ಬದಿಯಡ್ಕ: ಕರಾವಳಿಯ ಹೆಮ್ಮೆಯ ಕಲೆಯಾದ ಯಕ್ಷಗಾನ ಇಂದು ಜಗದ್ವಿಖ್ಯಾತಗೊಳ್ಳುತ್ತಿರುವುದು ಹೆಮ್ಮೆಯಾಗಿದೆ.ಯುವ ತಲೆಮಾರು ಕಲೆಯ ಬಗ್ಗೆ ಆಸಕ್ತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಜೊತೆಗೆ ಯಕ್ಷಗಾನಕ್ಕಾಗಿ ಅಹರ್ನಿಶಿ ದುಡಿದ ಹಿರಿಯ ಕಲಾವಿದರ ಮಾರ್ಗದರ್ಶನ ಮತ್ತು ಅವರ ಸಂಕಷ್ಟಗಳಿಗೆ ಧ್ವನಿಯಾಗುವ ಹೃದಯ ವೈಶಾಲ್ಯತೆಗಳೂ ಇರಲೆಂದು ನ್ಯಾ.ಎಂ.ನಾರಾಯಣ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ನೀರ್ಚಾಲು ಸಮೀಪದ ಮಾನ್ಯದ ಯಕ್ಷಸಂಗಮ ಮಾನ್ಯ ಭಾನುವಾರ ಅಪರಾಹ್ನ ಮಾನ್ಯ ವೆಂಕಟರಮಣ ಕ್ಷೇತ್ರ ಪರಿಸರದಲ್ಲಿ ಆಯೋಜಿಸಿದ್ದ ಮಹೋನ್ನತ ತೆಂಕುತಿಟ್ಟಿನ ಅಗ್ರಮಾನ್ಯ ಕಲಾವಿದರ ಕೂಡುವಿಕೆಯಲ್ಲಿ ಪ್ರದರ್ಶನಗೊಂಡ ಬಯಲಾಟ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಲೆ,ಕಲಾವಿದ ಒಂದಕ್ಕೊಂದು ಪೂರಕವಾದಾಗ ಬೆಳವಣಿಗೆಗೆ ಸಾಧ್ಯವಾಗುತ್ತದೆ.ಹಿಂದಿನ ತಲೆಮಾರಿನ ಕಲಾವಿದರಲ್ಲಿ ಜ್ಞಾನ,ಚಿಕಿತ್ಸಕತನವಿದ್ದರೂ ಕಡುಬಡತನದಿಂದ ಸಂಕಷ್ಟಕ್ಕೊಳಗಾಗಿದ್ದರು.ಆದರೆ ಇಂದು ಬದಲಾದ ಕಾಲಮಾನದಲ್ಲಿ ಕೊಡುಗೆ ನೀಡಿದ ಮಹಾನ್ ಕಲಾವಿದರನ್ನು ಗೌರವಿಸಿ ಆಶ್ರಯ ನೀಡುವ ಅಗತ್ಯವಿದೆಯೆಂದು ಅವರು ನೆನಪಿಸಿದರು.ಕಲೆ ಅಭಿಮಾನವಾಗಿ ನಮ್ಮ ಸಂಸ್ಕೃತಿಯ ಸಮವರ್ಧನೆಗೆ ಪೂರಕವಾಗಿದ್ದು ಪಾಶ್ಚಿಮಾತ್ಯದ ಸೆಳೆತದಿಂದ ಯಕ್ಷಗಾನ ಬಡವಾಗಬಾರದೆಂದು ಅವರು ತಿಳಿಸಿದರು.
ಮಾನ್ಯ ವೆಂಕಟರಮಣ ಕ್ಷೇತ್ರದ ಅಧ್ಯಕ್ಷ ಮೋಹನ ಮಾನ್ಯ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಮಾನ್ಯ ತಿಮ್ಮಯ್ಯ ಹಾಗೂ ಪ್ರಸಿದ್ದ ಸ್ತ್ರೀ ವೇಶದಾರಿಯಾಗಿ ತನ್ನದೇ ಕೊಡುಗೆ ನೀಡಿರುವ ಕುಂಬಳೆ ಶ್ರೀಧರ ರಾವ್ ರವರನ್ನು ಗೌರವಿಸಿ ಅಭಿನಂದಿಸಲಾಯಿತು.
ಯಕ್ಷಸಂಗಮ ಮಾನ್ಯದ ಅಧ್ಯಕ್ಷ ಮಂಜುನಾಥ ಮಾನ್ಯ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.ಹರಿಕೃಷ್ಣ ಡಿ ವಂದಿಸಿದರು.
ಬಳಿಕ ಬ್ರಹ್ಮಕಪಾಲ,ಚಕ್ರವ್ಯೂಹ,ವರಾಹವತಾರ ಪ್ರಸಂಗಗಳ ಬಯಲಾಟ ಗಣ್ಯ ಕಲಾವಿದರಿಂದ ಪ್ರದರ್ಶಿಸಲ್ಪಟ್ಟಿತು.
Click this button or press Ctrl+G to toggle between Kannada and English