ಮಂಗಳೂರು : ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪುರಭವನದ ಬಾಡಿಗೆಯನ್ನು ಪರಿಷ್ಕರಿಸಬೇಕೆಂಬ ಕಲಾವಿದರ ಬೇಡಿಕೆಗೆ ಮಣಿದ ಮೇಯರ್ ಇಂದು ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪುರಭವನದ ಮುಂಗಡ ಹಾಗೂ ಬಾಡಿಗೆ ದರವನ್ನು ಭಾರೀ ಕಡಿತಗೊಳಿಸುವ ಮೂಲಕ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದರು.
ಆದರೆ ಮೇಯರ್ ಅವರ ಈ ನಿರ್ಧಾರದಿಂದ ಆಡಳಿತ ಪಕ್ಷದ ಸದಸ್ಯರ ಗದ್ದಲ ಹಾಗೂ ತೆರಿಗೆ, ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರತಿಭಾ ಕುಳಾಯಿ ಸಭಾ ತ್ಯಾಗ ಮಾಡಿದರು.
‘ಪುರಭವನದ ದರವನ್ನು ಕಡಿಮೆ ಮಾಡುವಂತೆ ಜೂನ್ 17ರಂದು ನಡೆದ ಸಭೆಯಲ್ಲಿ ಕಲಾವಿದರು ಒತ್ತಾಯಿಸಿದ್ದರು. ಕಲಾವಿದರಿಗೆ ಪುರಭವನ ಲಭ್ಯವಾಗಬೇಕೆಂಬ ನಿಟ್ಟಿನಲ್ಲಿ ಅವರ ಬೇಡಿಕೆಗೆ ಮನ್ನಣೆ ನೀಡಿ ಈ ನಿರ್ಧಾರ ಕೈಗೊಳ್ಳಲಾಯಿತು. ಜು.1ರಿಂದಲೇ ಪುರಭವನದ ದರ ಕಡಿಮೆಯಾದರೆ ಬಹುತೇಕ ಕಲಾವಿದರಿಗೆ ಅವಕಾಶ ಸಿಗುತ್ತದೆ ಎಂಬ ಕಾರಣದಿಂದ ಪೂರ್ವಭಾವಿ ಮಂಜೂರಾತಿ ನೀಡಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಲಾಭವೂ ನನಗಿಲ್ಲ. ಸ್ಥಾಯಿ ಸಮಿತಿ ಮೂಲಕ ಈ ಕಡತ ರವಾನೆಯಾದರೆ ಮತ್ತೆ ಸಮಾರು ಐದು ತಿಂಗಳು ಕಲಾವಿದರು ಕಾಯಬೇಕಾಗುತ್ತದೆ ಎಂಬ ಕಾರಣದಿಂದ ಪುರಭವನದ ದರವನ್ನು ಕೈಗೆಟಕುವ ದರಕ್ಕೆ ಸೀಮಿತಗೊಳಿಸಿ ಪೂರ್ವಭಾವಿ ಮಂಜೂರಾತಿ ನೀಡಿದ್ದೇನೆ’ ಎಂದು ಮೇಯರ್ ಕವಿತಾ ಸನಿಲ್ ಸಭೆಯಲ್ಲಿ ತಿಳಿಸಿದರು.
ಪುರಭವನದ ಪ್ರಸಕ್ತ ಬಾಡಿಗೆ ದರವನ್ನು ಶೇ. 50ರಷ್ಟು ಕಡಿತ ಮಾಡಲಾಗಿದ್ದು, ಜುಲೈ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ.
Click this button or press Ctrl+G to toggle between Kannada and English