ್‌ಸರಕಾರ ಇಂದು ಅಧಃಪತನವನ್ನು ಕಾಣುತ್ತಿರುವುದು ವಿಪರ್ಯಾಸ. ಆದರೆ ಅಭಿವೃದ್ಧಿ ಎಂಬ ಏಕಮಂತ್ರವನ್ನು ಜಪಿಸುತ್ತಾ ದೇಶವನ್ನು ವಿಕಸನದತ್ತ ಕೊಂಡೊಯ್ಯುತ್ತಿರುವ ಮೋದಿ ಸರಕಾರಕ್ಕೆ ದೇಶದ ಎಲ್ಲಾ ಜನತೆ ಸಹಕಾರವನ್ನು ನೀಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ದಾಖಲೆಯ ತಿಂಗಳಲ್ಲಿ 9.2 ಕೋಟಿ ಬ್ಯಾಂಕ್ ಖಾತೆಗಳನ್ನು ತೆರಯುವ ಮೂಲಕ ಪ್ರಧಾನಿಯ ಜನಧನ ಯೋಜನೆ ಯಶಸ್ವಿಯಾಗಿರುವುದನ್ನು ವಿವರಿಸಿ ದೇಶಪ್ರತಿಯೊಬ್ಬನಿಗೂ ಸಾಮಾಜಿಕವಾಗಿ, ಆರ್ಥಿಕವಾಗಿ ಭದ್ರತೆಯನ್ನು ನೀಡುವ ಅನೇಕ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಯುವ ಜನತೆಗೆ ಉದ್ಯೋಗದವಕಾಶವನ್ನು ನೀಡುವುದರೊಂದಿಗೆ ಕೃಷಿ ಭೂಮಿಗೆ ಯೋಗ್ಯ ನೀರು, ಬ್ಯಾಂಕಿನ ಸುಲಭ ರೀತಿಯ ಸಾಲ ಸೌಲಭ್ಯ ಮತ್ತು ಕೇಂದ್ರ ಸರಕಾರದ ಹಣವವನ್ನು ಯತೇಚ್ಛವಾಗಿ ರಾಜ್ಯ ಮತ್ತು ಇತರ ಫಲಾನುಭವಿಗಳಿಗೆ ನೀಡುವಂತಹ ಕ್ರಮವನ್ನು ಜಾರಿಗೊಳಿಸಿರುವುದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಭಾರತದ ಯಾವ ಪ್ರಜೆಯೂ ಸುಭದ್ರ ಸೂರು ರಹಿತರಾಗಿ ಸಂಕಷ್ಟ ಅನುಭವಿಸಬಾರದು ಎಂಬ ನೆಲೆಯಲ್ಲಿ ಪ್ರತೊಯೊಬ್ಬನಿಗೂ ಮನೆ ನಿರ್ಮಾಣ ಮಾಡುವ ನೂತನ ಯೋಜನೆಯೆಡೆಗೆ ಸರಕಾರ ಲಕ್ಷ್ಯಹರಿಸಿದೆ ಎಂದು ಅವರು ತಿಳಿಸಿದರು.