ಮಂಗಳೂರು : ಜನವಾದಿ ಮಹಿಳಾ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಮಹಿಳೆಯರ ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಬೆಲೆ ಏರಿಕೆಯನ್ನು ವಿರೋಧಿಸಿ ನಡೆಯುತ್ತಿರುವ ಚಳವಳಿಯ ಅಂಗವಾಗಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಯಿತು.
ಜೆ.ಎಂ.ಎಸ್. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್. ಲಕ್ಷ್ಮೀ, ಮಾತನಾಡಿ ಕೆ.ಜಿ.ಗೆ 2 ರೂ.ಗಳಂತೆ 35 ಕೆ.ಜಿ. ಅಕ್ಕಿ ವಿತರಿಸುವಂತೆ ಆಗ್ರಹಿಸಿದರು, ದೇಶದ ಶೇ. 77ರಷ್ಟು ಜನತೆಯ ತಲಾ ಆದಾಯ ಕೇವಲ 20 ರೂ. ಆಗಿದ್ದು, ದಿನದಿಂದ ದಿನಕ್ಕೆ ಜನತೆಯ ಕೊಳ್ಳುವ ಶಕ್ತಿ ಕುಸಿಯುತ್ತಿದೆ. ಏರುತ್ತಿರುವ ಬೆಲೆ ಬಡ-ಮಧ್ಯಮ ವರ್ಗದವರನ್ನು ಅಕ್ಷರಶಃ ನಿರ್ಗತಿಕರನ್ನಾಗಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಜನರ ಬೆಂಬಲಕ್ಕೆ ನಿಂತು ಆಹಾರ ಭದ್ರತೆ ಒದಗಿಸ ಬೇಕಾಗಿರುವ ಕೇಂದ್ರ-ರಾಜ್ಯ ಸರಕಾರಗಳು ಬಡತನ ಮತ್ತು ಹಸಿವನ್ನು ರಾಜಕೀಯ ಚದುರಂಗದಾಟದ ದಾಳಗಳನ್ನಾಗಿ ಬಳಸುತ್ತಿವೆ ಎಂದು ಆರೋಪಿಸಿದರು.
ಬಿಪಿಎಲ್/ಎಪಿಎಲ್ಗೆ ಸಂಬಂಧಿಸಿ ಆಗಿಂದಾಗ್ಗೆ ಸಮೀಕ್ಷೆ ನಡೆಸುವುದು, ಬಡವರನ್ನು ವಿಭಜಿಸುವ ಹಾಗೂ ಆ ಮೂಲಕ ಬಡವರ ಸಂಖ್ಯೆ ಕಡಿಮೆ ಮಾಡಿ ಹೊಸ ಆರ್ಥಿಕ ನೀತಿಯಿಂದ ಬಡತನವೇ ಕಾಣೆಯಾಗಿದೆ ಎಂದು ನಂಬಿಸಲು ಮಾಡುತ್ತಿರುವ ಹುನ್ನಾರವಾಗಿದೆ, ಸಮೀಕ್ಷೆಗಳನ್ನು ಜನರು ತಿರಸ್ಕರಿಸ ಬೇಕು ಎಂದು ಜಿಲ್ಲಾಧ್ಯಕ್ಷೆ ಸುಕನ್ಯಾ, ಕರೆ ನೀಡಿದರು.
ಎಲ್ಲಾ ಕುಟುಂಬಗಳಿಗೂ ರೇಶನ್ ಕಾರ್ಡ್ ಮತ್ತು ಕೆ.ಜಿ.ಗೆ 2 ರೂ.ನಂತೆ 35 ಕೆ.ಜಿ. ಅಕ್ಕಿ ವಿತರಿಸ ಬೇಕು, ಆಹಾರ ಪದಾರ್ಥಗಳು, ತೈಲ, ಗ್ಯಾಸ್, ಸಾರಿಗೆ ದರಗಳನ್ನು ಇಳಿಸಲು ಕೇಂದ್ರ- ರಾಜ್ಯ ಸರಕಾರಗಳು ಮುಂದಾಗ ಬೇಕು ಹಾಗೂ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ನಗರ ಪ್ರದೇಶಕ್ಕೂ ಅದನ್ನು ವಿಸ್ತರಿಸಬೇಕು ಎಂದು ಕಾರ್ಯದರ್ಶಿ ಶಾಜಿದಾ ಅವರು ಒತ್ತಾಯಿಸಿದರು.
ಭಾರತಿ ಬೋಳಾರ, ಹೇಮಲತಾ, ರಮಣಿ ಮೂಡಬಿದಿರೆ ಮುಂತಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English