ಮಂಜೇಶ್ವರ: ತಲಪಾಡಿ ಚತುಷ್ಪಥ ಹೆದ್ದಾರಿಯಲ್ಲಿ ಬುಧವಾರದಿಂದ ಸುಂಕ ವಸೂಲಿ ಆರಂಭಿಸಿದ್ದು,ಇದನ್ನು ವಿರೋಧಿಸಿ ಬೆಳಿಗ್ಗೆ ಪ್ರತಿಭಟನೆ ನಡೆಸಲಾಯಿತು. ಗಡಿನಾಡ ರಕ್ಷಣಾ ವೇದಿಕೆ, ತಲಪಾಡಿ ನಾಗರಿಕರ ಒಕ್ಕೂಟದ ಆಶ್ರಯದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಹೆದ್ದಾರಿಯ ಕಾಮಗಾರಿ ಪೂರ್ತಿಗೊಳಿಸದೆ ಅವ್ಯವಸ್ಥೆಯಲ್ಲಿದ್ದು ಈ ಹಿನ್ನೆಲೆಯಲ್ಲಿ ಸುಂಕವಸೂಲಿ ಮಾಡಬಾರದೆಂದು ಪ್ರತಿಭಟನೆಕಾರರು ಆಗ್ರಹಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ತಲುಪಿದ ಉಳ್ಳಾಲ ಪೊಲೀಸರು ಪ್ರತಿಭಟನಾ ನಿರತರಾದವರನ್ನು ಬಂಧಿಸಿ ಠಾಣೆಗೊಯ್ದರು.
ಪ್ರತಿಭಟನೆಯನ್ನು ಕಾಸರಗೋಡು ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು. ಗಡಿನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ದಿಕ್ ತಲಪಾಡಿ ಅಧ್ಯಕ್ಷತೆ ವಹಿಸಿದರು. ಮಂಜೇಶ್ವರ ಗ್ರಾಮ ಪಂ. ಸದಸ್ಯ ಮುಕ್ತಾರ್.ಎ, ತಲಪಾಡಿ ಪಂ. ಸದಸ್ಯ ವೈಭವ ಶೆಟ್ಟಿ, ಯೂತ್ ಲೀಗ್ ನೇತಾರ ಸೈಫುಲ್ಲ ತಂಙಳ್, ರಾಜಶೇಖರ ತಲಪಾಡಿ, ಯುವ ಕಾಂಗ್ರೆಸ್ ಕಾರ್ಯದರ್ಶಿ ಇರ್ಷಾದ್ ಮಂಜೇಶ್ವರ, ಎಂ.ಎಸ್.ಎಫ್ ರಾಜ್ಯ ಕಾರ್ಯದರ್ಶಿ ಅಜೀಜ್ ಕಳತ್ತೂರು, ಸಿದ್ದಿಕ್ ಮಂಜೇಶ್ವರ, ಮುಸ್ತಫ ಉದ್ಯಾವರ, ಸಿದ್ದೀಖ್ ಮೊದಲಾದವರು ನೇತೃತ್ವ ನೀಡಿದರು.
ಇವರ ನೇತೃತ್ವದಲ್ಲಿ ಪ್ರತಿಭಟನೆ ಆರಂಭಗೊಳ್ಳುತ್ತಿರುವಂತೆ ಪೋಲೀಸರು ಇವರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು. ಸುಮಾರು 150 ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದರು.
Click this button or press Ctrl+G to toggle between Kannada and English