ಭ್ರಷ್ಟಾಚಾರ ರಹಿತ ಪಾರದರ್ಶಕತೆಯ ಆಡಳಿತವನ್ನು ನೀಡುತ್ತಿರುವ ಎನ್‌ಡಿಎ ಸರಕಾರ ಕಳೆದ 18 ತಿಂಗಳಲ್ಲಿ ಇಡೀ ಜಗತ್ತು ಭಾರತವನ್ನು ನೋಡುವಂತೆ ಮಾಡಿದೆ. ವಿದೇಶ ಪ್ರಸಿದ್ಧ ಪತ್ರಿಕೆಗಳು, ವಿಶ್ವಬ್ಯಾಂಕ್‌ಗಳ ಅಹಿತ ಅನೇಕ ಸಂಸ್ಥೆಗಳ ವರದಿಯಂತೆ ಅತ್ಯಂತ ತ್ವರಿತಗತಿಯಲ್ಲಿ ಭಾರತ ಅಭಿವೃದ್ಧಿಯತ್ತ ಸಾಗುತ್ತಿದೆ ಎಂಬ ವರದಿಯನ್ನು ನೀಡುತ್ತಿರುವುದು ಮೋದಿ ಆಡಳಿತವನ್ನು ಸಾರಿ ಹೇಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕೇರಳದಲ್ಲಿ ಇಲ್ಲಿವರೆಗಿನ ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಸರಕಾರ ಮುಷ್ಟಿಯಲ್ಲಿರುವ ಜನತೆ ಅವುಗಳ ಮಧ್ಯೆ ಸಿಲುಕಿ ಒದ್ದಾಡುತ್ತಿದೆ. ಇನ್ನೂ ಅಭಿವೃದ್ಧಿಯನ್ನು ಕಾಣುವಲ್ಲಿ ಸಂಪೂರ್ಣ ವಿಫಲವಾಗಿರುವುದು ಖೇದಕರ ಎಂದು ತಿಳಿಸಿದ ಅವರು ದೆಹಲಿಯಲ್ಲಿ ಈ ಎರಡೂ ಪಕ್ಷಗಳೂ ಒಂದಾಗುತ್ತಿದ್ದು, ರಾಜ್ಯ ರಾಜಧಾನಿಯಲ್ಲಿ ವೈರಿಗಳಂತೆ ಕಿತ್ತಾಡುತ್ತದೆ . ಇದು ಅತ್ಯಂತ ಅಪಾಯಕಾರಿ ಎಂದು ಅವರು ಕಳವಳ ವ್ಯಕ್ತಪಡಿಸಿದರು. ವೋಟ್ ಬ್ಯಾಂಕಿಗಾಗಿ ಜನತೆಯನ್ನು ಯಾವ ಮಟ್ಟಕ್ಕೂ ಇಳಿಸಲೂ ಕೇರಳದಲ್ಲಿ ಈ ಪಕ್ಷಗಳು ಮುಂದುವರಿಯಬಲ್ಲದಲ್ಲದೆ ಜನತೆಯನ್ನು ತಪ್ಪು ದಾರಿಯಲ್ಲಿ ಮುನ್ನಡೆಸುತ್ತಿದೆ. ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದ ಈ ಪಕ್ಷಗಳಿಂದ ಮುಕ್ತಿ ಪಡೆದು ಕೇರಳದ ವಿಮೋಚನೆಗೆ ಕಾಲ ಪಕ್ಷಗೊಂಡಿದೆ. ಎಲ್ಲರೂ ಸಮಾನ ಅವಕಾಶ, ನೀತಿಗಳನ್ನು ಅಭಿವೃದ್ಧಿ ಪಥಕ್ಕೆ ದೀವಿಟಿಕೆಯಾಗು ಬಳಸುತ್ತಿರುವ ಬಿಜೆಪಿಯ ಆಡಳಿತಕ್ಕೆ ಜನತೆ ಅವಕಾಶವನ್ನು ಕಲ್ಪಿಸಬೇಕಾಗಿದೆ ಎಂದು ಅವರು ತಿಳಿಸಿದರು.

