ಮಂಗಳೂರು: ಮಹಾನಗರ ಪಾಲಿಕೆಯ 27 ವಾರ್ಡ್ಗಳಲ್ಲಿ ಕೈಗೊಂಡ ಕುಡಿಯುವ ನೀರಿನ ವೈಜ್ಞಾನಿಕ ತಪಾಸಣೆ ಸಂದರ್ಭ ಕೋಲಿಫಾರಂ ಮತ್ತು ಫೀಕಲ್ ಕೋಲಿಫಾರಂ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಾಗಿದ್ದು, ನೀರು ಸಂಪೂರ್ಣ ಮಲೀನಗೊಂಡಿದೆ. ಇದಕ್ಕೆ ಕಾರಣರಾದವರ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೇಮಾರ್ ಒತ್ತಾಯಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶುದ್ಧ ಕುಡಿಯುವ ನೀರು ಸಹಿತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕಾಗಿದ್ದು ಆಡಳಿತ ಸಂಸ್ಥೆಗಳ ಜವಾಬ್ದಾರಿ. ಆದರೆ ತಾನು ಸ್ವ ಆಸಕ್ತಿಯಿಂದ ನಗರದ 27 ವಾರ್ಡ್ಗಳಲ್ಲಿ ಕೈಗೊಂಡ ಮಾದರಿ ತಪಾಸಣೆ ವೇಳೆ 10 ಕಡೆಗಳಲ್ಲಿ ಬ್ಯಾಕ್ಟೀರಿಯಾ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಪತ್ತೆಯಾಗಿದೆ.
ಈ ರೀತಿಯ ನೀರಿನ ಸುರಕ್ಷತೆಯ ಬಗ್ಗೆ ತಪಾಸಣೆ ನಡೆಸಿ ಶುದ್ಧ ನೀರು ಪೂರೈಸಬೇಕಾಗಿರುವುದು ಪಾಲಿಕೆ ಮತ್ತು ಜಿಲ್ಲಾಡಳಿತದ ಹೊಣೆಯಾಗಿದೆ. ಆದರೆ ಇವೆರಡೂ ಆಡಳಿತ ಸಂಸ್ಥೆಗಳು ಈ ನಿಟ್ಟಿನಲ್ಲಿ ವಿಫಲವಾಗಿವೆ ಎಂದರು.
ಕನಿಷ್ಠ ಮೂರು ತಿಂಗಳಿಗೊಮ್ಮೆ ನೀರಿನ ಗುಣಮಟ್ಟವನ್ನು ಪರಿಶೀಲಿಸಬೇಕಾಗಿದ್ದ ಪಾಲಿಕೆ ಆಡಳಿತ ವಿಫಲವಾಗಿದೆ. ಸಾರ್ವಜನಿಕರು ನಿರೀಕ್ಷೆಯಿರಿಸಿ ಕಾಂಗ್ರೆಸ್ಗೆ ಪಾಲಿಕೆ ಆಡಳಿತ ನೀಡಿದ್ದು0, ಅಧಿಕಾರಕ್ಕೇರಿದ ಕಾಂಗ್ರೆಸ್ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದೆ.
ಇನ್ನಾದರೂ ಎಚ್ಚೆತ್ತು ನಗರದ ಎಲ್ಲಾ 60 ವಾರ್ಡ್ಗಳಲ್ಲಿ ವೈಜ್ಞಾನಿಕವಾಗಿ ತಪಾಸಣೆ ನಡೆಸಬೇಕು. ಮಾಲಿನ್ಯದ ಮೂಲ ಪತ್ತೆಮಾಡಿ ಸುರಕ್ಷಿತ ಕುಡಿಯುವ ನೀರು ಪೂರೈಸಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
Click this button or press Ctrl+G to toggle between Kannada and English