ಮಂಗಳೂರು: ಕಂಬಳ ಕ್ರೀಡೆ ನಡೆಸಲು ಕೇಂದ್ರ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಮನವಿ ಮಾಡಿದ್ದಾರೆ.
ಲೋಕಸಭಾ ಚಳಿಗಾಲದ ಅಧಿವೇಶನದಲ್ಲಿ ನಿಯಮ 377ರ ಅಡಿಯಲ್ಲಿ ಮಾತನಾಡಿ ವಿಷಯ ಮಂಡಿಸಿದ ಅವರು, ಕಂಬಳವು ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ಕೋಣಗಳನ್ನು ಮಣ್ಣಿನ ಗದ್ದೆಯಲ್ಲಿ ಒಡಿಸುವ ಸ್ಪರ್ಧೆಯೇ ಸಾಂಪ್ರದಾಯಿಕ ಕ್ರೀಡೆಯಾಗಿದೆ.
ಕಂಬಳದ ಇತಿಹಾಸದಲ್ಲಿ ಕೋಣಗಳನ್ನು ಯಾವುದೇ ರೀತಿಯಾಗಿ ಹಿಂಸಿಸುವ ಹಾಗೂ ಈ ಕ್ರೀಡೆಯ ಸಂದರ್ಭದಲ್ಲಿ ಕೋಣಗಳು ಮೃತಪಟ್ಟ ನಿದರ್ಶನಗಳಿಲ್ಲ. ಈ ಕ್ರೀಡೆಯು ಕರಾವಳಿ ರೈತರ ಆಚರಣೆ, ಸಂಪ್ರದಾಯ ಹಾಗೂ ಸಂಸ್ಕೃತಿಯ ಪ್ರತೀಕವಿದೆ. ಹೀಗಾಗಿ ಇದಕ್ಕೆ ಅನುಮತಿ ನೀಡುವುದರಿಂದ ಯಾವುದೇ ತೊಂದರೆಗಳು ಸಂಭವಿಸುವುದಿಲ್ಲ ಎಂದರು.
ಆದ್ದರಿಂದ ಕರ್ನಾಟಕದ ತುಳು ಭಾಷಿಕರ ಗುರುತಾಗಿರುವ ಕಂಬಳ ಕ್ರೀಡೆಯನ್ನು ನಡೆಸಲು ಕೇಂದ್ರ ಸರ್ಕಾರವು ಈ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.
Click this button or press Ctrl+G to toggle between Kannada and English