ರಾಜ್ಯ ಬಿಜೆಪಿಯ ಹಿರಿಯ ನಾಯಕ ಓ.ರಾಜಗೋಪಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇರಳ ಅಭಿವೃದ್ಧಿಯನ್ನು ಹೊಂದಬೇಕಾಗದ ಅನಿವಾರ್ಯತೆಯ ಕಾಲಘಟ್ಟದಲ್ಲಿ ಬದಲಾವಣೆ ನಡೆಯಬೇಕಾಗಿದೆ. ಭಾರತೀಯ ಜನತಾ ಪಕ್ಷ ಒಬ್ಬಸಾಮಾನ್ಯ ವ್ಯಕ್ತಿಯನ್ನು ಪ್ರಧಾನಿಯಾನ್ನಾಗಿಸುವಲ್ಲಿ ಯಶಸ್ವಿಯಾಗಿದೆ.ಆದ್ದರಿಂದ ಜನತೆ ರಾಜ್ಯದಲ್ಲಿಯೂ ಪಕ್ಷವನ್ನು ಬೆಳೆಸಿ, ಅಭಿವೃದ್ದಿಯನ್ನು ಉಂಟು ಮಾಡಲು ಸಹಕರಿಸಬೇಕಾಗಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್, ಪಿ.ಸಿ.ಥೋಮಸ್, ಸಂಸದ ರಿಚರ್ಡ್ ಹೇ, ಮಂಗಳೂರು ಸಂಸದ ನಳಿನ್‌ಕುಮಾರ್ ಕಟೀಲು, ಶ್ರೀರಾಮ್ ಕೊಯ್ಯೋಲು, ನ್ಯಾಯವಾದಿ ಶ್ರೀಧರನ್ ಪಿಳ್ಳೆ, ಬಿಜೆಪಿ ಜಿಲ್ಲಾಧ್ಯಕ್ಷ ಅಡ್ವ.ಕೆ.ಶ್ರೀಕಾಂತ್, ಮಾಜಿ ಜಿಲ್ಲಾಧ್ಯಕ್ಷ ಸುರೇಶ್‌ಕುಮಾರ್ ಶೆಟ್ಟಿ ಪೂಕಟ್ಟೆ , ಮಾಜಿ ಕಬಡ್ಡಿ ಪಟು ಭಾಸ್ಕರ್ ರೈ, ಪಿ.ಕೆ.ಪದ್ಮನಾಭನ್, ಎಂಡೋ ಹೋರಾಟಗಾರ್ತಿ ಲೀಲಾಕುಮಾರಿ ಅಮ್ಮ ಮೊದಲಾದವರು ಉಪಸ್ಥಿತರಿದ್ದರು.

ಅಭಿವೃದ್ದಿಯತ್ತ ಕೇರಳಕ್ಕಾಗಿ ಎಲ್ಲರಿಗೂ ಅನ್ನ, ನೀರು, ಮಣ್ಣು, ಉದ್ಯೋಗ, ಸಮಾನ ನ್ಯಾಯ ಎಂಬ ಧ್ಯೇಯದೊಂದಿಗೆ ರಾಜ್ಯದಾದ್ಯಂತ ಸಂಚರಿಸಲಿರುವ ವಿಮೋಚನ ಯಾತ್ರೆಯನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ಕುಮ್ಮನಂ ರಾಜಶೇಖರನ್ ಅವರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮ ಮೊದಲು ಯಾತ್ರಾ ಗೀತೆಯನ್ನು ಹಾಡಲಾಯಿತು. ಕಾರ್ಯಕ್ರಮ ಕೇಂದ್ರ ಬಿಂದುವಾಗಿದ್ದ ಮಲಯಾಳ ನಾಯಕ ನಟ ಸುರೇಶ್‌ಗೋಪಿ ಅವರು ವಿಮೋಚನಾ ಪ್ರತಿಜ್ಞೆಯನ್ನು ನಡೆಸಿಕೊಟ್ಟರು. ಈ ಸಂದಭ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರ ಪರ ಹೋರಾಟ ನಡೆಸಿದ ಲೀಲಾಕುಮಾರಿ ಅಮ್ಮ ಅವರನ್ನು ಗೌರವಿಸಲಾಯಿತು. ಕಿಶೋರ್ ಪೆರ್ಲ ವಂದೇ ಮಾತರಂ ಗೀತೆ ಹಾಡಿದರು. ಕೇಂದ್ರ ಸಚಿವ ವೆಂಕಯ್ಯ ನಾಯ್ಡು ರವರ ಆಂಗ್ಲ ಭಾಷಣವನ್ನು ಪಿ.ಎಸ್ ಶ್ರೀಧರನ್ ಪಿಳ್ಳೈ ಮಲೆಯಾಳಕ್ಕೆ ಭಾಷಾಂತರಿಸುವಲ್ಲಿ ಸಹಕರಿಸಿದರು. ಎಂ.