‘ನಮ್ಮ ಕುಡ್ಲ’ ಕರಾವಳಿಯಾದ್ಯಂತ ಎಪ್ರಿಲ್ 8 ರ ಚಾಂದ್ರಮಾನ ಯುಗಾದಿಯಂದು ಬಿಡುಗಡೆ

1:25 PM, Wednesday, April 6th, 2016
Share
1 Star2 Stars3 Stars4 Stars5 Stars
(5 rating, 6 votes)
Loading...

Namma Kudla
ಮಂಗಳೂರು : ತುಳು ಚಲನಚಿತ್ರ ‘ನಮ್ಮ ಕುಡ್ಲ’ ಕರಾವಳಿಯಾದ್ಯಂತ ಎಪ್ರಿಲ್ 8ರ ಚಾಂದ್ರಮಾನ ಯುಗಾದಿಯ ಶುಭದಿನದಂದು ಬಿಡುಗಡೆಗೊಳ್ಳಲಿದೆ.

ಚಿತ್ರದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ನಾಯಕ ನಟ ಹಾಗೂ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದ ಪ್ರಕಾಶ್ ಶೆಟ್ಟಿ ಧರ್ಮನಗರ ಮಾತನಾಡಿ ಈ ಚಿತ್ರವು “ವಾರ್ ಫಾರ್ ಪೀಸ್”ಎಂಬ ಧ್ಯೇಯದಿಂದ ಸಾಮಾಜಿಕ ಕಳಕಳಿಯ ಚಿತ್ರವಾಗಿ ಮೂಡಿಬಂದಿದೆ. ವಿಭಿನ್ನ ಶೈಲಿಯ ಕಥಾ ಹಂದರವನ್ನು ಒಳಗೊಂಡ ಈ ಚಿತ್ರವು ಪ್ರೇಕ್ಷಕರ ಮನಸೂರೆಗೊಂಡು ದಾಖಲೆ ನಿರ್ಮಿಸುವತ್ತ ಮುಂದಡಿಯಿಡಲಿದೆ. ಮನೆಮಂದಿಯೆಲ್ಲಾ ಮನರಂಜಿಸಬಹುದಾದ ಈ ಚಿತ್ರವು ವಿಶೇಷ ಸಂದೇಶದೊಂದಿಗೆ ಹಾಸ್ಯವನ್ನೂ ಒಳಗೊಂಡಿದೆ ಎಂದು ಹೇಳಿದರು.

ಅವರು ಚಿತ್ರದ ಬಿಡುಗಡೆ ಕುರಿತು ನಗರದ ಬಲ್ಲಾಳ್ ಭಾಗ್‌ನಲ್ಲಿರುವ ಫುಡ್‌ಲ್ಯಾಂಡ್ ಹೊಟೇಲಿನಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಈ ವಿಷಯ ತಿಳಿಸಿದರು.

ಖ್ಯಾತ ಖಳನಟ ಗೋಪಿನಾಥ್ ಭಟ್ ಮಾತನಾಡಿ ನಮ್ಮ ಸಂಸ್ಕೃತಿ ಮಾತೆಗೆ ಗೌರವ ನೀಡುವಂತಹದ್ದು. ಮಹಿಳೆಯಿದ್ದಲ್ಲಿ ಅಲ್ಲಿ ಜಯ ಇದ್ದೇ ಇರುತ್ತದೆ. ತುಳು ಚಲನಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳಾ ನಿರ್ದೇಶಕಿ ಅಶ್ವಿನಿ ಹರೀಶ್ ನಾಯಕ್ ಅವರಿಂದ ನಿರ್ದೇಶನಗೊಂಡಿರುವ ಈ ಚಿತ್ರ ಅದ್ಬುತವಾಗಿ ಮೂಡಿ ಬಂದಿದೆ ಎಂದರು.

Namma Kudla

ಚಿತ್ರದ ನಿರ್ಮಾಪಕಿ, ನಿರ್ದೇಶಕಿ ಹಾಗೂ ನಾಯಕಿ ಅಶ್ವಿನಿ ಹರೀಶ್ ನಾಯಕ್ ಮಾತನಾಡಿ ‘ನಮ್ಮ ಕುಡ್ಲ’ ಚಲನಚಿತ್ರ ಹೊಸಬರ ಪ್ರಯತ್ನ. ಚಿತ್ರದಲ್ಲಿ ಹಿರಿಯ ಕಲಾವಿದರು, ಹೊಸ ಕಲಾವಿದರು ಇದ್ದಾರೆ. ಚಿತ್ರದ ಯಶಸ್ವಿಗೆ ಪ್ರೇಕ್ಷಕರ ಪ್ರೋತ್ಸಾಹ ಅತ್ಯಗತ್ಯ ಎಂದರು.

