ಉಭಯ ಸಂಸ್ಥೆಗಳು ದೇಶದಲ್ಲಿ ಸಾಮಾಜಿಕ ಪರಿವರ್ತನೆಯೊಂದಿಗೆ ಆರ್ಥಿಕ ಪ್ರಗತಿಯ ರೂವಾರಿಗಳಾಗಿವೆ: ಟಿ.ಸಿ. ನೌತಿಯಾಲ್‌

2:23 PM, Friday, August 19th, 2016
Share
1 Star2 Stars3 Stars4 Stars5 Stars
(No Ratings Yet)
Loading...

Rudsetಬೆಳ್ತಂಗಡಿ: ಧರ್ಮಸ್ಥಳದ ರುಡ್‌ಸೆಟ್‌ ಸಂಸ್ಥೆಯ ನಾಯಕತ್ವದಲ್ಲಿ ಅದೇ ಮಾದರಿಯಲ್ಲಿ ದೇಶದಲ್ಲಿ 583ಆರ್‌ಸೆಟಿಗಳು ಕೂಡ ಕೆಲಸ ಮಾಡುತ್ತಿವೆ. ಉಭಯ ಸಂಸ್ಥೆಗಳು ದೇಶದಲ್ಲಿ ಸಾಮಾಜಿಕ ಪರಿವರ್ತನೆಯೊಂದಿಗೆ ಆರ್ಥಿಕ ಪ್ರಗತಿಯ ರೂವಾರಿಗಳಾಗಿವೆ ಎಂದು ಕೇಂದ್ರ ಸರಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉಪಕಾರ್ಯದರ್ಶಿ ಟಿ.ಸಿ. ನೌತಿಯಾಲ್‌ ಹೇಳಿದರು.

ಅವರು ಗುರುವಾರ ಧರ್ಮಸ್ಥಳದ ಸನ್ನಿಧಿ ಅತಿಥಿಗೃಹದಲ್ಲಿ ನಡೆದ ದೇಶದ 17 ರಾಜ್ಯಗಳ 27 ರುಡ್‌ಸೆಟ್‌ ಸಂಸ್ಥೆಗಳ ನಿರ್ದೇಶಕರ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಹೆಗ್ಗಡೆ ಸ್ಫೂರ್ತಿ
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಮತ್ತು ಕೆನರಾ ಬ್ಯಾಂಕ್‌ ಸಹಭಾಗಿತ್ವದೊಂದಿಗೆ ಪ್ರಾರಂಭಿಸಲಾದ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರಗಳು ಸ್ಫೂರ್ತಿಯ ಸೆಲೆಯಾಗಿದ್ದು ಇದರ ಯಶಸ್ಸನ್ನು ಕೇಂದ್ರ ಸರಕಾರ ಗಮನಿಸಿ ಅದೇ ಮಾದರಿಯಲ್ಲಿ ದೇಶದ ಎಲ್ಲಜಿಲ್ಲೆಗಳಲ್ಲಿ ಆರ್‌ಸೆಟಿ ಪ್ರಾರಂಭಿಸಿದೆ ಎಂದು ನೌತಿಯಾಲ್‌ ತಿಳಿಸಿದರು.

ಸರಕಾರ ಮತ್ತು ಸಮಾಜ ಎರಡೂಸಂಸ್ಥೆಗಳಿಂದ ಬಹಳಷ್ಟು ಸೇವೆ-ಸಾಧನೆಯ ನಿರೀಕ್ಷೆಯಲ್ಲಿದೆ. ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಉತ್ತಮ ಮಾರುಕಟ್ಟೆ ವ್ಯವಸ್ಥೆ ಹಾಗೂ ಉದ್ಯಮ ಶೀಲತೆ ಬಗ್ಗೆ ಆದ್ಯತೆ ನೀಡಬೇಕು. ಈ ದಿಸೆಯಲ್ಲಿ ಧರ್ಮಸ್ಥಳದ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಸೇವೆ-ಸಾಧನೆ ಶ್ಲಾಘನೀಯವಾಗಿದೆ. ಇಂತಹ ಸೇವಾ ಸಂಸ್ಥೆಗಳು ದೇಶದೆ ಲ್ಲೆಡೆ ಇರಬೇಕೆಂದು ಹೇಳಿದರು.

ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕ ದೀನಬಂಧು ಮಹಾ ಪಾತ್ರ, ಯುವಶಕ್ತಿಯ ಸದ್ಬಳಕೆಯಿಂದ ಉತ್ತಮ ಪ್ರಗತಿ ಸಾಧ್ಯವಾಗುತ್ತದೆ. ರುಡ್‌ಸೆಟ್‌ ಮತ್ತು ಆರ್‌ಸೆಟ್‌ ಸಂಸ್ಥೆಗಳ ನಿರ್ದೇಶಕರು ಮತ್ತು ತರಬೇತುದಾರರು ಸಾಮಾಜಿಕ ಪ್ರಗತಿಯ ಹರಿಕಾರರು ಎಂದರು.

ಅಧ್ಯಕ್ಷತೆ ವಹಿಸಿದ ಡಾ| ಡಿ. ವೀರೇಂದ್ರ ಹೆಗ್ಗಡೆ, ಆರ್ಥಿಕ ಲಾಭ-ನಷ್ಟಕ್ಕಿಂತಲೂ ಸೇವೆಯಿಂದ ನಮಗೆ ಸಿಗುವ ಸಂತೋಷ ತೃಪ್ತಿಯನ್ನುಂಟು ಮಾಡುತ್ತವೆ. ಸ್ವ-ಉದ್ಯೋಗಿಗಳು ಯಾವುದೇ ದುಶ್ಚಟಕ್ಕೆ ಬಲಿಯಾಗ ಬಾರದು ಎಂದರು.

ಸಿಂಡಿಕೇಟ್‌ ಬ್ಯಾಂಕಿನ ಎಫ್‌ಜಿಎಂ ಸತೀಶ್‌ ಕಾಮತ್‌ ಮತ್ತು ಆರ್‌ಸೆಟಿ ನ್ಯಾಶನಲ್‌ ಅಕಾಡೆಮಿಯ ರಾಷ್ಟ್ರೀಯ ನಿರ್ದೇಶಕ ಕೆ.ಎನ್‌. ಜನಾರ್ದನ್‌, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾ ಧ್ಯಕ್ಷ ಪ್ರೊ| ಎಸ್‌. ಪ್ರಭಾಕರ್‌, ಕೆನರಾ ಬ್ಯಾಂಕ್‌ ಮಂಗಳೂರಿನ ಜಿಎಂ ವಿರೂಪಾಕ್ಷ, ಎಸ್‌.ಎನ್‌. ದೇಸಾಯಿ, ಡಿಜಿಎಂ ಎಸ್‌. ಎಂ. ಸೋಮಯಾಜಿ, ಆರ್‌ಸೆಟಿ ನ್ಯಾಶನಲ್‌ ಅಕಾಡೆಮಿಯ ಡಿಜಿ ಆರ್‌.ಆರ್‌. ಸಿಂಗ್‌ ಉಪಸ್ಥಿತರಿದ್ದರು.

ರುಡ್‌ಸೆಟ್‌ ಸಂಸ್ಥೆಗಳ ಕೇಂದ್ರೀಯ ಕಚೇರಿ ಕಾರ್ಯನಿರ್ವಾಹಕ ನಿರ್ದೇಶಕ ವಿ.ಜೆ. ಅರುಣ್‌ ಸ್ವಾಗತಿಸಿದರು. ಉಜಿರೆ ರುಡ್‌ಸೆಟ್‌ ಸಂಸ್ಥೆಯ ನಿರ್ದೇಶಕ ಅಜಿತ್‌ ಕೆ. ರಾಜಣ್ಣವರ್‌ ವಂದಿಸಿದರು. ಅನುಸೂಯ ನಿರ್ವಹಿಸಿದರು.

ದಿನಕ್ಕೆ 300 ರೂ. ವೇತನಕ್ಕೆ ದುಡಿಯುತ್ತಿದ್ದ ಧಾರವಾಡದ ದಾಸನೂರು ಪ್ರಕಾಶ್‌ ಅವರು 2008ರಲ್ಲಿ ರುಡ್‌ಸೆಟ್‌ನಲ್ಲಿ ಸ್ವ ಉದ್ಯೋಗ ತರಬೇತಿ ಪಡೆದು ಈಗ 500 ಮಂದಿಗೆ ಉದ್ಯೋಗ ನೀಡಿ ಕೋಟ್ಯಂತರ ರೂ. ವ್ಯವಹಾರ ಮಾಡುತ್ತಿದ್ದಾರೆ. ಇಂತಹ ಅನೇಕರು ಸಮ್ಮೇಳನದ ವಿಶೇಷ ಆಕರ್ಷಣೆ ಯಾಗಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English