ಮೇಟಿ ಅವರ ರಾಸಲೀಲೆ ಪ್ರಕರಣದ ತನಿಖೆಯನ್ನು ಸಿಬಿಐಗೊಪ್ಪಿಸಿ ಕ್ರಮ ಕೈಗೊಳ್ಳಬೇಕು: ಜನಾರ್ದನ ಪೂಜಾರಿ

10:25 AM, Friday, December 16th, 2016
Share
1 Star2 Stars3 Stars4 Stars5 Stars
(No Ratings Yet)
Loading...

janardhana-poojaryಮಂಗಳೂರು: ಮೇಟಿ ಅವರ ರಾಸಲೀಲೆ ಪ್ರಕರಣದ ತನಿಖೆಯನ್ನು ಸಿಬಿಐಗೊಪ್ಪಿಸಬೇಕು ಹಾಗೂ ಇದೇ ರೀತಿ ಇನ್ನಿಬ್ಬರು ಸಚಿವರು, ಮೂವರು ಶಾಸಕರು ಕಾಮ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಆರ್‌ಟಿಐ ಕಾರ್ಯಕರ್ತ ನೀಡಿರುವ ಮಾಹಿತಿಯಂತೆ ಅವರ ಹೆಸರುಗಳನ್ನು ಬಹಿರಂಗಪಡಿಸಿ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌‌ ಹಿರಿಯ ನಾಯಕ ಜನಾರ್ದನ ಪೂಜಾರಿ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಟಿಯ ದುರ್ನಡತೆಯಿಂದಾಗಿ ರಾಷ್ಟ್ರ ಮಟ್ಟದಲ್ಲೇ ಅಲ್ಲೋಲ ಕಲ್ಲೋಲವುಂಟಾಗಿದೆ. ಪಕ್ಷಕ್ಕೂ ಹಾನಿಯಾಗಿದೆ. ಪ್ರಕರಣದ ಸಿಡಿ ಬಿಡುಗಡೆಯಾಗುವ ಮೊದಲೇ ಆರ್‌ಟಿಐ ಕಾರ್ಯಕರ್ತ ರಾಜಶೇಖರ್ ಅವರೊಂದಿಗೆ ಮಾತನಾಡದೆ, ಸಿಡಿ ತರಿಸಿಕೊಳ್ಳಲು ಮುಂದಾಗದೇ ಕಾಂಗ್ರೆಸ್ ಪಕ್ಷ ಸಾಯಬೇಕು ಎಂದು ಬಯಸಿದ್ದೀರಾ? ಸಿಐಡಿ ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವುದರಿಂದ ನ್ಯಾಯದ ಬಗ್ಗೆ ಜನರಿಗೆ ಅನುಮಾನ ಮೂಡಬಹುದು. ಇದರ ಬದಲು ಪ್ರಕರಣವನ್ನು ಸಿಬಿಐಗೊಪ್ಪಿಸಿ ಎಂದರು.

ಕಾಲವಿನ್ನೂ ಮಿಂಚಿಲ್ಲ. ನೀವು ಅಸಮರ್ಥರೂ ಎಂದು ಹೇಳುತ್ತಿಲ್ಲ. ಆದರೆ ರಾಜಶೇಖರ್ ತಿಳಿಸಿರುವಂತೆ ಸಂಪುಟದಲ್ಲಿರುವ ಇನ್ನಿಬ್ಬರು ಸಚಿವರು ಮತ್ತು ಮೂವರು ಶಾಸಕರ ಕುರಿತು ಮಾಹಿತಿ ಪಡೆದುಕೊಂಡು ನಿಮ್ಮ ತಾಕತ್ತು ಮತ್ತು ಬದ್ಧತೆಯನ್ನು ರಾಜ್ಯದ ಜನತೆಯ ಮುಂದೆ ಪ್ರದರ್ಶಿಸಬೇಕು.

ಪಕ್ಷವೂ ಇದನ್ನೇ ಬಯಸುತ್ತಿದೆ. ಈಗಾಗಲೇ ಹೈಕಮಾಂಡ್ ನಿಮಗೆ ಉದ್ದವಾದ ಹಗ್ಗವನ್ನು ನೀಡಿದೆ. ಅದು ನಿಮ್ಮ ಕೊರಳಿಗೆ ಬರಲಿದೆ ಎಂಬ ಭಾವನೆ ರಾಜ್ಯದ ಜನತೆಯಲ್ಲಿದೆ. ತಾವೇ ಸ್ವತಃ ಆ ಹಗ್ಗಕ್ಕೆ ಕೊರಳೊಡ್ಡುವ ಸ್ಥಿತಿಯನ್ನು ತಂದುಕೊಳ್ಳಬೇಡಿ ಎಂದು ಮುಖ್ಯಮಂತ್ರಿಗಳನ್ನು ಪೂಜಾರಿ ಎಚ್ಚರಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English