ಮಂಗಳೂರು : ಮೀನುಗಾರರಿಗೆ ಅನುಕೂಲವಾಗುವಂತೆ ಈ ಹಿಂದೆ ಇದ್ದಂತೆ ರೂಟ್ ಸಂ.26,32 ಹಾಗೂ ಇನ್ನು ಕೆಲವು ಮಾರ್ಗದ ಬಸ್ಸುಗಳನ್ನು ಹಳೆ ಬಂದರು ಪ್ರದೇಶದ ಮೀನುಗಾರಿಕಾ ಬಂದರ್ ವರೆಗೆ ವಿಸ್ತರಣೆ ಮಾಡಲು ಕ್ರಮಕೈಗೊಳ್ಳುವುದಾಗಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಶ್ರೀ ಸುಭೋದ್ ಯಾದವ್ ಅವರು ಮೀನುಗಾರರ ಸಂಘದ ಪದಾಧಿಕಾರಿಗಳಿಗೆ ತಿಳಿಸಿದ್ದಾರೆ.
ಅವರು ಇಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಮೀನುಗಾರಿಕೆಗೆ ಸಂಬಂಧಿಸಿದ ವಿಷಯಗಳ ಕುರಿತ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಮೀನುಗಾರರ ಸೂಕ್ತ ರಕ್ಷಣೆಗೆ ಸಂಘದ ಸದಸ್ಯರು ಜಿಲ್ಲಾಧಿಕಾರಿಗಳನ್ನು ವಿನಂತಿಸಿದರು. ಇತ್ತೀಚೆಗೆ ಮೀನುಗಾರರಿಗೆ ಅಪರಾತ್ರಿಯಲ್ಲಿ ಮೀನುಗಾರಿಕೆ ಮುಗಿಸಿ ಬಂದಾಗ ತಂಡೋಪತಂಡಗಳಲ್ಲಿ ದುಷ್ಕರ್ಮಿಗಳು ತಲವಾರು,ಲ್ಯಾಂಗುಗಳನ್ನು ಹಿಡಿದು ಬೆದರಿಸಿ ಬೆಲೆಬಾಳುವ ಸಿಗಡಿ ಅಂಜಿಲ್,ಮಾಂಜಿ ಮೀನುಗಳನ್ನು ದೋಚುತ್ತಿದ್ದಾರೆ. ಇಂತಹ ದುಷ್ಕರ್ಮಿಗಳಿಂದ ಮೀನುಗಾರರನ್ನು ರಕ್ಷಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಚರ್ಚಿಸಿದ ಇತರ ವಿಷಯಗಳೆಂದರೆ, ಗುರುಪುರ ನದಿಯಲ್ಲಿ ತುಂಬಿರುವ ಹೂಳು ತೆಗೆಯುವುದು,ಎಂಆರ್ಪಿಎಲ್-ಒಎನ್ಜಿಸಿಯವರು ನವಮಂಗಳೂರು ಬಂದರಿನ ಎದುರು ಸುಮಾರು 16 ಕಿ.ಮೀ.ದೂರದಲ್ಲಿ ನಿರ್ಮಿಸುತ್ತಿರುವ ತೇಲು ಜೆಟ್ಟಿಯ ಹಾಗೂ ಪೈಪ್ ಲೈನ್ಗಳ ಕುರಿತಂತೆ ಚರ್ಚಿಸಲಾಯಿತು.
ಮೀನುಗಾರಿಕಾ ಇಲಾಖೆ ಉಪನಿರ್ದೇಶಕರು ಹಾಗೂ ವಿವಿಧ ಮೀನುಗಾರಿಕಾ ಬೋಟ್ಗಳ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English