ಚಿತ್ರದಲ್ಲಿ 108 ಕಲಾವಿದರ ತಂಡ ಭಾಗಿಯಾಗಿದ್ದಾರೆ. ಇವರಲ್ಲಿ 95ರಷ್ಟು ಕಲಾವಿದರು ಹೊಸಬರಾಗಿರುವುದು ಇನ್ನೊಂದು ವಿಶೇಷತೆಯಾಗಿದೆ. 45ದಿನಗಳಲ್ಲಿ ನಿರಂತರವಾಗಿ ಚಿತ್ರೀಕರಿಸಲಾಗಿದೆ. ಈಗಾಗಲೇ ಸಿನೆಮಾ ಟ್ರೈಲರ್ ಮೂಲಕ ಯೂಟ್ಯೂಬ್‌ನಲ್ಲಿ ಸಿನೆಮಾ ಪ್ರಿಯರ ಮೆಚ್ಚುಗೆ ಪಡೆದಿದೆ ಎಂದು ಹೇಳಿದರು.

ಚಿತ್ರವು ಮೊದಲ ಹಂತದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮಲ್ಟಿಫ್ಲೆಕ್ಸ್‌ಗಳೂ ಸೇರಿದಂತೆ 13 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ. ಮಂಗಳೂರಿನಲ್ಲಿ ಜ್ಯೋತಿ, ಪಿವಿಆರ್, ಸಿನೆಪೊಲಿಸ್ ಮತ್ತು ಬಿಗ್ ಸಿನೆಮಾಸ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ಉಳಿದಂತೆ ಬಿ.ಸಿ ರೋಡ್, ಪುತ್ತೂರು, ಬೆಳ್ತಂಗಡಿ, ಮೂಡಬಿದರೆ, ಸುಳ್ಯ, ಸುರತ್ಕಲ್, ಕಾರ್ಕಳ, ಉಡುಪಿ ಮತ್ತು ಮಣಿಪಾಲದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಅವರು ಹೇಳಿದರು.

ಪತ್ರಿಕಾ ಗೋಷ್ಟಿಯಲ್ಲಿ ನಮ್ಮ ಕುಡ್ಲ ಚಲನಚಿತ್ರದ ನಿರ್ದೇಶಕಿ ಅಶ್ವಿನಿ ಹರೀಶ್ ನಾಯಕ್, ನಾಯಕ ನಟ ಪ್ರಕಾಶ್ ಧರ್ಮನಗರ, ನಟರಾದ ಗೋಪಿನಾಥ್ ಭಟ್, ಸಂತೋಷ್ ಶೆಟ್ಟಿ, ಗುರುರಾಜ್ ಎಂ. ಬಿ. ವಿಜಯಕುಮಾರ್ ಕೊಡಿಯಾಲ್ ಬೈಲ್ ಮತ್ತಿತರರು ಉಪಸ್ಥಿತರಿದ್ದರು.

Namma Kudla
`ನಮ್ಮ ಕುಡ್ಲ’ ಚಲನಚಿತ್ರದ ಬಗ್ಗೆ

ಈ ಚಿತ್ರವು “ವಾರ್ ಫಾರ್ ಪೀಸ್” ಎಂಬ ಧ್ಯೇಯದಿಂದ ಸಾಮಾಜಿಕ ಕಳಕಳಿಯ ಚಿತ್ರವಾಗಿ ಮೂಡಿಬಂದಿದೆ.

