ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೇ ಇಲಾಖೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ನಿವಾರಣೆಯಾಗಿವೆ. ಮಂಗಳೂರು-ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ರೈಲ್ವೇಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸಿಕೊಳ್ಳಲು ಜು.22ರಂದು ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ರೈಲ್ವೇ ಅಧಿಕಾರಿಗಳ ಸಭೆಯಲ್ಲಿ ಗುರುವಾರ ಮಾತನಾಡಿದ ಸಂಸದ ನಳಿನ್, ಅಧಿಕಾರಿಗಳು ಸಮಸ್ಯೆ ಸೃಷ್ಟಿಯಾಗದಂತೆ ಎಚ್ಚರವಹಿಸಬೇಕು, ರೈಲ್ವೇ ಸಮಸ್ಯೆಗಳ ಕುರಿತಂತೆ ಇಲಾಖೆಯು ಪಿಡಬ್ಲ್ಯೂಡಿ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಪರಸ್ಪರ ಸಹಭಾಗಿತ್ವದಿಂದ ಕೆಲಸ ನಿರ್ವಹಿಸಬೇಕು ಎಂದವರು ಹೇಳಿದರು.
ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ರೈಲ್ವೇಗೆ ಸ್ಥಳ ವೀಕ್ಷಣೆ ವೇಳೆ ಅಧಿಕಾರಿಗಳು ಕೂಡ ಜತೆಯಲ್ಲಿರುವುದರಿಂದ ಶೀಘ್ರ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದವರು ಹೇಳಿದರು.
ಬಿ.ಸಿ.ರೋಡ್ ಮತ್ತು ತೊಕ್ಕೊಟ್ಟು ಭಾಗದ ಕೆಲವೆಡೆ ಸರ್ವಿಸ್ ರಸ್ತೆ ಮತ್ತಿತರ ಕಾಮಗಾರಿಗಾಗಿ ಪೊನ್ನುರಾಜ್ ಅವರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಭೂ ಸ್ವಾಧೀನ ಆಗಿದೆ. ಆದರೆ ಅಲ್ಲಿನ ಕೆಲವು ಕಟ್ಟಡಗಳನ್ನು ಇನ್ನೂ ಒಡೆಯಲಾಗಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಭೂ ಸ್ವಾಧೀನ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಭೂ ಸ್ವಾಧೀನ ಅಧಿಕಾರಿ ಸಂಜೀವ, ಕೆಲವರು ಕೋರ್ಟ್ ಮೆಟ್ಟಿಲೇರಿದ್ದುದರಿಂದ ಸಮಸ್ಯೆಯಾಗಿತ್ತು. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ರೈಲ್ವೇ ನಿಲ್ದಾಣಗಳಲ್ಲಿ ಆಟೋ ಚಾಲಕರು ಸಾರ್ವಜನಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ. ಈ ಸಮಸ್ಯೆ ಬಗೆ ಹರಿಯಬೇಕು. ಮುಂದಿನ 15 ದಿನಗಳಲ್ಲಿ ರೈಲ್ವೇ ಇಲಾಖೆ ಆರ್ಟಿಒ ಮತ್ತು ಪೊಲೀಸರೊಂದಿಗೆ ಸಭೆ ನಡೆಸುವ ಮೂಲಕ ವ್ಯವಸ್ಥಿತ ರೀತಿಯ ಪ್ರೀಪೆಯ್ಡಿ ಕೌಂಟರ್ಗೆ ಅವಕಾಶ ಕಲ್ಪಿಸಲಾಗುವುದು ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಪರಂಗಿಪೇಟೆ ಮತ್ತು ಬಂಟ್ವಾಳದಲ್ಲಿ ರೈಲ್ವೆ ಕ್ವಾಟ್ರಸ್ಗಳು ದುರ್ಬಳಕೆ ಆಗುತ್ತಿವೆ. ರಂಗಿಪೇಟೆ ಬಳಿಯ ರೈಲ್ವೇ ಕ್ವಾಟ್ರಸ್ ಪಾಳು ಬಿದ್ದಿದ್ದು, ಅನ್ಯ ಚಟುವಟಿಕೆಗಳಿಗೆ ಬಳಕೆಯಾಗುತ್ತಿದೆ. ರೈಲ್ವೇ ಇಲಾಖೆಗೆ ಸೇರಿದ ಸ್ಥಳದಲ್ಲಿ ಕೆಲವು ಅಂಗಡಿಗಳಾಗಿವೆ. ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ಸಾಮಾಗ್ರಿಗಳನ್ನು ತೂಕಕ್ಕೆ ಹಾಕದೆ ತೆರಿಗೆ ವಂಚಿಸಿ ನೇರವಾಗಿ ದೆಹಲಿ ಮುಂತಾದೆಡೆ ಸಾಗಿಸಲಾಗುತ್ತಿದೆ. ಮೀನಿನೊಂದಿಗೆ ಲಿಕ್ಕರ್ ಕೂಡ ಸಾಗಾಟ ಮಾಡಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಲಕ್ಷ್ಮೀನಾರಾಯಣ ಗಮನ ಸೆಳೆದರು.
ಅಪರ ಜಿಲ್ಲಾಧಿಕಾರಿ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ಪಾಲ್ಘಾಟ್ ಎಡಿಆರ್ಎಂ ರಾಜ್ಕುಮಾರ್, ಕೊಂಕಣ ರೈಲ್ವೆ ರೀಜಿನಲ್ ಇಂಜಿನಿಯರ್ ಆರ್.ಐ.ಪಾಟೀಲ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English