ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್‌ ಶಾ ಆ. 21ರಂದು ಮಂಗಳೂರಿಗೆ

10:44 AM, Friday, August 19th, 2016
Share
1 Star2 Stars3 Stars4 Stars5 Stars
(No Ratings Yet)
Loading...

Nalin-Kumar-Kateelಮಂಗಳೂರು: ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್‌ ಶಾ ಆ. 21ರಂದು ಮಂಗಳೂರಿಗೆ ಆಗಮಿಸಲಿದ್ದು, ಉಳ್ಳಾಲದಲ್ಲಿ ಜರಗಲಿರುವ 70ನೇ ಸ್ವಾತಂತ್ರ್ಯಸಂಭ್ರಮ ಹಾಗೂ ಬಲಿದಾನ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಅಮಿತ್‌ ಶಾ ಆ. 21ರಂದು ಉಳ್ಳಾಲಕ್ಕೆ ಭೇಟಿ ನೀಡಿ ಬಲಿದಾನ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಗೋವಾದಿಂದ ಅವರು ಬೆಳಗ್ಗೆ 4.30ಕ್ಕೆ ಮಂಗಳೂರು ಜಂಕ್ಷನ್‌ ರೈಲ್ವೇ ನಿಲ್ದಾಣಕ್ಕೆ ಆಗಮಿಸುವರು.

ಬೆಳಗ್ಗೆ 10 ಗಂಟೆಗೆ ನಗರದ ಬಿಜೆಪಿ ಕಚೇರಿಗೆ ಆಗಮಿಸಿ “ಗಿಡ ನೆಡಿ ಪರಿಸರ ಉಳಿಸಿ’ ಕಾರ್ಯಕ್ರಮದ ಅನ್ವಯ ಗಿಡ ನೆಡಲಿದ್ದಾರೆ. 10.20ಕ್ಕೆ ಪಂಪ್‌ವೆಲ್‌ ವೃತ್ತದಲ್ಲಿ ತಿರಂಗಾ ಯಾತ್ರೆಯ ಬೃಹತ್‌ ವಾಹನ ರ್ಯಾಲಿ ಉದ್ಘಾಟಿಸುವರು, 11 ಗಂಟೆಗೆ ಉಳ್ಳಾಲದಲ್ಲಿ ರಾಣಿ ಅಬ್ಬಕ್ಕನ ಪ್ರತಿಮೆಗೆ ಹಾರಾರ್ಪಣೆ ಮುಖಾಂತರ ಬಲಿದಾನ ಸ್ಮರಣೆ ಕಾರ್ಯಕ್ರಮ ನೆರವೇರಿಸುವರು. 11.30ಕ್ಕೆ ಕೊಣಾಜೆಯ ಮಂಗಳ ಗಂಗೋತ್ರಿ ಆವರಣದೊಳಗೆ ತಿರಂಗಾ ಯಾತ್ರೆಯ ಬೃಹತ್‌ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಿಜೆಪಿ ಕಚೇರಿ ಸಮೀಪ ನಡೆಯುವ ಗಿಡ ನೆಡುವ ಕಾರ್ಯಕ್ರಮದಲ್ಲಿ ಸುಮಾರು 1,000 ಮಂದಿ ಭಾಗವಹಿಸುವರು. ಪಂಪ್‌ವೆಲ್‌ನಲ್ಲಿ ಆರಂಭಗೊಳ್ಳುವ ತಿರಂಗಾ ಯಾತ್ರೆ ಬೃಹತ್‌ ವಾಹನ ರ್ಯಾಲಿಯಲ್ಲಿ ಸುಮಾರು 700 ವಾಹನಗಳು ಭಾಗ ವಹಿಸಲಿವೆ. ಕೋಣಾಜೆಯಲ್ಲಿ ನಡೆಯುವ ಕಾರ್ಯಕ್ರಮ ದಲ್ಲಿ ಸುಮಾರು 5,000 ಮಂದಿ ಪಾಲ್ಗೊಳ್ಳುವರು ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಭಾಗವಹಿಸುವರು.

Nalin-Kumar-Kateelದೇಶದ 70ನೇ ಸ್ವಾತಂತ್ರ್ಯೋತ್ಸವವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಸ್ವಾತಂತ್ರ್ಯಕ್ಕಾಗಿ ದುಡಿದ, ಮಡಿದ ಎಲ್ಲ ಹುತಾತ್ಮ ಸೇನಾನಿಗಳಿಗೆ ಗೌರವ ಸೂಚಿಸುತ್ತಾ ಅವರ ತ್ಯಾಗ ಸ್ಮರಿಸುತ್ತಾ ತ್ರಿವರ್ಣ ರಾಷ್ಟ್ರಧ್ವಜ ಯಾತ್ರೆ ಮೂಲಕ ಬಲಿದಾನ ಸ್ಮರಣೆ ಮಾಡಬೇಕು ಎಂಬುದು ಪ್ರಧಾನಿ ಆಶಯ. ಈ ಹಿನ್ನೆಲೆಯಲ್ಲಿ ಅಮಿತ್‌ ಶಾ ಉಳ್ಳಾಲಕ್ಕೆ ಆಗಮಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಬ್ಬಕ್ಕ ಅವರ ಬಲಿದಾನ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಅವರು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಜೀತೆಂದ್ರ ಕೊಟ್ಟಾರಿ, ಚಂದ್ರಹಾಸ ಉಳ್ಳಾಲ, ಕ್ಯಾ| ಬ್ರಿಜೇಶ್‌ ಚೌಟ, ವಿಕಾಸ್‌ ಪುತ್ತೂರು, ವೇದವ್ಯಾಸ ಕಾಮತ್‌, ಸುದರ್ಶನ್‌ ಮೂಡಬಿದಿರೆ, ರಾಜೇಶ್‌ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.

ರಾಷ್ಟ್ರಧ್ವಜ ಮಾತ್ರ ಬಳಕೆ
ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜ ಮಾತ್ರ ಬಳಸಲಾಗುತ್ತಿದೆ. ಪಕ್ಷದ ಧ್ವಜ ಬಳಸಲು ಅವಕಾಶವಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲರನ್ನೂ ಆಹ್ವಾನಿಸಲಾಗಿದೆ. ತಿರಂಗ ವಾಹನರ್ಯಾಲಿಯಲ್ಲಿ ಭಾಗವಹಿಸುವ ದ್ವಿಚಕ್ರ ವಾಹನದವರು ಹೆಲ್ಮೆಟ್‌ ಕಡ್ಡಾಯವಾಗಿ ಧರಿಸಬೇಕು. ಹೆಲ್ಮೆಟ್‌ ಇಲ್ಲದವರಿಗೆ ವಾಹನ ರ್ಯಾಲಿಯಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ನಳಿನ್‌ ಕುಮಾರ್‌ ಕಟೀಲು ತಿಳಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English