ಎಲ್ಲಾ ರಂಗಗಳಲ್ಲೂ ಕೇರಳ ಅಧಃ:ಪತನ : ಕುಮ್ಮನಂ ರಾಜಶೇಖರನ್

9:08 PM, Thursday, January 21st, 2016
Share
1 Star2 Stars3 Stars4 Stars5 Stars
(4 rating, 5 votes)
Loading...
Rajashekaran

ಕಾಸರಗೋಡು: ಬದಲಿ ಬದಲಿ ಬಂದ ಎಡರಂಗ-ಐಕ್ಯರಂಗ ಸರಕಾರಗಳು ಕೇರಳವನ್ನು ಎಲ್ಲಾ ರಂಗಗಳಲ್ಲೂ ಅಧಃ:ಪತನಕ್ಕೆ ಕೊಂಡೊಯ್ದರೆಂದು ಬಿಜೆಪಿ ಕೇರಳ ರಾಜ್ಯ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಅವರು ಹೇಳಿದರು.

ಉಪ್ಪಳದಿಂದ ಆರಂಭಗೊಂಡ ಬಿಜೆಪಿ ನೇತೃತ್ವದ ವಿಮೋಚನಾ ಯಾತ್ರೆಗೆ ಕಾಸರಗೋಡಿನಲ್ಲಿ ನೀಡಿದ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿ, ಉದ್ಯೋಗ, ಕೈಗಾರಿಕೆ, ಆರ್ಥಿಕತೆ…ಹೀಗೆ ಎಲ್ಲಾ ರಂಗಗಳಲ್ಲೂ ಕೇರಳ ರಾಜ್ಯ ಇಂದು ಅತ್ಯಂತ ಹಿಂದುಳಿಯುವಂತೆ ಈ ಎರಡೂ ಸರಕಾರಗಳು ಮಾಡಿವೆ. ಇಲ್ಲಿ ಉದ್ಯೋಗಕ್ಕೆ ಯಾವುದೇ ಸವಲತ್ತುಗಳಿಲ್ಲದೆ ಕೇರಳೀಗರು ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಊಟ ಮಾಡಲು ಇನ್ನೊಂದು ರಾಜ್ಯವನ್ನು ಅವಲಂಬಿಸಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕೇರಳವನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾದರೆ ಬದಲಿ ಸರಕಾರ ಅಗತ್ಯ ಎಂಬುದಾಗಿ ಕೇರಳ ಜನತೆ ಈಗಾಗಲೇ ತೀರ್ಮಾನಿಸಿದ್ದಾರೆ. ಇದೀಗ ಎಲ್ಲರ ಆಯ್ಕೆ ಬಿಜೆಪಿ ಮಾತ್ರ ಎಂದರು.

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ. 71 ಪ್ಲಸ್ ಸ್ಥಾನಗಳನ್ನು ಬಿಜೆಪಿ ಗುರಿಯಿರಿಸಿದೆ ಎಂದರು. ಈ ಎರಡು ಸರಕಾರಗಳಿಂದ ಕೇರಳ ಜನತೆ ನಿರಾಶರಾಗಿದ್ದಾರೆ. ಎಂಡೋಸಲ್ಫಾನ್ ದುಷ್ಪರಿಣಾಮದಿಂದ ಇಲ್ಲಿನ ಜನರು ಸಂಕಷ್ಟ ಅನುಭವಿಸುತ್ತಿದ್ದರೂ ಕೇರಳ ಸರಕಾರ ಎಂಡೋ ಸಂತ್ರಸ್ತರಿಗೆ ಸಾಂತ್ವನ ನೀಡುವಲ್ಲೂ ಹಿಂದುಳಿದಿದೆ. ಕಾಸರಗೋಡು ಜಿಲ್ಲೆಯನ್ನು ಎಲ್ಲಾ ರಂಗಗಳಲ್ಲೂ ಅವಗಣಿಸಿದ್ದು, ಈ ಎರಡೂ ರಂಗಗಳಿಗೂ ಕೇರಳದ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲ ಎಂದರು. ಎಡರಂಗ ಹಿಂಸಾ ರಾಜಕೀಯದಲ್ಲಿ ನಿರತವಾಗಿದೆ. ಕಾಸರಗೋಡಿನಿಂದಲೂ ಬಿಜೆಪಿ ಶಾಸಕರನ್ನು ಕಳುಹಿಸಿಕೊಡಲು ಎಲ್ಲಾ ಕಾರ್ಯಕರ್ತರು ಇಂದಿನಿಂದಲೇ ಮನೆ ಮನೆಗಳಿಗೆ ತೆರಳಿ ಮತ ಯಾಚಿಸಬೇಕೆಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಎ.ಎನ್.ರಾಧಾಕೃಷ್ಣನ್, ಶೋಭಾ ಸುರೇಂದ್ರನ್ ಮೊದಲಾದವರು ಮಾತನಾಡಿದರು. ಪಿ.ಕೆ.ಕೃಷ್ಣದಾಸ್, ಎಂ.ಟಿ.ರಮೇಶ್, ಕೆ.ಶ್ರೀಕಾಂತ್, ಎಂ.ಸಂಜೀವ ರೈ, ಪಿ.ರಮೇಶ್, ಪ್ರಮೀಳಾ ಸಿ.ನಾಕ್ ಮೊದಲಾದವರು ಉಪಸ್ಥಿತರಿದ್ದರು. ಮಂಡಲ ಅಧ್ಯಕ್ಷ ಸುಧಾಮ ಗೋಸಾಡ ಅಧ್ಯಕ್ಷತೆ ವಹಿಸಿದರು. ರಾಜೇಶ್ ಶೆಟ್ಟಿ ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English