ಖುಷಿ ಫಿಲಂಸ್ ಲಾಂಛನದಲ್ಲಿ ಅಮಾನ್ ಪ್ರೊಡಕ್ಷನ್ ಅರ್ಪಿಸುವ “ನಮ್ಮ ಕುಡ್ಲ” ಚಲನಚಿತ್ರವನ್ನು ಅಶ್ವಿನಿ ಹರೀಶ್ ನಾಯಕ್ ಅವರು ಮೊದಲಬಾರಿಗೆ ನಿರ್ಮಿಸಿ, ನಿರ್ದೇಶಿಸಿದ್ದರೆ, ಅಸ್ಲಂ ಪಾಶಾ ಸಹನಿರ್ಮಾಪಕರಾಗಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಪ್ರಕಾಶ್ ಶೆಟ್ಟಿ ಧರ್ಮನಗರ ಅವರದ್ದಾಗಿದೆ. ಗುರುರಾಜ್ ಎಂ.ಬಿ. ಸಂಗೀತ ನಿರ್ದೇಶಿರುವ ಈ ಚಲನಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಅವುಗಳಲ್ಲಿ ಒಂದು ವಾದ್ಯ ಸಂಗೀತ(ಇನ್‌ಸ್ಟ್ರುಮೆಂಟಲ್) ಆಗಿದೆ. ಎಲ್ಲಾ ಹಾಡುಗಳೂ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಂಗೀತ ಪ್ರಿಯರ ಮನಸೆಳೆದಿದೆ. ಈ ಚಿತ್ರಕ್ಕೆ ಚೆನ್ನೈನ ಅನ್ಬುಸೆಲ್ವಂ ಹಿನ್ನೆಲೆ ಸಂಗೀತ ಒದಗಿದ್ದಾರೆ. ‘ನಮ್ಮ ಕುಡ’ದ ಛಾಯಾಗ್ರಹಣವನ್ನು ಬಸವರಾಜ್ ಹಾಸನ್ ನಿರ್ವಹಿಸಿದ್ದು, ಇವರೊಂದಿಗೆ ಕುಮಾರ್ ಗೌಡ ಸಹಕರಿಸಿದ್ದಾರೆ. ಚಿತ್ರದ ಸಂಕಲನ ಹರೀಶ್ ನಾಯಕ್ ಅವರ ಕೈ ಚಳಕ ದಲ್ಲಿ ಅದ್ಬುತವಾಗಿ ಮೂಡಿ ಬಂದಿದೆ. ಕರಾವಳಿಯ ವಿವಿಧ ಪ್ರಕೃತಿ ರಮಣೀಯ ತಾಣಗಳಲ್ಲಿ ಚಿತ್ರೀಕರಿಸಲಾದ ‘ನಮ್ಮ ಕುಡ’ದಲ್ಲಿ ಮಂಗಳೂರು ನಗರವನ್ನು ವಿಶೇಷ ಶೈಲಿಯಲ್ಲಿ ಚಿತ್ರಿಸಲಾಗಿದೆ. ಚಿತ್ರದಲ್ಲಿ ನವೀನ್ ಶೆಟ್ಟಿ ಸಿರಿಬಾಗಿಲು ಸಹಾಯಕ ನಿರ್ದೇಶಕರಾಗಿ ದುಡಿದಿದ್ದಾರೆ. ಸಾಹಸ ಅಲ್ಟಿಮೇಟ್ ಶಿವ್ ಅವರದು. ಚಿತ್ರದ ಹಾಡುಗಳನ್ನು ಮಂಗಳೂರು, ಮಡಿಕೇರಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ 108 ಕಲಾವಿದರು ದುಡಿದಿದ್ದಾರೆ. ಇವರಲ್ಲಿ 95 ರಷ್ಟು ಕಲಾವಿದರು ಹೊಸಬರಾಗಿರುವುದು ಇನ್ನೊಂದು ವಿಶೇಷತೆಯಾಗಿದೆ. ಒಟ್ಟು 45 ದಿನಗಳಲ್ಲಿ ಚಿತ್ರೀಕರಿಸಲಾಗಿದೆ.

ಚಿತ್ರದ ತಾರಾಗಣದಲ್ಲಿ ನಾಯಕ ನಟರಾಗಿ ಪ್ರಕಾಶ್ ಶೆಟ್ಟಿ ಧರ್ಮನಗರ, ನಾಯಕಿಯಾಗಿ ಛಾಯಾ ಹರ್ಷ, ಹೆಸರಾಂತ ಕಲಾವಿದರಾದ ಲಕ್ಷ್ಮಣ್ ಮಲ್ಲೂರು, ಗೋಪಿನಾಥ್ ಭಟ್, ಸಂತೋಷ್ ಶೆಟ್ಟಿ, ಸತೀಶ್ ಬಂದಲೆ, ದಿನೇಶ್ ಅತ್ತಾವರ, ಅಸ್ಲಂ ಪಾಶಾ, ರಮೇಶ್ ರೈ ಕುಕ್ಕುವಳ್ಳಿ, ಸುನಿಲ್ ನೆಲ್ಲ್ಲಿಗುಡ್ಡೆ, ಪ್ರಸನ್ನ ಬೈಲೂರು, ಬಾಚು ಅದ್ಯಪಾಡಿ, ಸುಕೇಶ್ ಶೆಟ್ಟಿ, ಚೇತನ್ ಪಿಲಾರ್, ಜೆ.ಪಿ. ತೂಮಿನಾಡು, ಸ್ಕೈಲಾರ್ಕ್ ರಾಜ್, ದಯಾನಂದ್ ಬುಡ್ರಿಯಾ, ಸುಜಾತಾ, ವಿನ್ನಿ ಫೆರ್ನಾಂಡಿಸ್ ಮೊದಲಾದವರಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English