ಕರಾವಳಿಯ ಜನತೆಯ ಸಂಶಯವನ್ನು ನಿವಾರಣೆ ಮಾಡುವ ಜವಾಬ್ದಾರಿ ಮುಖ್ಯಮಂತ್ರಿಗಳು ವಹಿಸಬೇಕು: ಕ್ಯಾ.ಗಣೇಶ್‌‌ ಕಾರ್ಣಿಕ್

10:37 AM, Friday, December 9th, 2016
Share
1 Star2 Stars3 Stars4 Stars5 Stars
(5 rating, 1 votes)
Loading...

Ganesh Karnikಮಂಗಳೂರು: ಎತ್ತಿನಹೊಳೆ ಯೋಜನೆಯಲ್ಲಿ ಸಾಕಷ್ಟು ತಾಂತ್ರಿಕ ತೊಂದರೆ, ಗೊಂದಲಗಳಿವೆ. ಮುಖ್ಯಮಂತ್ರಿಗಳು ಅಧಿಕಾರಿಗಳ ಸಹಿತ ಮಂಗಳೂರಿಗೆ ಆಗಮಿಸಿ ಈ ಭಾಗದ ಜನತೆ ಹಾಗೂ ಜನಪ್ರತಿನಿಗಳ ಸಂಶಯಗಳನ್ನು ದೂರ ಮಾಡುವುದಾಗಿ ಹೇಳಿದ್ದರು. ಆದರೆ ಮುಖ್ಯಮಂತ್ರಿಗಳು ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾ.ಗಣೇಶ್‌‌ ಕಾರ್ಣಿಕ್ ಹೇಳಿದ್ದಾರೆ.

ಮಾಧ್ಯಮರೊಂದಿಗೆ ಮಾತನಾಡಿದ ಅವರು, 9.5ಕೋಟಿ ರೂ. ವೆಚ್ಚದಲ್ಲಿ 32 ವಷಗಳ ಹಿಂದೆ ಕೈಗೆತ್ತಿಕೊಂಡಿರುವ ವಾರಾಹಿ ಯೋಜನೆ ಇನ್ನೂ ಪೂರ್ಣಗೊಂಡಿಲ್ಲ. ಯೋಜನೆಗೆ ರೂ.689 ಕೋಟಿ ವೆಚ್ಚ ಮಾಡಲಾಗಿದೆ. 6,000 ಇಂಚು ಮಳೆ ಬೀಳುತ್ತದೆ. 24 ಟಿಎಂಸಿ ನೀರು ಲಭ್ಯ ಎಂಬ ಸುಳ್ಳು ಲೆಕ್ಕದ ಮೇಲೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ 1,800 ರೂ. ಖರ್ಚು ಮಾಡಲಾಗಿದೆ. ಮುಖ್ಯಮಂತ್ರಿಗಳು ನೀಡಿದ ಭರವಸೆಯನ್ನು ಈಡೇರಿಸಿಲ್ಲ. ಕರಾವಳಿಯ ಜನತೆಯ ಸಂಶಯವನ್ನು ನಿವಾರಣೆ ಮಾಡುವ ಜವಾಬ್ದಾರಿ ಅವರು ವಹಿಸಬೇಕು ಎಂದು ತಿಳಿಸಿದರು.

ಎತ್ತಿನ ಹೊಳೆ ಯೋಜನೆಯ ಕುರಿತು ನಮ್ಮ ಆತಂಕ ಪ್ರಕಟಿಸಿ ಜನಾಭಿಪ್ರಾಯ ರೂಪಿಸುವುದಕ್ಕಾಗಿ `ಪಂಚ ತೀರ್ಥ ಸಪ್ತ ಕ್ಷೇತ್ರ ರಥಯಾತ್ರೆ’ಯನ್ನು ಹಮ್ಮಿಕೊಳ್ಳಲಾಗಿದೆ. ಕುಡಿಯುವ ನೀರಿನ ತೀವ್ರ ಕೊರತೆ ಎದುರಿಸುತ್ತಿರುವ ಬಯಲುಸೀಮೆಗೆ ನೀರು ಕೊಡುವುದಕ್ಕೆ ನಮ್ಮ ವಿರೋಧ ಖಂಡಿತ ಇಲ್ಲ. ಆದರೆ ಎತ್ತಿನಹೊಳೆ ಯೋಜನೆಯಿಂದ ಅವರಿಗೆ ನೀರು ಲಭಿಸದು ಎಂಬ ಆತಂಕ ನಮ್ಮದಾಗಿದೆ ಎಂದರು.

ಪಶ್ಚಿಮಘಟ್ಟದ ತೊರೆಗಳಿಗೆ ಎಂಟು ಕಡೆಗಳಲ್ಲಿ ಅಣೆಕಟ್ಟುಗಳನ್ನು ನಿರ್ಮಿಸಿ ಸಂಗ್ರಹವಾದ ನೀರನ್ನು ಕೊಳವೆಗಳ ಮೂಲಕ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಕೆರೆಕಟ್ಟೆಗಳನ್ನು ತುಂಬಿಸಿ ನೀರು ಒದಗಿಸುವುದು ಮೂರ್ಖತನದ ಯೋಜನೆ. ಜೊತೆಗೆ ಯೋಜನೆಯಲ್ಲಿ ಪಶ್ಚಿಮಘಟ್ಟಕ್ಕೆ ಆಗಬಹುದಾದ ಹಾನಿ ಮತ್ತು ಜೀವ ವೈವಿಧ್ಯಗಳ ಮೇಲೆ ಆಗುವ ಪರಿಣಾಮ, ಪರಿಸರ ಹಾನಿಯ ಕುರಿತು ಗಮನ ಹರಿಸಲಾಗಿಲ್ಲ ಎಂದು ಹೇಳಿದ ಕಾರ್ಣಿಕ್, ಬಯಲುಸೀಮೆಗೆ ನೀರು ಕೊಡಲು ಬದಲಿ ಯೋಜನೆಗಳಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English