ಕನ್ನಡ ಭಾಷೆಯ ಅಳಿವು-ಉಳಿವು ನಮ್ಮ ಕೈಯಲ್ಲಿದೆ : ನಾಗತಿಹಳ್ಳಿ

5:29 PM, Sunday, August 7th, 2011
Share
1 Star2 Stars3 Stars4 Stars5 Stars
(No Ratings Yet)
Loading...

Mumbai Kannada Sammelana/ಅಖೀಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ

ಮುಂಬಯಿ: ಮುಂಬಯಿ ಕನ್ನಡ ಸಂಘ ಹಾಗೂ ಹೃದಯವಾಹಿನಿ ಕನ್ನಡ ಪತ್ರಿಕೆ ಮಂಗಳೂರು ಅವರ ಸಂಯುಕ್ತ ಆಶ್ರಯದಲ್ಲಿ ಆ. 6 ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದ ವಿ. ಕೃ. ಗೋಕಾಕ್‌ ವೇದಿಕೆಯಲ್ಲಿ ಆಯೋಜಿಸಲಾಗಿದ್ದ 2011 ನೇ ಸಾಲಿನ 8 ನೇ ಅಖೀಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಶನಿವಾರ ಖ್ಯಾತ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಉದ್ಘಾಟನೆ ಬಳಿಕ ಸಮ್ಮೇಳನಾಧ್ಯಕ್ಷರೂ ಆಗಿದ್ದ ನಾಗತಿಹಳ್ಳಿ ಚಂದ್ರಶೇಖರ್‌ ಮಾತನಾಡಿ ಎರಡು ಸಾವಿರಕ್ಕೂ ಅಧಿಕ ಕಾಲದ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆಯ ಅಳಿವು-ಉಳಿವು ನಮ್ಮ ಕೈಯಲ್ಲಿದೆ. ಇಂದಿನ ಕಂಪ್ಯೂಟರೀಕೃತ ಯುಗದಲ್ಲಿ ಭಾಷೆ, ಸಂಸ್ಕೃತಿಯ ಕುರಿತು ಕೇಳುವಷ್ಟು ವ್ಯವಧಾನ ನಮ್ಮಲ್ಲಿಲ್ಲ. ಕನ್ನಡ ಕಾವ್ಯ ಶಕ್ತಿಯು ಜಗತ್ತಿನಲ್ಲಿಯೆ ಶ್ರೇಷ್ಠವಾಗಿದೆ. ಕನ್ನಡ ಭಾಷೆ 12 ನೇ ಶತಮಾನದಲ್ಲಿ ವಚನಕಾರರಿಂದ ಶ್ರೀಮಂತಗೊಂಡಿತ್ತು ಎಂದು ಅವರು ಹೇಳಿದರು.

ಭಾಷೆ ಎನ್ನುವುದು ಸೃಜನಶೀಲರ ಸೊತ್ತಲ್ಲ. ಅದು ಕಾರ್ಮಿಕ ವರ್ಗದ ಸೊತ್ತು ಎಂಬುವುದನ್ನು ನಾವು ಮರೆಯಬಾರದು. ಮಾತೃಭಾಷೆಯನ್ನು ಪೋಷಕರ ನೆಲೆಯಲ್ಲಿ ಮಕ್ಕಳಿಗೆ ಕಳುಹಿಸಿಕೊಡಬೇಕು ಎಂದು ಕರೆನೀಡಿದರು.

ಸಮಾರಂಭದಲ್ಲಿ ವಿಶೇಷ ಆಮಂತ್ರಿತರಾದ ಬಿಜಾಪುರ ,ಐಪಿಎಸ್‌ ಡಾ| ಡಿ. ಸಿ. ರಾಜಪ್ಪ, ಮುಖ್ಯ ಅತಿಥಿಗಳಾಗಿ ಬಿಲ್ಲವರ ಅಸೋಸಿಯೇಶನ್‌ನ ಮುಂಬಯಿ ಉಪಾಧ್ಯಕ್ಷ ಎಲ್‌. ವಿ. ಅಮೀನ್‌, ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಧರ್ಮಪಾಲ್‌ ದೇವಾಡಿಗ ಹಾಗೂ ಕತಾರ್‌ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷ ಅರವಿಂದ ಪಾಟೀಲ್‌ ಅವರು ಉಪಸ್ಥಿತರಿದ್ದು ಸಂದಭೋìಚಿತವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಇಲಿಯಾಸ್‌ ಸಾಂಕ್ತೀಸ್‌, ಕುವೈಟ್‌ ಅವರ ಅಧ್ಯಕ್ಷತೆಯಲ್ಲಿ ಹೊರನಾಡ ಕನ್ನಡಿಗರ ಗೋಷ್ಠಿ ಹಾಗೂ ಡಾ| ಬಸವರಾಜ್‌ ಬನ್ನಿ ಅವರ ಅಧ್ಯಕ್ಷತೆಯಲ್ಲಿ ಹಾಸ್ಯಗೋಷ್ಠಿ ನಡೆಯಿತು. ಹೃದಯವಾಹಿನಿ ಪತ್ರಿಕೆಯ ಸಂಪಾದಕ ಮತ್ತು ಸಮ್ಮೇಳನ ಸಮಿತಿಯ ಅಧ್ಯಕ್ಷ ಇಂ. ಕೆ. ಪಿ. ಮಂಜುನಾಥ್‌ ಸಾಗರ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆ, ಕಲೆ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುವುದು ಈ ಸಮ್ಮೇಳನದ ಮುಖ್ಯ ಉದ್ಧೇಶವಾಗಿದೆ. ಹೊರನಾಡ ಕನ್ನಡಿಗರ ಮಕ್ಕಳಿಗೆ ಕರ್ನಾಟಕ ಮತ್ತು ಕನ್ನಡದ ಬಗ್ಗೆ ಹೆಚ್ಚಿನ ಬಾಂಧವ್ಯ ಮೂಡಿಸುವುದು ಈ ಸಮ್ಮೇಳನ ಮುಖ್ಯ ಉದ್ಧೇಶವಾಗಿದೆ ಎಂದರು.

