ರಾಜ್ಯಾದ್ಯಂತ ಜು.8ರಿಂದ ಕೆಜಿ ತೊಗರಿ ಬೇಳೆ 130 ರೂ.ಗೆ ಲಭ್ಯವಾಗಲಿದೆ: ಖಾದರ್

9:09 PM, Thursday, July 7th, 2016
Share
1 Star2 Stars3 Stars4 Stars5 Stars
(No Ratings Yet)
Loading...

Khadarಮಂಗಳೂರು: ರಾಜ್ಯಾದ್ಯಂತ ಜು.8ರಿಂದ ಕೆಜಿ ತೊಗರಿ ಬೇಳೆ 130 ರೂ.ಗೆ ಸಾರ್ವಜನಿಕರಿಗೆ ಲಭ್ಯವಾಗಲಿದೆ. ತೊಗರಿ ದಾಸ್ತಾನಿಗೂ ಮಿತಿ ನಿಗದಿ ಮಾಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಬಗೆಯ ತೊಗರಿಗೂ ಮುಂದಿನ ಮೂರು ತಿಂಗಳವರೆಗೆ ಇದೇ ದರ ಅನ್ವಯವಾಗಲಿದೆ. ವ್ಯಾಪಾರಿಗಳಿಗೂ ಸ್ವಲ್ಪ ಲಾಭ ದೊರೆಯಲಿದೆ. ಬೆಂಗಳೂರಿನ ಯಶವಂತಪುರ ಎಪಿಎಂಸಿ ಯಾರ್ಡ್‌ನಲ್ಲಿ ಜು. 8ರಂದು ಸಭೆ ನಡೆಸಿ ನಂತರ ಈ ಕುರಿತು ಆದೇಶ ಹೊರಡಿಸಲಾಗುವುದು ಎಂದರು.

ಖಾದ್ಯ ತೈಲ, ಸಕ್ಕರೆ ಬೆಲೆಯನ್ನು ಸದ್ಯಕ್ಕೆ ನಿಗದಿ ಮಾಡಿಲ್ಲ. ಪ್ರತಿ ತಿಂಗಳೂ ಇವುಗಳ ದರ ಏರಿಳಿತವಾಗುತ್ತಿದ್ದು, ದರ ಹೆಚ್ಚಾದರೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜು. 8ರ ಬಳಿಕ ಚಿಲ್ಲರೆ ವ್ಯಾಪಾರಿಗಳು 50 ಕ್ವಿಂಟಾಲ್‌ವರೆಗೆ ಮಾತ್ರ ತೊಗರಿ ದಾಸ್ತಾನು ಇಡಬಹುದು. ಗ್ರಾಮ ಮಟ್ಟದ ಸಗಟು ವ್ಯಾಪಾರಿಗಳು 1 ಸಾವಿರ ಕ್ವಿಂಟಾಲ್, ನಗರದ ಸಗಟು ವ್ಯಾಪಾರಿಗಳು 2 ಸಾವಿರ ಕ್ವಿಂಟಾಲ್ ದಾಸ್ತಾನು ಇಡಬಹುದು. ಇದಕ್ಕಿಂತ ಹೆಚ್ಚು ದಾಸ್ತಾನಿಟ್ಟರೆ ಮುಟ್ಟುಗೋಲು ಹಾಕಿ ದಂಡ ವಿಧಿಸಲಾಗುವುದು. ದಂಡದ ಪ್ರಮಾಣವನ್ನು ಜು. 8ರ ಸಭೆಯಲ್ಲಿ ನಿಗದಿ ಮಾಡಲಾಗುವುದು.

ಭವಿಷ್ಯದಲ್ಲಿ ಇತರ ಆಹಾರ ಪದಾರ್ಥಗಳ ದರ ಏರಿಕೆ ಸಂದರ್ಭದಲ್ಲೂ ಇಂಥದ್ದೇ ನಿಯಮಗಳನ್ನು ಜಾರಿ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಪಡಿತರ ಚೀಟಿಗೆ ಆಧಾರ್ ಕಾರ್ಡ್‌ ಲಿಂಕ್ ಮಾಡದಿರುವ ಕುಟುಂಬಗಳಿಗೆ ಪಡಿತರ ಸಾಮಗ್ರಿ ನಿರಾಕರಣೆ ಮಾಡಬಾರದು ಎನ್ನುವ ಆದೇಶ ಹೊರಡಿಸಲಾಗಿದೆ ಎಂದು ಸಚಿವ ಖಾದರ್ ಹೇಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English