ಸಿದ್ಧರಾಮಯ್ಯ ಅವರು ಪಕ್ಷದ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉಪಚುನಾವಣೆಗೆ ಸಿದ್ಧರಾಗಬೇಕು: ಪೂಜಾರಿ ಸಲಹೆ

3:39 PM, Friday, November 4th, 2016
Share
1 Star2 Stars3 Stars4 Stars5 Stars
(No Ratings Yet)
Loading...

Janardhan Poojaryಮಂಗಳೂರು: ಮೈಸೂರಿನಲ್ಲಿ ನಡೆಯುವ ಉಪಚುನಾವಣೆ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪಕ್ಷದ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಿದ್ಧರಾಗಬೇಕು. ಪ್ರತಿಪಕ್ಷಗಳು ಒಗ್ಗಟ್ಟಾದರೆ ಸಿಎಂ ಮನೆಗೆ ಹೋಗಬೇಕಾದೀತು ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಸಲಹೆ ಮಾಡಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಉಪಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಚುನಾವಣೆ ಎದುರಿಸಲು ಕಸರತ್ತು ಆರಂಭಿಸಿವೆ. ದೇವೇಗೌಡರು ಈಗಾಗಲೇ ಶ್ರೀನಿವಾಸ್‌ ಪ್ರಸಾದ್‌ ಪಕ್ಷೇತರರಾಗಿ ಸ್ಪರ್ಧಿಸಿದರೆ ಜೆಡಿಎಸ್‌ ಬೆಂಬಲಿಸುವುದಾಗಿ ಹೇಳಿದ್ದಾರೆ. ಈ ಸಂದರ್ಭ ಸಿಎಂ ಅಹಂಕಾರ ಬಿಟ್ಟು ಜಾಣ್ಮೆಯ ಹೆಜ್ಜೆ ಇಡಬೇಕಾಗಿದೆ ಎಂದರು.

ಪಕ್ಷ, ಕಾರ್ಯಕರ್ತರು ಮತ್ತು ಸರಕಾರದ ಹಿತದೃಷ್ಟಿಯಿಂದ ಸಿದ್ಧರಾಮಯ್ಯ ಕಾರ್ಯೋನ್ಮುಖರಾಗಬೇಕು. ಚುನಾವಣೆಗೆ ಯಾರನ್ನು ಬೇಕಾದರೂ ನಿಲ್ಲಿಸಲಿ; ಆದರೆ ಪಕ್ಷ ಗೆಲ್ಲಬೇಕು. ಅದು ಸಾಧ್ಯವಾಗಲ್ಲ ಎಂದಾದಲ್ಲಿ ರಾಜೀನಾಮೆ ನೀಡಬಹುದು ಎಂದು ಅವರು ಇದೇ ವೇಳೆ ತಿಳಿಸಿದರು.

ದೇಶದ ಯೋಧರಿಗೆ ಸಮಾನ ಶ್ರೇಣಿ-ಸಮಾನ ವೇತನ ಬಗ್ಗೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದರು. ಅನುಷ್ಠಾನ ಮಾಡುತ್ತೇವೆ ಎಂಬ ವಾಗ್ಧಾನವನ್ನೂ ನೀಡಿದ್ದರು. ಆದರೆ ಅಧಿಕಾರ ಬಂದ ಮೇಲೆ ಎಲ್ಲವನ್ನೂ ಮರೆತ್ತಿದ್ದಾರೆ. ಈ ಬಗ್ಗೆ ಯೋಧರಲ್ಲಿ ಗೊಂದಲವಿದೆ ಎಂದು ಜನಾರ್ದನ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.

Janardhan Poojaryಆತ್ಮಹತ್ಯೆ ಮಾಡಿಕೊಂಡ ಯೋಧ ಗ್ರೆವಾಲ್‌ ಪರಿಸ್ಥಿತಿ ನಿಭಾಯಿಸುವಲ್ಲಿ ರಕ್ಷಣಾ ಸಚಿವರು ಸಂಪೂರ್ಣ ವಿಫಲವಾಗಿದ್ದಾರೆ. ಕೇಂದ್ರ ಸಚಿವ ವಿ.ಕೆ. ಸಿಂಗ್‌, ಬಿಜೆಪಿ ನಾಯಕಿ ಮೀನಾಕ್ಷಿ ಲೇಖೀ ಅವರಿಗೆ ಅಧಿಕಾರದ ಮದವೇರಿದ್ದು, ವಿವಾದಾಸ್ಪದ ಹೇಳಿಕೆ ನೀಡುತ್ತಿದ್ದಾರೆ. ಹೊಸದಿಲ್ಲಿಯಲ್ಲಿ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಗೆ ಯೋಧನ ಮೃತದೇಹ ವೀಕ್ಷಣೆಗೆ ಬಂದ ರಾಹುಲ್‌ ಗಾಂಧಿ, ಕೇಜ್ರಿವಾಲ್‌ ಅವರನ್ನು ಮುಖ್ಯ ಗೇಟ್‌ ಬಳಿಯೇ ಪೊಲೀಸರು ತಡೆದಿದ್ದಾರೆ. ಕುಟುಂಬ ಸದಸ್ಯರ ಬಳಿಯೂ ಮಾತನಾಡಲು ಅವಕಾಶ ನೀಡದಿರುವುದು ಖಂಡನೀಯ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಅರುಣ್‌ ಕುವೆಲ್ಲೋ, ಅಜಿತ್‌ಕುಮಾರ್‌, ಯು. ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.

ಉತ್ತರ ಪ್ರದೇಶದಲ್ಲಿ ಅಖೀಲೇಶ್‌ ಯಾದವ್‌ ರಥಯಾತ್ರೆ ಮಾಡಿದರೆ, ಪಕ್ಷದೊಳಗಿನ ಅಸಮಾಧಾನದಿಂದ ಕಾರ್ಯಕರ್ತರು ಹೊಡೆದಾಡಿಕೊಳ್ಳುತ್ತಿದ್ದಾರೆ. ಇದರಿಂದ ಮುಲಾಯಂ ಸಿಂಗ್‌ ಕಂಗಾಲಾಗಿದ್ದಾರೆ. ಆದರೆ ರಾಜ್ಯದಲ್ಲಿ ಸಿದ್ಧರಾಮಯ್ಯ ಮಾತ್ರ ಇನ್ನೂ ನಿದ್ದೆಯಿಂದ ಎಚ್ಚರವಾದಂತಿಲ್ಲ ಎಂದು ಆಪಾದಿಸಿದ ಪೂಜಾರಿ, ಪಕ್ಷಕ್ಕೆ ಲಾಭವಾಗುವುದಾದರೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ನೀವು ರಥಯಾತ್ರೆ ಮಾಡಿ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English