ಮಂಗಳೂರು: ಪೆರ್ಮುದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ತೆತ್ತೂರು ಗ್ರಾಮದ ಬೋರುಕಟ್ಟೆ – ನಾಯರ್ ಕೋಡಿ – ಬಾಜಾವು ರಸ್ತೆಯನ್ನು ಕೆಲವು ಖಾಸಗಿ ವ್ಯಕ್ತಿಗಳು ಭೂಮಿಯನ್ನು ಅಭಿವೃದ್ಧಿಪಡಿಸುವ ನೆಪದಲ್ಲಿ ನಾಶಪಡಿಸಿ ಪರಿಸರದ ಸುಮಾರು ಎಂಭತ್ತರಿಂದ ನೂರು ಮನೆಯವರಿಗೆ ತೊಂದರೆ ಉಂಟುಮಾಡಿರುವುದನ್ನು ವಿರೋಧಿಸಿ ಇಂದು ಕುತ್ತೆತ್ತೂರಿನ ನಾಯರ್ಕೋಡಿ ಬಳಿ ಪ್ರತಿಭಟನೆ ನಡೆಯಿತು.
ಈ ರಸ್ತೆಯಲ್ಲಿ ಹೋಗುವ ಹೆಂಗಸರು, ಹಿರಿಯನಾಗರಿಕರು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರಿಗೆ ಕನಿಷ್ಠ ಗೌರವ ಕೊಡುವ ಕೆಲಸವನ್ನೂ ಇಲ್ಲಿ ಕೆಲಸ ಮಾಡುತ್ತಿರುವವರು ಮಾಡುತ್ತಿಲ್ಲ. ಎಲ್ಲಾ ಅಧಿಕಾರಿಗಳು ಯಾವುದೋ ಕಾರಣಕ್ಕಾಗಿ ಜನರನ್ನು ಮತ್ತು ಜನಪ್ರತಿನಿಧಿಗಳನ್ನು ತಪ್ಪು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಈ ಮೊದಲು ಎರಡು ಖಾಸಗಿಯವರಿಗೆ ಸೇರಿದ ಸಂಸ್ಥೆಗಳು ಇಲ್ಲಿ ಸುಮಾರು ನಲುವತ್ತು ಎಕರೆ ಪ್ರದೇಶದಲ್ಲಿ ಭೂ ಆಭಿವೃದ್ಧಿಯನ್ನು ಮಾಡುತ್ತಿರುವುದು, ರಸ್ತೆಯನ್ನು ಕಬಳಿಸಿದ ಬಗ್ಗೆ ಸ್ಥಳೀಯರಿಂದ ಪ್ರತಿಭಟನೆ ವ್ಯಕ್ತವಾದಾಗ ಒಂದು ಸಂಸ್ಥೆಯವರು ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರ ಸಮಕ್ಷಮದಲ್ಲಿ ಕಂದಾಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ರಸ್ತೆಯನ್ನು ರಚಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮಾಡಲಾಗುವುದು ಎಂದು ಪಂಚನಾಮೆಯ ಮೂಲಕ ಬರೆದು ಕೊಟ್ಟಿದ್ದರು.
ಕುತ್ತೆತ್ತೂರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ರಸ್ತೆ ಧ್ವಂಸ ಮಾಡಿದವರ ವಿರುದ್ಧ ಘೋಷಣೆ ಕೂಗಿದರು.
Click this button or press Ctrl+G to toggle between Kannada and English