ವಿವಾಹ ವಿಚ್ಛೇದನ ಕೋರಿ ನಟಿ ಪ್ರೇಮಾ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ

9:14 PM, Saturday, March 5th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
prema

ಬೆಂಗಳೂರು : ನಟಿ ಪ್ರೇಮಾ ವಿವಾಹ ವಿಚ್ಛೇದನ ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಬುಧವಾರ(ಮಾರ್ಚ್ 02) ಅರ್ಜಿ ಸಲ್ಲಿಸಿದ್ದಾರೆ. ಕೊಡಗು ಮೂಲದ ಪ್ರೇಮಾ ಅವರು 2006ರಲ್ಲಿ ತಮ್ಮ ಸಮುದಾಯದವರೇ ಆದ ಉದ್ಯಮಿ ಜೀವನ್ ಅಪ್ಪಚ್ಚು ಅವರನ್ನು ವರಿಸಿದ್ದರು. 1995ರಲ್ಲಿ ಶಿವರಾಜ್ ಕುಮಾರ್ ಅಭಿನಯದ ಸವ್ಯಸಾಚಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರದ ಮಾಧುರಿ ಪಾತ್ರದ ಮೂಲಕ ಮನೆ ಮಾತಾದರು. ನಮ್ಮೂರ ಮಂದಾರ ಹೂವೇ,ಯಜಮಾನ ಸೇರಿದಂತೆ ಅನೇಕ ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಸುದ್ದಿ ಓದುತ್ತಿದ್ದಂತೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ವಿವಾಹ ವಿಚ್ಛೇದನ ಪ್ರಕರಣಗಳು ಸಾಕಷ್ಟು ಅಭಿಮಾನಿಗಳ ಕಣ್ಮುಂದೆ ಸುಳಿಯುತ್ತವೆ, ಸುದೀಪ್- ಪ್ರಿಯಾ, ಶೃತಿ -ಮಹೇಂದರ್, ಅನುಪ್ರಭಾಕರ್-ಕೃಷ್ಣಕುಮಾರ್, ರಾಜೇಶ್ ಕೃಷ್ಣನ್-ರಮ್ಯಾ ಹೀಗೆ ಪಟ್ಟಿ ಸಾಗುತ್ತದೆ.

ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಖುದ್ದು ಪ್ರೇಮಾ ಅವರು ಬಂದಿದ್ದರು. ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13 ಅಡಿಯಲ್ಲಿ ಪರಸ್ಪರ ಒಪ್ಪಿಗೆ ಮೂಲಕ ಇಬ್ಬರು ವಿಚ್ಛೇದನ ಬಯಸಿರುವುದಾಗಿ ಅರ್ಜಿಯಲ್ಲಿ ಹೇಳಿದ್ದಾರೆ.

ಪರಸ್ಪರ ಒಪ್ಪಿಗೆ ಇದ್ದು ದಂಪತಿ ಕೌಟುಂಬಿಕ ಕೋರ್ಟೀಗೆ ಅರ್ಜಿ ಸಲ್ಲಿಸಿದ ತಕ್ಷಣ ವಿಚ್ಛೇದನ ಮಂಜೂರು ಆಗುವುದಿಲ್ಲ. ಇಬ್ಬರ ನಡುವೆ ಕೊನೆ ಕ್ಷಣದಲ್ಲಿ ಸಂಧಾನ ಮಾತುಕತೆ, ರಾಜಿ ಒಪ್ಪಂದ ನಡೆದು ಇಬ್ಬರು ಒಂದಾಗಲು ಕೋರ್ಟ್ ಕಾಲಾವಕಾಶ ನೀಡುತ್ತದೆ. ಈ ಅವಧಿ 6 ತಿಂಗಳಿನಿಂದ 1 ವರ್ಷ ತನಕ ಇರುತ್ತದೆ.

ನಟಿ ಪ್ರೇಮ ಹಾಗೂ ಪತಿ ಜೀವನ್ ಅಪ್ಪಚ್ಚು ನಡುವಿನ ವೈಮನಸ್ಯ ವಿಚ್ಛೇದನಕ್ಕೆ ಕಾರಣ ಎನ್ನಲಾಗಿದೆ. ಜೀವನ್ ಅಪ್ಪಚ್ಚು ಬಗ್ಗೆ ನಟಿ ಪ್ರೇಮ ವಿಶ್ವಾಸ ಕಳೆದುಕೊಳ್ಳಲು ಒಂದು ಸುಳ್ಳು ಕಾರಣ ಎನ್ನಲಾಗಿದ್ದು. ಮದುವೆಗೂ ಮುನ್ನ ಸಾಫ್ಟ್ ವೇರ್ ಎಂಜಿನಿಯರ್ ಅಂತ ಹೇಳಿಕೊಂಡಿದ್ದ ಜೀವನ್ ಅಪ್ಪಚ್ಚು ಓರ್ವ ಉದ್ಯಮಿ ಅನ್ನೋದು ನಟಿ ಪ್ರೇಮಗೆ ಮದುವೆ ನಂತರ ಗೊತ್ತಾಗಿದೆ.