ಎಸ್‌. ಕೆ. ಪದ್ಮನಾಭ್‌ ಅವರು ಪ್ರಾರ್ಥನೆಗೈದರು. ಮುಂಬಯಿ ಕನ್ನಡ ಸಂಘದ ಅಧ್ಯಕ್ಷ ಗುರುರಾಜ ಎಸ್‌. ನಾಯಕ್‌ ಅವರು ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ವಾಪಿ ಕನ್ನಡ ಸಂಘ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ ಡಾ| ಜಿ. ಡಿ. ಜೋಶಿ, ವಾಪಿ ಕನ್ನಡ ಸಂಘದ ವಿಶ್ವಸ್ಥ ಪಿ. ಎಸ್‌. ಕಾರಂತ್‌, ಕಾಗೋಡು ರಂಜಮಂಚದ ಕಾಗೋಡು ಅಣ್ಣಪ್ಪ, ತಿ. ರಾಮಕೃಷ್ಣ ಹಾಸನ, ಶ್ರೀನಾಗೇಶ್‌ ಬೆಂ. ವಿ| ಲಕ್ಷ್ಮಿ ಮೂರ್ತಿ, ಗೀತಾ ಸುರತ್ಕಲ್‌, ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು, ಮಾರುತಿ ಬಡಿಗೇರ, ಲತಾ ಪೂಜಾರಿ ಅವರನ್ನು ಸ್ವರ್ಣ ಮಯೂರ ಪ್ರಶಸ್ತಿಯನ್ನು ನೀಡಿ ಅತಿಥಿಗಳ ಸಮ್ಮುಖದಲ್ಲಿ ಗೌರವಿಸಿದರು. ರವಿ ಮಂಗಳೂರು ಅವರು ಅತಿಥಿಗಳನ್ನು ಹಾಗೂ ಸಮ್ಮಾನಿತರನ್ನು ಪರಿಚಯಿಸಿದರು. ಗೋ. ನಾ. ಸ್ವಾಮಿ ಅವರು ಕಾರ್ಯಕ್ರಮ ನಿರೂಪಿಸಿದರು. ಜಯಪ್ರಕಾಶ್‌ ರಾವ್‌ ಅವರು ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ತುಮಕೂರು ವಿದ್ಯಾನಗರದ ಶ್ರೀ ಸಾಯಿರಾಮ್‌ ನೃತ್ಯ ಕೇಂದ್ರದ ಕಲಾವಿದರುಗಳಿಂದ, ಟಿ. ಎಸ್‌. ಸಾಗರ್‌ ಪ್ರಸಾದ್‌ ನಿರ್ದೇಶನದಲ್ಲಿ ನೃತ್ಯ ರೂಪಕ, ವಿದ್ವಾನ್‌ ಕೋಲಾರ ರಮೇಶ್‌ ಅವರ ನಿರ್ದೇಶನದಲ್ಲಿ ಶ್ರೀ ಜಯ ನಾಟ್ಯ ಕಲಾ ಅಕಾಡೆಮಿ ಕೋಲಾರದ ಕಲಾವಿದರಿಂದ ನಾಡಗೀತೆಗೆ ನೃತ್ಯ, ಸುಚೇತನಾ ನಾಯ್ಕ ಅವರಿಂದ ಭರತನಾಟ್ಯ ಹಾಗೂ ಶ್ರೀ ಪುಪ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ ಕಲಾವಿದರಿಂದ ಜಾನಪದ ನೃತ್ಯ ಪ್ರದರ್ಶನಗೊಂಡಿತು.-UV

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English