ಮಂಗಳೂರು: ರಾಜ್ಯದ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ವಿಚಾರಣೆಯನ್ನು ಮರಳಿ ಚೆನ್ನೈ ಹಸಿರು ಪೀಠಕ್ಕೆ ವರ್ಗಾಯಿಸಬೇಕು ಎಂಬ ಕರ್ನಾಟಕ ನೀರಾವರಿ ನಿಗಮ(ಕೆಎನ್ಎನ್ಎಲ್)ದ ಬೇಡಿಕೆಯನ್ನು ದೆಹಲಿಯ ಹಸಿರು ಪೀಠ ತಿರಸ್ಕರಿಸಿದೆ.
ಎತ್ತಿನಹೊಳೆ ಯೋಜನೆ ಜಾರಿ ವಿರುದ್ಧದ ಎಲ್ಲಾ ನಾಲ್ಕು ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ಪಂಚ ಸದಸ್ಯರ ಹಸಿರು ಪೀಠ, ಕೆಎನ್ಎನ್ಎಲ್ ಪರವಾಗಿ ವಕೀಲ ನವೀನ್ ಆರ್.ನಾಥ್ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿತು. ಎತ್ತಿನಹೊಳೆ ಯೋಜನೆ ಜಾರಿ ವಿರುದ್ಧದ ನಾಲ್ಕು ಪ್ರಕರಣಗಳನ್ನು ತಾಂತ್ರಿಕ ಕಾರಣಗಳಿಗೆ ಚೆನ್ನೈ ಹಸಿರು ಪೀಠದಿಂದ ದೆಹಲಿಯ ಮುಖ್ಯ ಪೀಠಕ್ಕೆ ವರ್ಗಾಯಿಸಲಾಗಿದೆ. ಇದನ್ನು ಮತ್ತೆ ಚೆನ್ನೈ ಪೀಠಕ್ಕೆ ವರ್ಗಾಯಿಸುವಂತೆ ಕೋರುವುದರಲ್ಲಿ ಅರ್ಥವಿಲ್ಲ ಎಂದು ಮುಖ್ಯ ನ್ಯಾಯಾಧೀಶ ಸ್ವತಂತ್ರ ಕುಮಾರ್ ಪೀಠ ಹೇಳಿತು.
ಕೆಎನ್ಎನ್ಎಲ್ ಪರವಾಗಿ ವಾದ ಮಂಡನೆಗೆ ತಯಾರಾಗಿ ಬಂದಿಲ್ಲ ಎಂದು ವಕೀಲರು ಹೇಳಿದ ಕಾರಣ, ಮುಂದಿನ ವಿಚಾರಣೆಗೆ ಸಿದ್ಧರಾಗಿ ಬರುವಂತೆ ನ್ಯಾಯಪೀಠ ಸೂಚಿಸಿತು. ಇದೇ ವೇಳೆ ಯಾವುದೇ ಕಾರಣಕ್ಕೂ ಚೆನ್ನೈನ ಹಸಿರು ಪೀಠಕ್ಕೆ ಮತ್ತೆ ವಿಚಾರಣೆಯನ್ನು ವರ್ಗಾಯಿಸಬಾರದು ಎಂದು ಅರ್ಜಿದಾರರ ಪರವಾಗಿ ವಕೀಲ ಪ್ರಿನ್ಸ್ ಐಸಾಕ್ ವಾದ ಮಂಡಿಸಿದರು. ಬಳಿಕ ಈ ಬಗೆಗಿನ ವಿಚಾರಣೆಯನ್ನು ಆ. 8ಕ್ಕೆ ಮುಂದೂಡಲಾಯಿತು ಎಂದು ಅರ್ಜಿದಾರ ಕೆ.ಎನ್.ಸೋಮಶೇಖರ್ ತಿಳಿಸಿದ್ದಾರೆ.
Click this button or press Ctrl+G to toggle between Kannada and English