ಮಂಜೇಶ್ವರ : ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನಲ್ಲಿ 1910ರಲ್ಲಿ ಸ್ಥಾಪಿಸಲ್ಪಟ್ಟ ಯೇಸು ಕ್ರಿಸ್ತರ ತಿರುಹೃದಯಕ್ಕೆ ಸಮರ್ಪಿಸಲಾದ ವರ್ಕಾಡಿ ದೇವಾಲಯದಲ್ಲಿ ಆರೋಗ್ಯ ಮಾತೆ(ವೆಲಂಕಣಿ) ಪುಣ್ಯಕ್ಷೇತ್ರದ ಸ್ಥಾಪನೆಯ ಬೆಳ್ಳಿ ಮಹೋತ್ಸವ ಹಾಗೂ ಸಮೂಹ ದಿನದ ೩೦ನೇ ವಾರ್ಷಿಕೋತ್ಸವವು ವರ್ಕಾಡಿ ಚರ್ಚ್ನಲ್ಲಿ ವಿಜೃಂಭಣೆಯಿಂದ ಜರುಗಿದುವು.
ಬಲಿಪೂಜೆಗೆ ಮಂಗಳೂರು ಸಂತ ಜೋಸೆಫರ ಸೆಮಿನರಿಯ ಮುಖ್ಯಸ್ಥರಾದ ವಂದನೀಯ ಸ್ವಾಮಿ ಜೋಸೆಫ್ ಮಾರ್ಟಿಸ್ ಅವರು ನೇತೃತ್ವ ನೀಡಿದರು. ವರ್ಕಾಡಿ ಚರ್ಚ್ನ ಪೂರ್ವ ಧರ್ಮಗುರುಗಳಾದ ಅತಿ ವಂದನೀಯ ಪೀಟರ್ ಸೆರಾವೋ, ಅತಿ ವಂದನೀಯ ಡೆನ್ನಿಸ್, ಭಗಿನಿ ರೀಟಾ ವಾಸ್ ಮುಂತಾದವರು ಉಪಸ್ಥಿತರಿದ್ದರು. ವಿದ್ಯಾಕ್ಷೇತ್ರದಲ್ಲಿ ಉನ್ನತ ವಿದ್ಯಾಭ್ಯಾಸ ರಂಗದಲ್ಲಿ ಸಾದನೆಗೈದ ಖಗೋಲ ವಿಜ್ಞಾನದಲ್ಲಿ ವಿಶೇಷ ಶ್ರೇಣಿಯೊಂದಿಗೆ ಪದವಿ ಪಡೆದ ಸ್ಟೀವನ್ ಡಿ ಸೋಜಾ ನಲ್ಲೆಂಗಿ ಹಾಗೂ ಪ್ರಸನ್ನ ಡಿಸೋಜಾ ಕಳಿಯೂರು ಇವರನ್ನು ಸಮ್ಮಾನಿಸಲಾಯಿತು. ವರ್ಕಾಡಿ ಚರ್ಚ್ ಧರ್ಮಗುರುಗಳಾದ ವಂದನೀಯ ಫ್ರಾನ್ಸಿಸ್ ರೊಡ್ರಿಗಸ್ ಅವರು ಕಾರ್ಯಕ್ರಮಕ್ಕೆ ನೇತೃತ್ವ ನೀಡಿದರು.
ಬೆಳಿಗ್ಗೆ ಮಾತಾ ಭಕ್ತರಿಗೆ ನಮನ, ಬಳಿಕ ಮಹೋತ್ಸವ ಪೂಜೆ, ಅಪರಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು. ಸಾಯಂಕಾಲ ಪಾಲನಾ ಮಂಡಳಿ ಹಾಗೂ ಕೆಥೋಲಿಕ್ ಸಭೆಯ ಮುಂದಾಳತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕಾಪು ಪ್ರಶಂಸಾ ತಂಡದವರಿಂದ ಹಾಸ್ಯ ಕಾರ್ಯಕ್ರಮವನ್ನು ಜರುಗಿತು.
Click this button or press Ctrl+G to toggle between Kannada and English