ಟಿ. ರಮೇಶ್ ಸ್ವಾಗತಿಸಿ, ಸುರೇಶ್‌ಶೆಟ್ಟಿ ವಂದಿಸಿದರು. ರಾಜ್ಯದ 140 ವಿಧಾನ ಸಭಾ ಕ್ಷೇತ್ರಗಳಲಿ ಯಾತ್ರೆ ಸಂಚರಿಸಿ ಫೆಬ್ರವರಿ 10 ರಂದು ತಿರುವನಂತಪುರದ ಗಡಿ ಪಾರಶ್ಚಾಲಾದಲ್ಲಿ ಸಮಾರೋಪಗೊಳ್ಳಲಿದೆ.ವಿಮೋಚನಾ ಯಾತ್ರೆಯ ಮುಂಚಿತವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಬೆಳಿಗ್ಗೆ ಕುಂಬಳೆ ಸೀಮೆಯ ಮೊದಲ ಆರಾಧನಾ ಕ್ಷೇತ್ರ ಮಧೂರು ಶ್ರೀಸಿದ್ದಿವಿನಾಯಕ ಮಹಾಗಣಪತಿ ಕ್ಷೇತ್ರ ಸಂದರ್ಶನ ನಡೆಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಬಳಿಕ ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕಕ್ಕೆ ಭೇಟಿ ನೀಡಿದರು.

ಕನ್ನಡವನ್ನು ಕಿತ್ತೆಸೆಯದಿರಿ
ಯಾತ್ರೆಯನ್ನು ಮುನ್ನಡೆಸುತ್ತಿರುವ ಕುಮ್ಮನಂ ರಾಜಶೇಖರನ್ ಆರಂಭದಲ್ಲಿ ಕನ್ನಡ ಭಾಷೆಯಲ್ಲಿಯೇ ಮಾತನಾಡಿ ಕನ್ನಡಿಗರ ಮನಸ್ಸು ಗೆದ್ದರು. ಕಾಸರಗೋಡು ಕನ್ನಡ ಸಂಸ್ಕೃತಿಯುಳ್ಳ ಎಲ್ಲರನ್ನೂ ಆದರಿಸುವ ಕನ್ನಡದ ಮಂದಿ ಬಹುಸಂಖ್ಯಾತರಿರುವ ಕನ್ನಡಿಗರಿಗೆ ನೋವು ಮಾಡಿ ಕನ್ನಡವನ್ನು ಕಿತ್ತೆಸೆಯುವ ಪ್ರಯತ್ನವನ್ನು ಮಾಡಬಾರದು ಎಂದು ತಿಳಿಸಿದರು.

ಹಿಂದೂಗಳೆಂದರೆ ಕೋಮುವಾದಿಗಳಲ್ಲ
ದೇಶದಲ್ಲಿ ನಡೆಯುತ್ತಿರುವ ಪ್ರತಿಯೊಂದು ತಪ್ಪು ಕೆಲಗಳಲ್ಲಿ ಆರ್‌ಎಸ್‌ಎಸ್ ಸಂಘಟನೆಯನ್ನು ಇತರ ಪಕ್ಷದವರು ದೂರುತ್ತಿರುವುದು ಸಾಮಾನ್ಯ. ಆದರೆ ಆರ್‌ಎಸ್‌ಎಸ್ ರೆಡಿ ಫಾರ್ ಸೆಲ್ಪ್ ಸರ್ವೀಸ್(ಸ್ವಯಂ ಶಕ್ತಿಯಿಂದ ಸೇವೆಗೆ ಸದಾಸಿದ್ಧರಾಗಿರುವುದು) ಆದರೆ ಇಂದು ಹಿಂದೂ ಶಬ್ದವನ್ನು ಕೋಮು ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ಹಿಂದೂ ಏರೋನಾಟಿಕ್ಸ್, ಸಹಿತ ಅನೇಕ ಹಿಂದೂ ಎಂದು ಹೆಸರಿರುವ ಯಾವ ಕಂಪೆನಿಗಳೂ ಚಾಲ್ತಿಯಲ್ಲಿರುತ್ತಿರಲಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಿಳಿಸಿದರು.

Venkaiah Naidu Kasaragod

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English