ಹೀರೋಯಿನ್ ಪಟ್ಟದಿಂದ ದೂರವಾಗುತ್ತಿದ್ದ ಸಂದರ್ಭದಲ್ಲಿ ನಟಿ ಪ್ರೇಮ ಮದುವೆ ಆದರು. ವಿವಾಹದ ಬಳಿಕ ನಟಿಸಲು ಇಚ್ಛಿಸದ ಪ್ರೇಮ ಎಲ್ಲರಂತೆ ಗಂಡ-ಮನೆ-ಮಕ್ಕಳು ಅಂತ ಸಾಂಸಾರಿಕ ಜೀವನ ಅನುಭವಿಸಲು ಬಯಸಿದ್ದರು.

ಆದರೆ, ಕೊಡಗಿನ ಜೀವನ್ ಅಪ್ಪಚ್ಚು ಮನೆಯವರಿಗೆ ನಟಿ ಪ್ರೇಮ ದುಡಿಯಬೇಕು, ಅದರಿಂದ ಬಂದ ಹಣದಲ್ಲಿ ತಾವು ಐಶಾರಾಮಿ ಜೀವನ ಸಾಗಿಸಬೇಕು ಎಂಬ ಬಯಕೆ. ನಟಿ ಪ್ರೇಮ ಹಾಗೂ ಜೀವನ್ ಅಪ್ಪಚ್ಚು ನಡುವೆ ಕಲಹ ವೈಮನಸ್ಯ ಉಂಟಾಗಲು ಇದೇ ಕಾರಣ ಎನ್ನಲಾಗಿದೆ.

ಕಲಹ ಹೆಚ್ಚಾದಂತೆ ಪ್ರತ್ಯೇಕವಾಗಿ ವಾಸಿಸಲು ನಟಿ ಪ್ರೇಮ ಮುಂದಾದರು ಎನ್ನಲಾಗಿದೆ. ಅಂದಿನ ವೈಮನಸ್ಯ ಈಗ ಕೋರ್ಟ್ ಮೆಟ್ಟಿಲೇರುವಂತೆ ಮಾಡಿದೆ.
ಮದುವೆ ಆದ ಒಂದೇ ವರ್ಷದಲ್ಲಿ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ಕ್ಷಣ ಕ್ಷಣ’ ಚಿತ್ರದಲ್ಲಿ ನಟಿ ಪ್ರೇಮ ಅಭಿನಯಿಸಿದರು. ಅದಾದ ಬಳಿಕ ಮತ್ತೆ ಚಿತ್ರರಂಗದಿಂದ ದೂರ ಸರಿದರು ನಟಿ ಪ್ರೇಮ.

ನಟಿ ಪ್ರೇಮ ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಚಿತ್ರಗಳಲ್ಲಿ ಅಭಿನಯಿಸುತ್ತಿಲ್ಲ ಅಂತ ಹಿಂದೊಮ್ಮೆ ಗಾಂಧಿನಗರದಲ್ಲಿ ಗಾಸಿಪ್ ಹಬ್ಬಿತ್ತು. ‘ಶಿಶಿರ’ ಚಿತ್ರದಲ್ಲಿ ನಟಿ ಪ್ರೇಮರವರ ಶಾರ್ಟ್ ಹೇರ್ ಸ್ಟೈಲ್ ನೋಡಿ, ಕ್ಯಾನ್ಸರ್ ಇದೆ ಅಂತ ಗುಲ್ಲೆದ್ದಿತ್ತು.

”ನಾನು ಆರೋಗ್ಯವಾಗಿದ್ದೀನಿ. ತಂದೆ-ತಾಯಿ ಹಾಗೂ ಕನ್ನಡ ಜನತೆಯ ಆಶೀರ್ವಾದದಿಂದ ನಾನು ಚೆನ್ನಾಗಿದ್ದೀನಿ. ನನಗೆ ಏನೂ ಆಗಿಲ್ಲ” ಅಂತ ಮಾಧ್ಯಮಗಳಿಗೆ ನಟಿ ಪ್ರೇಮ ಸ್ಪಷ್ಟನೆ ನೀಡಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English