ಮಂಜೇಶ್ವರ: ಸಂಚರಿಸುತ್ತಿದ್ದ ಸ್ಕೂಟರಿಗೆ ಕಾರು ಡಿಕ್ಕಿಹೊಡೆದು ಹೊರಗೆಸೆಯಲ್ಪಟ್ಟ ದಂಪತಿಗಳ ಮೇಲೆ ಬೇರೊಂದು ವಾಹನ ಹರಿದು ಈರ್ವರೂ ಮೃತಪಟ್ಟ ದಾರುಣ ಘಟನೆ ಮಂಗಳವಾರ ಸಂಜೆ ವಾಮಂಜೂರು ಚೆಕ್ಪೋಸ್ಟ್ ಸನಿಹದ ಪೆಟ್ರೋಲ್ ಪಂಪ್ ಬಳಿ ನಡೆದಿದೆ.
ಮಂಜೇಶ್ವರದಿಂದ ಉಪ್ಪಳದತ್ತಬರುತ್ತಿದ್ದ ಆಕ್ಟಿವಾ ಸ್ಕೂಟರ್ ಗೆ ಉಪ್ಪಳ ಕಡೆಯಿಂದ ಮಂಗಳೂರಿನತ್ತ ಸಾಗುತ್ತಿದ್ದ ಲಾರಿಯೊಂದು ಬೇರೊಂದು ವಾಹನವನ್ನು ಹಿಂದಿಕ್ಕಿ ಹೋಗುವ ಭರದಲ್ಲಿ ಡಿಕ್ಕಿಹೊಡೆದಿದ್ದು,ಈ ವೇಳೆ ಸ್ಕೂಟರ್ ನಲ್ಲಿದ್ದ ಪಾವೂರು ಸೂಫಿಗುರಿ ನಿವಾಸಿ ಮೊಯ್ದೀನ್ ಕುಂಞಿಯವರ ಪುತ್ರ ಸಾಕೀರ್(35) ಹಾಗೂ ಅವರ ಪತ್ನಿ ಹಸೀನಾ(25)ರಸ್ತೆಗೆಸೆಯಲ್ಪಟ್ಟರು.ಈ ವೇಳೆ ಯಮದೂತನಂತೆ ಬಂದ ಬೇರೊಂದು ವಾಹನ ಇವರ ಮೈಮೇಲೆ ಸಂಚರಿಸಿ ಗಂಭೀರ ಗಾಯಗೊಂಡರು.ಕೂಡಲೇ ಸಾರ್ವಜನಿಕರು ಒಟ್ಟಾಗಿ ದಂಪತಿಗಳನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಈರ್ವರೂ ಅಸುನೀಗಿದರು.ದಂಪತಿಗಳ ಜೊತೆಗಿದ್ದ ಮಗು ಪವಾಡ ಸದೃಶವಾಗಿ ಪಾರಾಗಿದೆಯೆಂದು ಸಾರ್ವಜನಿಕರು ಪತ್ರಿಕೆಗೆ ತಿಳಿಸಿದರು.ಮೈಮೇಲೆ ವಾಹನ ಚಲಿಸಿದ ರಭಸಕ್ಕೆ ಸಾಕೀರ್ ಧರಿಸಿದ್ದ ಹೆಲ್ಮೆಟ್ ಸಂಪೂರ್ಣ ಪುಡಿಯಾಗಿದೆ.
ಘಟನೆಯ ಮಾಹಿತಿ ತಿಳಿದು ಮಂಜೇಶ್ವರ ಪೋಲೀಸರು ಸ್ಥಳಕ್ಕಾಗಮಿಸಿದ್ದು,ಈ ವೇಳೆ ಸಾರ್ವಜನಿಕರು ಮತ್ತು ಪೋಲೀಸರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.ರಾಷ್ಟ್ರೀಯ ಹೆದ್ದಾರಿಯ ಉಪ್ಪಳದಿಂದ ಹೊಸಂಗಡಿ ವರೆಗಿನ ತೀವ್ರ ವಾಹನ ದಟ್ಟಣೆ ಹಾಗೂ ಅನಿಯಂತ್ರಿತ ಅಪಘಾತಗಳಿಗೆ ಪೋಲೀಸರು ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಜನರು ಪೋಲೀಸರನ್ನು ತರಾಟೆಗೆ ತೆಗೆದುಕೊಂಡರು.ಇದರಿಂದ ಅರ್ಧ ಗಂಟೆಗಳಷ್ಟು ಹೊತ್ತು ಹೆದ್ದಾರಿ ಸಮಚಾರ ಅಸ್ತವ್ಯಸ್ತಗೊಂಡಿತು.
ಚಲಿಸಿದ ವಾಹನ ನಿಂತಿಲ್ಲ:
ಕೆಳಗೆ ಬಿದ್ದ ದಂಪತಿಗಳ ಮೈಮೇಲೆ ಸಂಚರಿಸಿ ಸಾವಿಗೆ ಕಾರಣವಾದ ವಾಹನ ನಿಲ್ಲಿಸದೆ ಪರಾರಿಯಾಗಿರುವುದು ಮರೆತಿರುವ ಮಾನವೀಯತೆಯ ಸಾಕ್ಷಿಯಾಗಿದ್ದು ಹೆದ್ದಾರಿಯ ಸಹಿತ ಇತರ ಅಪಘಾತಗಳಲ್ಲಿ ಇಂತಹ ಚರ್ಯೆಗಳು ನಿತ್ಯ ಸಾಮಾನ್ಯವಾಗುತ್ತಿದೆ.ದಂಪತಿಗಗಳ ಮೈಮೇಲೆ ಸಂಚರಿಸಿದ ವಾಹನ ಯಾವುದೆಂಬುದೂ ಅರಿವಾಗದಷ್ಟು ಚಾಕಚಕ್ಯತೆಯಿಂದ ಆ ವಾಹನ ನಿಲ್ಲಿಸದೆ ಪರಾರಿಯಾಗಿದೆ.
Click this button or press Ctrl+G to toggle between Kannada and English